
ಹಂಪಿ ಅಷ್ಟಭುಜ ಸ್ನಾನದ ಕೊಳದ ಬಳಿ ಗುಡ್ಡ ಏರುವಾಗ ಬಿದ್ದು ಫ್ರಾನ್ಸ್ ಪ್ರಜೆ ಫಜೀತಿ
ಹೊಸಪೇಟೆ (ವಿಜಯನಗರ): ಹಂಪಿಯ ಅಷ್ಟಭುಜ ಸ್ನಾನದ ಕೊಳ ಸಮೀಪದ ಗುಡ್ಡದ ಹತ್ತಲು ಯತ್ನಿಸಿ ಕಾಲು ಜಾರಿ ಬಿದ್ದಿದ್ದ ಫ್ರಾನ್ಸ್ನ ಪ್ರವಾಸಿಗರೊಬ್ಬರನ್ನು ಎರಡು ದಿನಗಳ ಬಳಿಕ ಗಮನಿಸಿ ಕೊಪ್ಪಳ ಆಸ್ಪತ್ರೆಗೆ ದಾಖಲಿಸಿದ ಪ್ರಸಂಗ ನಡೆದಿದೆ.
ಡಿ.24ರಂದು ಸಂಜೆ 6 ಗಂಟೆಗೆ ಗುಡ್ಡ ಹತ್ತಲು ಯತ್ನಿಸಿದ್ದ ಬ್ರೂನೊ ರೋಜರ್ (52) ಕಾಲು ಜಾರಿ ಬಿದ್ದಿದ್ದರು. ಅದು ನಿರ್ಜನ ಪ್ರದೇಶವಾಗಿತ್ತು. ಕಾಲಿಗೆ ತೀವ್ರ ಗಾಯಗೊಂಡಿದ್ದ ಅವರು ಎರಡು ದಿನ ಅಲ್ಲೇ ಇದ್ದರು. ಬಳಿಕ ಹೇಗೋ ತೆವಳಿಕೊಂಡು ಸಮೀಪದ ಬಾಳೆ ತೋಟಕ್ಕೆ ಶುಕ್ರವಾರ ಬಂದಿದ್ದರು. ಸ್ಥಳೀಯ ರೈತರು ಅವರನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಪೊಲೀಸರು ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್ಐ) ಅಧಿಕಾರಿಗಳನ್ನು ಅವರನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದರು.
ಫ್ರಾನ್ಸ್ನಿಂದ ಏಕಾಂಗಿಯಾಗಿ ಬಂದಿದ್ದ ರೋಜರ್ ಅವರು ಕಡ್ಡಿರಾಂಪುರದ ಹೋಂ ಸ್ಟೇ ಒಂದರಲ್ಲಿ ತಂಗಿದ್ದರು ಎನ್ನಲಾಗಿದೆ. ಸದ್ಯ ಪ್ರವಾಸಿಗ ಮಾತನಾಡುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.