ADVERTISEMENT

ಕಂಪ್ಲಿ: ₹2 ಲಕ್ಷ ವೆಚ್ಚದಲ್ಲಿ ರಸ್ತೆ ದುರಸ್ತಿ ಮಾಡಿದ ರೈತರು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 6:02 IST
Last Updated 9 ನವೆಂಬರ್ 2025, 6:02 IST
ಕಂಪ್ಲಿ ತಾಲ್ಲೂಕು ದೇವಸಮುದ್ರ ಗ್ರಾಮದ ಹೊರವಲಯದಲ್ಲಿ ಹದಗೆಟ್ಟಿದ್ದ ಚಿಕ್ಕಜಾಯಗನೂರು ಕೂಡು ಮಾಗಾಣಿ ರಸ್ತೆಯನ್ನು ರೈತರು ₹2 ಲಕ್ಷ ವೆಚ್ಚದಲ್ಲಿ ಹಿಟಾಚಿ ಯಂತ್ರದಿಂದ ದುರಸ್ತಿ ಮಾಡಿಸಿಕೊಂಡಿದ್ದಾರೆ
ಕಂಪ್ಲಿ ತಾಲ್ಲೂಕು ದೇವಸಮುದ್ರ ಗ್ರಾಮದ ಹೊರವಲಯದಲ್ಲಿ ಹದಗೆಟ್ಟಿದ್ದ ಚಿಕ್ಕಜಾಯಗನೂರು ಕೂಡು ಮಾಗಾಣಿ ರಸ್ತೆಯನ್ನು ರೈತರು ₹2 ಲಕ್ಷ ವೆಚ್ಚದಲ್ಲಿ ಹಿಟಾಚಿ ಯಂತ್ರದಿಂದ ದುರಸ್ತಿ ಮಾಡಿಸಿಕೊಂಡಿದ್ದಾರೆ   

ಕಂಪ್ಲಿ: ತಾಲ್ಲೂಕಿನ ದೇವಸಮುದ್ರ ಗ್ರಾಮದ ಹೊರವಲಯದ ಹಳ್ಳದಿಂದ ಸಾಗುವ ಚಿಕ್ಕಜಾಯಗನೂರು ಕೂಡು ಮಾಗಾಣಿ ರಸ್ತೆ ಹದಗೆಟ್ಟಿದ್ದು, ರೈತರು ತಮ್ಮ ಸ್ವಂತ ಖರ್ಚಿನಲ್ಲಿ ದುರಸ್ತಿ ಮಾಡಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಪ್ರಸ್ತುತ ರಸ್ತೆ ಸುಮಾರು 3ಕಿ.ಮೀ ಇದ್ದು, ಚಿಕ್ಕಜಾಯಗನೂರು ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆ ಎರಡೂ ಬದಿಯಲ್ಲಿ ರೈತರ ಹೊಲ, ಗದ್ದೆಗಳಿವೆ. ಹೀಗಾಗಿ ಇದರ ಮೂಲಕ ರೈತರ ಟ್ರ್ಯಾಕ್ಟರ್, ಬಂಡಿಗಳು ತೆರಳಲು ಹರಸಾಹಸ ಪಡುತ್ತಿದ್ದರು.

ಪ್ರತಿ ಮುಂಗಾರಿನಲ್ಲಿ ಕೃಷಿ ಚಟುವಟಿಕೆ ಜೊತೆಗೆ ಕಟಾವು, ಒಕ್ಕಣೆ, ಫಸಲು ಸಾಗಿಸಲು ಸರ್ಕಸ್ ಮಾಡುವುದು ಸಾಮಾನ್ಯ. ಕೆಲವೊಮ್ಮೆ ಬೈಕ್ ಸವಾರರು ಆಯ ತಪ್ಪಿ ಬಿದ್ದು ಗಾಯಗೊಂಡಿರುವ ಉದಾಹರಣೆಗಳು ನಡೆದಿವೆ ಎಂದು ರೈತರು ಬೇಸರದಿಂದ ತಿಳಿಸಿದರು.

ADVERTISEMENT

ಹಾಲಿ ರಸ್ತೆಯನ್ನು ಕಳೆದ 10 ವರ್ಷಗಳ ಹಿಂದೆ ದುರಸ್ತಿ ಮಾಡಲಾಗಿತ್ತು. ಈ ವರ್ಷ ಅಧಿಕ ಪ್ರಮಾಣದ ಮಳೆ ಸುರಿದಿದ್ದರಿಂದ ರಸ್ತೆ ಇನ್ನಷ್ಟು ದುಸ್ಥಿತಿಗೆ ತಲುಪಿದೆ. ಸದ್ಯ ಭತ್ತ ಒಕ್ಕಣೆ ಮಾಡಿ ಮಾರುಕಟ್ಟೆಗೆ ಸಾಗಿಸಬೇಕಿರುವುದರಿಂದ ತಾತ್ಕಾಲಿಕ ದುರಸ್ತಿಗೆ ಮುಂದಾಗಿರುವುದಾಗಿ ರೈತರು ತಿಳಿಸಿದರು.

ಈ ರಸ್ತೆ ಅಕ್ಕ, ಪಕ್ಕದ ರೈತರೆಲ್ಲರೂ ಸೇರಿ ಸುಮಾರು ₹2 ಲಕ್ಷ ಸ್ವಂತ ಖರ್ಚು ಭರಿಸಿ ಹಿಟಾಚಿ ಯಂತ್ರದಿಂದ ರಸ್ತೆಯಲ್ಲಿ ಬಿದ್ದ ಗುಂಡಿಗಳನ್ನು ಕಲ್ಲು, ಮಣ್ಣಿನಿಂದ ಮುಚ್ಚಿ ಶುಕ್ರವಾರ ದುರಸ್ತಿ ಮಾಡಿರುವುದಾಗಿ ರೈತರಾದ ಅಳ್ಳಳ್ಳಿ ವೀರೇಶ, ಕಡೆಮನೆ ಮಂಜುನಾಥ, ಚಾನಾಳ್ ಸಿದ್ದಪ್ಪ, ಸೀನಯ್ಯ, ಖಾಸಿಂಸಾಬ್ ತಿಳಿಸಿದರು. ರೈತರ ಸಹಭಾಗಿತ್ವದಲ್ಲಿ ರಸ್ತೆ ದುರಸ್ತಿಯಾಗಿದ್ದು, ಸುತ್ತಲಿನ ಹಳ್ಳಿಗಳ ಜನರಿಂದ ಶ್ಲಾಘನೆಯ ಮಾತುಗಳು ಕೇಳಿ ಬಂದಿವೆ.

ಮುಂದಿನ ಮುಂಗಾರು ವೇಳೆಗೆ ಮುನ್ನ ಚುನಾಯಿತ ಪ್ರತಿನಿಧಿಗಳು ಈ ಮಾಗಾಣಿ ರಸ್ತೆ ಶಾಶ್ವತ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ರೈತರು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.