
ಹಂಪಿ (ವಿಜಯನಗರ): ಹಂಪಿ ಉತ್ಸವದ ಕೊನೆಯ ದಿನ ಭಾನುವಾರ ಶಿವರಾತ್ರಿ ಜಾಗರಣೆ ಸಮಯದಲ್ಲಿ ಪ್ರಧಾನ ವೇದಿಕೆಗೆ ಬಂದ ಮಂಗ್ಲಿ ಹಾಗೂ ಬಳಿಕ ಬಂದ ರಘು ದೀಕ್ಷಿತ್ ಶಿವನನ್ನು ಸ್ತುತಿಸುವ ಹಾಡುಗಳ ಜತೆಯಲ್ಲೇ ತಮ್ಮ ಜನಪ್ರಿಯ ಹಾಡುಗಳನ್ನೂ ಹಾಡಿದರು. ಪ್ರೇಕ್ಷಕರು ಕುರ್ಚಿಯ ಮೇಲೆಯೇ ನಿಂತು ತಾಂಡವ ನೃತ್ಯ ಮಾಡಿಬಿಟ್ಟರು.
ತೆಲುಗು ಕಲಾವಿದೆ ಮಂಗ್ಲಿ ಅವರು ಹಂಪಿಗೆ ಬಹಳ ಬೇಗ ಇಷ್ಟವಾದಂತಿತ್ತು. ಅವರ ತೆಲುಗು ಮಿಶ್ರಿತ ಕನ್ನಡವನ್ನು ಜನ ಬಹಳ ಪ್ರೀತಿಯಿಂದ ಸ್ವೀಕರಿಸಿದರು. ಜತೆಗೆ ಅವರ ಹಾಡುಗಳನ್ನು ಸಹ ಅಷ್ಟೇ ಚೆಂದವಾಗಿ ಆಸ್ವಾದಿಸಿದರು.
ಆಂಧ್ರದ ಸಾಂಪ್ರದಾಯಿಕ ವೇಷಭೂಷಣಗಳಲ್ಲಿ ಕಾಣಿಸಿಕೊಂಡ ಮಂಗ್ಲಿ ಕನ್ನಡಿಗರಿಗೆ ಕೃತಜ್ಞತೆ ಸಲ್ಲಿಸಿದರು, ಜೀವ ಇರುವವರೆಗೂ ಋಣಿ ಎಂದರು. ‘ಯಾವನೊ ಇವನು ಗಿಲಕ್ಕು ಎಲ್ಲಿಂದ ಬಂದ ಗಿಲ್ಲಕ್ಕು’ ಎನ್ನುವ ಹಾಡಿನೊಂದಿಗೆ ರಸಸಂಜೆ ಆರಂಭಿಸಿ ನೆರೆದಿದ್ದವರನ್ನು ತಮ್ಮ ತಮ್ಮ ಆಸನಗಳಲ್ಲಿ ಏರಿಸಿ ಕುಣಿಸಿದರು.
ತೆಲುಗಿನ ಜಾನಪದ ಗೀತೆ ಡಂಗುರ ಓಂ ನಮಃ ಶಿವಾ ಎಂದು ಹಾಡುವ ಮೂಲಕ ಮಹಾಶಿವರಾತ್ರಿಗೆ ಭಕ್ತಿ ನೈವೇದ್ಯ ಸಲ್ಲಿಸಿದರು. ‘ಕಣ್ಣು ಹೊಡೆಯಾಕ’ ಎಂದು ಹಾಡಿ ನೆರೆದಿದ್ದ ಪಡ್ಡೆ ಹುಡುಗರನ್ನೆಲ್ಲಾ ಕುಣಿಸಿದರು.
‘ನೋಡ್ತಾ ನೋಡ್ರಾ ಆಗೋಯ್ತಿ ಶಾನೆ ಪೀರುತಿ’ ಹಾಡನ್ನಾಡಿ ಎಲ್ಲ ವಯೋಮಾನದರಿಗೂ ಇಷ್ಟವಾದರು. ‘ಟೇಕ್ ಇಟ್ ಪುಷ್ಪವತಿ’ ಹಾಡಿನ ಜತೆಗೆ ತಾವೂ ಹೆಜ್ಜೆಗಳನ್ನಾಕಿದರು, ಈ ಹಾಡಿಗೆ ಎಲ್ಲರೂ ಹುಚ್ಚೆದ್ದು ಕುಣಿದರು. ತೆಲುಗಿನಲ್ಲಿ ಭಾರಿ ದಾಖಲೆ ಸೃಷ್ಠಿಸಿದ ‘ಬಾಯಲೋನಿ ಬಲಿ ಪಡಿಕಿ’ ಜಾನಪದ ಗೀತೆಯನ್ನು ಹಾಡಿದರು. ‘ಎಕ್ಕಸಕ ಎಕ್ಕಸಕ’ ಹಾಡನ್ನು ಹಾಡಲು ಸಹ ಮರೆಯಲಿಲ್ಲ.
‘ಬೊಂಬೆ ಹೇಳುತೈತೆ‘ ಹಾಗೂ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು‘, ‘ಕಾಣದಂತೆ ಮಾಯವಾದನು‘, ಜೋಗಿ ಚಲನಚಿತ್ರದ ‘ಅಂದು ಕುಣೀರೊ’ ಗೀತೆಗಳನ್ನು ಹಾಡಿ ಖುಷಿಪಡಿಸಿದರು.
ರಘು ದೀಕ್ಷಿತ್: ಖ್ಯಾತ ಗಾಯಕ ರಘು ದೀಕ್ಷಿತ್ ಅವರು ವೇದಿಕೆಗೆ ಬಂದಾಗ ರಾತ್ರಿ 11 ಕಳೆದಿತ್ತು. ತಮ್ಮ ಎಂದಿನ ಸಾಂಪ್ರದಾಯಿಕ ಉಡುಗೆಯಲ್ಲಿ ಇಡೀ ತಂಡವನ್ನು ಪರಿಚಯಿಸಿ, ತಾವೊಬ್ಬ ಮಹಾನ್ ಕಲಾವಿದ ಎಂಬುದನ್ನು ತಮ್ಮ ಹಾಡುಗಳ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದರು.
‘ನಿನ್ನ ಪೂಜೆಗೆ ಬಂದೆ ಮಹದೇಶ್ವರ’ ಹಾಡನ್ನು ಪ್ರೇಕ್ಷಕರಿಂದಲೂ ಹಾಡಿಸಿದ ಅವರು, ಅದಕ್ಕೆ ಮೊದಲಾಗಿ ಹಲವು ಹಿಟ್ ಹಾಡುಗಳನ್ನು ಹಾಗೂ ತಾವು ಹೊಸದಾಗಿ ಹೊರತಂದಿರುವ ಆಲ್ಬಂ ಹಾಡನ್ನು ಸಹ ಪ್ರಸ್ತುಪಡಿಸಿದರು.
ರಾತ್ರಿ 12.30ರ ವೇಳೆಗೆ ಹಂಪಿ ಉತ್ಸವಕ್ಕೆ ತೆರೆ ಬಿತ್ತು. ಜನ ಆಗಲೂ ದೊಡ್ಡ ಸಂಖ್ಯೆಯಲ್ಲೇ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.