ಹೊಸಪೇಟೆ (ವಿಜಯನಗರ): ಕಳೆದ ಕೆಲವು ತಿಂಗಳಿಂದ ಹೊಸಪೇಟೆ ನಗರ ಹಾಗೂ ಸುತ್ತಮುತ್ತಲಿನ ಜನವಸತಿ ಪ್ರದೇಶಗಳಲ್ಲಿ ತಿರುಗಾಡುತ್ತಿದ್ದ ಹಾಗೂ ಆಗಾಗ ಕಾಣಿಸಿಕೊಳ್ಳುತ್ತಿದ್ದ ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ರಾತ್ರಿ ಕೊನೆಗೂ ನಗರದ ಹೊರವಲಯದ ಸಂಡೂರು ರಸ್ತೆಯಲ್ಲಿ ಸೆರೆ ಹಿಡಿದಿದ್ದಾರೆ.
ಸಂಡೂರು ರಸ್ತೆಯ ಅನ್ನಪೂರ್ಣಾ ಗ್ಯಾರೇಜ್ ಸಮೀಪ ಕರಡಿ ಮರವೇರಿ ಕುಳಿತಿದ್ದುದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಹೆಚ್ಚಿನ ಸಿಬ್ಬಂದಿಯನ್ನು ಕರೆಸಿ ಪ್ರದೇಶವನ್ನು ಸುತ್ತುವರಿದಿದ್ದರು. ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯದಿಂದ ಬಲೆ, ಪಂಜರ ತರಿಸಿ, ಪಶುವೈದ್ಯರನ್ನು ಕರೆಸಿ ಅರಿವಳಿಕೆ ಚುಚ್ಚುಮದ್ದು ನೀಡಿ ಮರದಲ್ಲೇ ಕರಡಿಯನ್ನು ಸೆರೆ ಹಿಡಿದು ಬೋನಿನಲ್ಲಿ ಇಟ್ಟರು.
‘ಈ ಗಂಡು ಕರಡಿ ಸುಮಾರು 70 ಕೆ.ಜಿ. ತೂಕ ಇದೆ. ಸಂಕ್ಲಾಪುರ, ಕಾರಿಗನೂರು, ರಾಜಾಪುರ, ಜೋಳದರಾಶಿ ಗುಡ್ಡ, ಜಂಬುನಾಥ ಬೆಟ್ಟಗಳಲ್ಲಿ ಓಡಾಡುತ್ತಿದ್ದುದು ಇದೇ ಕರಡಿಯಾಗಿತ್ತು. ಜನವಸತಿ ಪ್ರದೇಶಕ್ಕೆ ಇದು ಹೊಂದಿಕೊಂಡಂತಿತ್ತು, ಹೀಗಾಗಿ ಇದುವರೆಗೆ ಜನರ ಮೇಲೆ ದಾಳಿ ನಡೆಸಿಲ್ಲ. ಆದರೆ ಆಗಾಗ ಕಾಣಿಸಿಕೊಳ್ಳುತ್ತಿದ್ದ ಕಾರಣ ಜನರಲ್ಲಿ ಆತಂಕ ಇತ್ತು. ಅದನ್ನು ಸೆರೆಹಿಡಿಯಲು ಕೆಲವು ದಿನಗಳಿಂದ ಪ್ರಯತ್ನ ಮಾಡುತ್ತಲೇ ಇದ್ದೆವು, ಗುರುವಾರ ರಾತ್ರಿ 8.30ರಿಂದ 12.30ರ ನಡುವೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆದು ಅದು ಯಶಸ್ವಿಯಾಯಿತು’ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ (ಆರ್ಎಫ್ಒ) ಕೌಶಿಕ್ ದಳವಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.
ಕರಡಿಯ ಆರೋಗ್ಯ ತಪಾಸಣೆ ನಡೆಸಿ ಮೃಗಾಲಯದಲ್ಲಿ ಬಿಡಲಾಗುವುದು, ಅದರ ಚಲನವಲನ, ಜೀವನಕ್ರಮ ಅಭ್ಯಾಸ ಮಾಡಿಕೊಂಡು ಮುಂದೆ ಎಲ್ಲಿ ಬಿಡಬೇಕು ಎಂಬುದನ್ನು ಹಿರಿಯ ಅಧಿಕಾರಿಗಳು ನಿರ್ಧರಿಸಲಿದ್ದಾರೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.
ತಿಂಡಿಗೆ, ಎಣ್ಣೆಗೆ ಮನಸೋತಿದ್ದ ಕರಡಿ: ‘ಸಂಕ್ಲಾಪುರದಲ್ಲಿ ಕುರುಕಲು ತಿಂಡಿ ತಯಾರಿಸುವ ಫ್ಯಾಕ್ಟರಿ ಇದೆ. ಸಿಹಿತಿಂಡಿ ತಯಾರಿಕಾ ಘಟಕವೂ ಅಲ್ಲಿ ಇದೆ. ಜಂಬುನಾಥ ದೇವಸ್ಥಾನದಲ್ಲಿ ದೀಪಗಳಲ್ಲಿ ಇರುವ ಎಣ್ಣೆಯ ರುಚಿಯೂ ಕರಡಿಗೆ ಹತ್ತಿತ್ತು. ಇದೆಲ್ಲ ಕಾರಣ ಅದು ಕೆಲವು ತಿಂಗಳಿಂದ ಇಲ್ಲೇ ಸುತ್ತಮುತ್ತ ಓಡಾಟ ನಡೆಸುತ್ತಿತ್ತು, ಆದರೆ ಅದು ಇಲ್ಲಿಗೆ ಬಂದುದು ಎಲ್ಲಿಂದ? ಯಾಕಾಗಿ ಬಂತು ಎಂಬುದನ್ನು ಕಂಡುಕೊಳ್ಳುವುದು ಕಷ್ಟ’ ಎಂದು ಆರ್ಎಫ್ಒ ಕೌಶಿಕ್ ತಿಳಿಸಿದರು.
ಡಿಸಿಎಫ್ ಅನುಪಮಾ, ಮೃಗಾಲಯದ ಡಿಸಿಎಫ್ ರಾಜೇಶ್ ನಾಯ್ಕ್, ಎಸಿಎಫ್ ಭಾಸ್ಕರ್, ಆರ್ಎಫ್ಒ ಕೌಶಿಕ್ ದಳವಾಯಿ ಮಾರ್ಗದರ್ಶನದಲ್ಲಿ ಎಆರ್ಎಫ್ಒ ರಾಮಲಿಂಗಪ್ಪ, ಗಸ್ತು ಅರಣ್ಯಪಾಲಕ ವೆಂಕಪ್ಪ, ಪಶು ವೈದ್ಯಾಧಿಕಾರಿಗಳಾದ ವಾಣಿಶ್ರೀ, ಮಹೇಂದ್ರ, ಪ್ರಕೃತಿ ಅವರ ಸಹಕಾರದೊಂದಿಗೆ ಈ ಕಾರ್ಯಾಚರಣೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.