ADVERTISEMENT

ಸಿರುಗುಪ್ಪ | ಭತ್ತದ ಬೆಲೆ ಕುಸಿತ: ಸಂಕಷ್ಟದಲ್ಲಿ ರೈತರು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 4:38 IST
Last Updated 17 ನವೆಂಬರ್ 2024, 4:38 IST
ಸಿರುಗುಪ್ಪ ತಾಲ್ಲೂಕಿನ ಕೆಸರಕುಣೆ ಕ್ಯಾಂಪ್ ಹತ್ತಿರದ ರಸ್ತೆಯಲ್ಲಿ ಭತ್ತ ಒಣಗಿಸುವ ಕಾರ್ಯದಲ್ಲಿ ರೈತರು
ಸಿರುಗುಪ್ಪ ತಾಲ್ಲೂಕಿನ ಕೆಸರಕುಣೆ ಕ್ಯಾಂಪ್ ಹತ್ತಿರದ ರಸ್ತೆಯಲ್ಲಿ ಭತ್ತ ಒಣಗಿಸುವ ಕಾರ್ಯದಲ್ಲಿ ರೈತರು   

ಸಿರುಗುಪ್ಪ: ಭತ್ತದ ಬೆಲೆ ಕುಸಿದಿರುವ ಕಾರಣ ವೇದವತಿ ಹಗರಿ, ತುಂಗಭದ್ರಾ ನದಿ ಹಾಗೂ ಕೊಳವೆ ಬಾವಿ ನೀರು ಆಶ್ರಯಿಸಿ ಭತ್ತ ಬೆಳೆದಿರುವ ತಾಲ್ಲೂಕಿನ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಗಾಯದ ಮೇಲೆ ಬರೆ ಎಳೆಯುವಂತೆ ಈಚೆಗೆ ಸುರಿದ ಮಳೆಯಿಂದಲೂ ಕೆಲವೆಡೆ ಭತ್ತದ ಬೆಳೆ ಹಾಳಾಗಿದ್ದು, ರೈತರಿಗೆ ದಿಕ್ಕುತೋಚದಂತಾಗಿದೆ.

ತಾಲ್ಲೂಕಿನ ರೈತರು ಸಾಮಾನ್ಯವಾಗಿ ಸೋನಾ ಮಸೂರಿ, ಸೋನಾ, ನೆಲ್ಲೂರು ಸೋನ, ಗಂಗಾಕಾವೇರಿ, ಆರ್‌ಎನ್ಆರ್-ಎಂ.ಎಸ್.-2, ಆರ್.ಎನ್.ಆರ್.15048 ತಳಿಯ ಭತ್ತವನ್ನೇ ಹೆಚ್ಚಾಗಿ ಬೆಳೆಯುತ್ತಾರೆ. ಆದರೆ, ಸೂಕ್ತ ಬೆಲೆ ಲಭಿಸದ ಕಾರಣ ಯಾವ ಭತ್ತ ಬೆಳೆದರೂ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದಿಲ್ಲ ಎಂಬುದು ರೈತರ ಅಳಲಾಗಿದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಆರ್.ಎನ್.ಆರ್.15048 ಕ್ವಿಂಟಲ್‌ಗೆ ₹2100 ರಿಂದ ₹ 2200, ನೆಲ್ಲೂರು ಸೋನ, ಗಂಗಾಕಾವೇರಿ, ಸೋನಾ ಕ್ವಿಂಟಲ್‌ಗೆ ₹ 1800 ರಿಂದ ₹1850 ದರ ಇದೆ.

