
ಸಾದರ ಸ್ವೀಕಾರ
ಸಂಡೂರು: ತಾಲ್ಲೂಕಿನ ಬನ್ನಿಹಟ್ಟಿ ಗ್ರಾಮದ ಗ್ರಾಮ ಪಂಚಾಯಿತಿಗೆ ಸೇರಿದ ಸರ್ಕಾರಿ ನಿವೇಶನದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡಲು ಭೂಮಿ ಪೂಜೆ ನೆರವೇರಿಸುವ ವಿಚಾರದಲ್ಲಿ ಪಂಚಾಯಿತಿ ಅಧಿಕಾರಿಗಳ, ಖಾಸಗಿ ವ್ಯಕ್ತಿಗಳ ನಡುವೆ ನಡೆದ ಮಾತಿನ ಚಕಮಕಿ, ಗಲಾಟೆಯ ವಿಷಯಕ್ಕೆ ಸಂಬಂಧಪಟ್ಟಂತೆ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಗ್ರಾಮ ಪಂಚಾಯಿತಿಗೆ ಸೇರಿದ ನಿವೇಶನದಲ್ಲಿ ನೂತನ ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡಲು ಪಂಚಾಯಿತಿ ಅಧಿಕಾರಿಗಳು ಗುತ್ತಿಗೆದಾರರ ಸಮ್ಮುಖದಲ್ಲಿ ಗುರುವಾರ ಭೂಮಿ ಪೂಜೆ ನೆರವೇರಿಸುವಾಗ ಬನ್ನಿಹಟ್ಟಿ ಗ್ರಾಮದ ಚಂದ್ರೆಗೌಡ, ಹನುಮನಗೌಡ ಇತರರು ಭೂಮಿ ಪೂಜೆ ಮಾಡಬಾರದು ಎಂದು ವಾದ ಮಾಡಿದ್ದಾರೆ. ನಂತರ ಅದೇ ಗ್ರಾಮದ ಜನರು ನೂತನ ಕಟ್ಟಡವನ್ನು ಇದೇ ಸ್ಥಳದಲ್ಲೆ ನಿರ್ಮಾಣ ಮಾಡಬೇಕು ಎಂದು ಅಧಿಕಾರಿಗಳ ಬಳಿ ವಾದ ಮಾಡಿದ್ದಾರೆ.
ಗ್ರಾಮ ಪಂಚಾಯಿತಿ ಅಧಿಕಾರಿಗಳು ತಹಶೀಲ್ದಾರ್ ಅನಿಲ್ ಕುಮಾರ್ ಜಿ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನಬಸಪ್ಪ ಸೇರಿದಂತೆ ಇತರೆ ತಾಲ್ಲೂಕು ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಶುಕ್ರವಾರ ಬೆಳಿಗ್ಗೆ ನಿವೇಶನ ಸ್ಥಳಕ್ಕೆ ತೆರಳಿ, ಮತ್ತೆ ಭೂಮಿ ಪೂಜೆ ಮಾಡುವಾಗ ಬನ್ನಿಹಟ್ಟಿ ಗ್ರಾಮದ ಜಗದೀಶ್ ಸೇರಿದಂತೆ ಇತರರು ಅಡ್ಡಿಪಡಿಸಿದ್ದಾರೆ.
ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಜಗದೀಶ್, ಜಿ.ಟಿ.ಪಂಪಾಪತಿ, ವಿರೇಶರೆಡ್ಡಿ, ಚಂದ್ರಗೌಡ, ಹನುಮನಗೌಡ, ಗಿರೀಶ್, ಸಂತೋಷ್, ರಾಮಯ್ಯ ಸೇರಿದಂತೆ ಒಟ್ಟು 12 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಬನ್ನಿಹಟ್ಟಿ ಗ್ರಾಮ ಪಂಚಾಯಿತಿ ಪಿಡಿಒ ಸದಾಶಿವಪ್ಪ ಸಿ ತೆಗ್ಗಿ ಅವರ ನೀಡಿದ ದೂರು ಆದರಿಸಿ ಶುಕ್ರವಾರ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.