ADVERTISEMENT

ಹಂಪಿ ಕನ್ನಡ ವಿ.ವಿ: ಬೋಧಕ ಹುದ್ದೆಗಳ ಹರಾಜು; ‘ಆರೋಪ ಮಾಡಿದವರ ವಿರುದ್ಧ ಮೊಕದ್ದಮೆ’

ಹಂಪಿ ಕನ್ನಡ ವಿ.ವಿ.ಯಲ್ಲಿ ಬೋಧಕ ಹುದ್ದೆಗಳ ಹರಾಜು ಆರೋಪಕ್ಕೆ ಕುಲಪತಿ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 20:25 IST
Last Updated 29 ನವೆಂಬರ್ 2021, 20:25 IST
ಪ್ರೊ.ಸ.ಚಿ. ರಮೇಶ
ಪ್ರೊ.ಸ.ಚಿ. ರಮೇಶ   

ಹೊಸಪೇಟೆ (ವಿಜಯನಗರ): ‘ಬೋಧಕ ಹುದ್ದೆಗಳನ್ನು ಹರಾಜು ಮಾಡಲಾಗುತ್ತಿದೆ ಎಂದು ನನ್ನ ವಿರುದ್ಧ ಗುರುತರ ಆರೋಪ ಮಾಡಿರುವವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ. ರಮೇಶ ತಿಳಿಸಿದರು.

‘ನೇಮಕಾತಿ ಪ್ರಕ್ರಿಯೆಯೇ ಆರಂಭವಾಗಿಲ್ಲ. ಈಗಲೇ ಹರಾಜು ಮಾಡಲಾಗುತ್ತಿದೆ ಎಂದು ವಿನಾಕಾರಣ ಆರೋಪಿಸುತ್ತಿರುವುದು ಸರಿಯಲ್ಲ. ಮೀಸಲಾತಿ ನಿಗದಿಗೊಳಿಸಲು ಸಮಾಜ ಕಲ್ಯಾಣ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ನನ್ನ ವಿರುದ್ಧದ ಆರೋಪಕ್ಕೆ ಸಾಕ್ಷ್ಯ ಒದಗಿಸಲಿ. ಇಲ್ಲದಿದ್ದರೆ ವಿನಾಕಾರಣ ತೇಜೋವಧೆ ಆಗುತ್ತದೆ. ಜತೆಗೆ ಕನ್ನಡ ವಿಶ್ವವಿದ್ಯಾಲಯಕ್ಕೆ ಕೆಟ್ಟ ಹೆಸರು ಬರುತ್ತದೆ’ ಎಂದು ಸೋಮವಾರ ವಿಶ್ವವಿದ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಇತ್ತೀಚೆಗೆ ನಡೆದ ನೌಕರರ ಸಂಘದ ಸಭೆಯಲ್ಲಿ ಡಾ. ಸಂಪತ್‌ ಕುಮಾರ್‌ ತೆಗ್ಗಿ ಅವರು, ‘ಸಂಬಳ ಬಿಡುಗಡೆಗೆ ಕಮಿಷನ್‌ ಪಡೆದಿದ್ದಾರೆ’ ಎಂದು ಆರೋಪಿಸಿದ್ದರು.

ADVERTISEMENT

‘ವಂಚನೆ ಪ್ರಕರಣದ ತನಿಖೆ’

‘ವಿಶ್ರಾಂತ ಕುಲಪತಿ ಮಲ್ಲಿಕಾ ಎಸ್‌. ಘಂಟಿ ಅವರ ಅವಧಿಯಲ್ಲಿ ಆಗಿರುವ ವಂಚನೆ ಪ್ರಕರಣವನ್ನು ಸರ್ಕಾರದೊಂದಿಗೆ ಚರ್ಚಿಸಿ, ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸುತ್ತೇನೆ’ ಎಂದು ಕುಲಪತಿ ಪ್ರೊ. ಸ.ಚಿ. ರಮೇಶ ತಿಳಿಸಿದರು.

‘2018–19ನೇ ಸಾಲಿನಲ್ಲಿ ಖರ್ಚಾದ ₹23.18 ಕೋಟಿ ಹಣಕ್ಕೆ ಲೆಕ್ಕ ಪತ್ರ ಇಲಾಖೆಯು ಆಕ್ಷೇಪ ವ್ಯಕ್ತಪಡಿಸಿದೆ. ಆ ಸಂದರ್ಭದಲ್ಲಿ ಬಿಲ್‌ ಪಾಸ್‌ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದಿಂದ ₹2.33 ಕೋಟಿ ವಸೂಲಾತಿಗೆ ಸೂಚಿಸಿದೆ. ಭ್ರಷ್ಟಾಚಾರ ಮಾಡಿದವರೇ ಭ್ರಷ್ಟಾಚಾರದ ಹೆಸರಲ್ಲಿ ಹೋರಾಟಕ್ಕಿಳಿದಿರುವುದು ವಿಪರ್ಯಾಸ’ ಎಂದರು.

* ನಾನು ಯಾರಿಗಾದರೂ ಹಣಕ್ಕೆ ಬೇಡಿಕೆಯಿಟ್ಟರೆ ಲೋಕಾಯುಕ್ತ ಅಥವಾ ಎಸಿಬಿಗೆ ದೂರು ಕೊಡಬಹುದು. ನಿರಾಧಾರ ಆರೋಪ ಸರಿಯಲ್ಲ.

–ಪ್ರೊ. ಸ.ಚಿ. ರಮೇಶ, ಕುಲಪತಿ, ಹಂಪಿ ಕನ್ನಡ ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.