ಭತ್ತದ ಬೆಲೆ ಕಡಿಮೆ ಇರುವುದು ಒಂದು ಸಮಸ್ಯೆಯಾದರೆ, ರೈತರಿಂದ ಭತ್ತ ಖರೀದಿಸುವ ವ್ಯಾಪಾರಸ್ಥರು ಹಣ ನೀಡಲು ಅಲೆದಾಡಿಸುವುದು ಇನ್ನೊಂದು ಸಮಸ್ಯೆಯಾಗಿದೆ. ಅಧಿಕ ಬೆಲೆಯ ಆಮಿಷವೊಡ್ಡಿ ರೈತರಿಂದ ಭತ್ತ ಖರೀದಿಸುವ ವ್ಯಾಪಾರಸ್ಥರು ಇಲ್ಲವೇ ಖರೀದಿದಾರರು, ರೈತರಿಗೆ ಸಿಗದೇ ಓಡಾಡುತ್ತಾರೆ. ಇನ್ನೊಂದೆಡೆ ಮೋಸ ಮಾಡುವವರೂ ಇದ್ದಾರೆ ಎನ್ನುತ್ತಾರೆ ರೈತರು.

ADVERTISEMENT

‘ಭತ್ತದ ಕೊಯ್ಲಿನ ಬಳಿಕ ಚೆನ್ನಾಗಿ ಒಣಗಿಸಿ, ಸಂಗ್ರಹಿಸಬೇಕಾಗುತ್ತದೆ. ಈ ಪ್ರಕ್ರಿಯೆ ಅಷ್ಟು ಸುಲಭವಲ್ಲ. ಹಾಗಾಗಿ, ಯಾವ ರೈತರೂ ಇಷ್ಟೊಂದು ರಿಸ್ಕ್ ತೆಗೆದುಕೊಳ್ಳಲು ಮುಂದಾಗುವುದಿಲ್ಲ. ಜತೆಗೆ ಸಾಲಸೋಲ ಮಾಡಿ ಭತ್ತ ಬೆಳೆದಿರುವುದರಿಂದ, ಸಂಗ್ರಹಿಸುವುದಿಲ್ಲ ಎಂಬುದು ರೈತರ ಅಳಲಾಗಿದೆ. ಸರ್ಕಾರ ಭತ್ತಕ್ಕೆ ಬೆಂಬಲ ನೀಡಬೇಕು‘ ಎಂಬುದು ರೈತರ ಆಗ್ರಹವಾಗಿದೆ.

‘ತಾಲ್ಲೂಕಿನಲ್ಲಿ ಈ ಹಿಂದೆ ಭತ್ತದ ವ್ಯಾಪಾರಿಯೊಬ್ಬರು ನೂರಾರು ರೈತರಿಗೆ ಭತ್ತದ ಬಾಬತ್ತಿನ ಹಣ ಇನ್ನೂ ಕೊಟ್ಟಿಲ್ಲ. ರೈತ ಸಂಘದ ನೇತೃತ್ವದಲ್ಲಿ ವ್ಯಾಪಾರಿಯ ಮನೆ ಎದುರು ಧರಣಿ ನಡೆಸಿದರೂ ಪ್ರಯೋಜನವಾಗಲಿಲ್ಲ. ಇದು ನೋವಿನ ಸಂಗತಿ‘ ಎನ್ನುತ್ತಾರೆ ರೈತ ಸಂಘದ ಅಧ್ಯಕ್ಷ ವಿ.ಮಾರುತಿ.

ಏಕಾಏಕಿ ಭತ್ತದ ಬೆಲೆ ಕುಸಿದ ಸಂದರ್ಭದಲ್ಲಿ ಭತ್ತ ಖರೀದಿದಾರರೂ ಅಸಹಾಯಕರಾಗುತ್ತಾರೆ. ಭತ್ತದ ಬೆಲೆ ಕುಸಿದ ವೇಳೆ ಖರೀದಿ ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತದೆ.
-ಹೆಸರು ಹೇಳದ ಭತ್ತದ ವ್ಯಾಪಾರಿ ಸಿರುಗುಪ್ಪ
ಎಲ್ಲ ಕೃಷಿ ಉತ್ಪನ್ನಗಳಿಗೆ ಪ್ರೊ.ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ಯಾವುದೇ ಷರತ್ತು ವಿಧಿಸದಂತೆ ರೈತರಿಂದ ಭತ್ತ ಖರೀದಿಸಬೇಕು.
-ದೇಶನೂರು ಮಂಜುನಾಥ, ಪ್ರಗತಿಪರ ರೈತ ಸಿರುಗುಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.