
ಹಂಪಿ ಉತ್ಸವ
ಹಿರಿಯ ನಾಗರಿಕರಿಗೆ ಸಂಚಾರ ವ್ಯವಸ್ಥೆ | ಹೆಚ್ಚುವರಿ ಬಸ್ ಓಡಿಸಲು ಕ್ರಮ | 8 ವೈದ್ಯಕೀಯ ಸ್ಟಾಲ್ ನಿರ್ಮಾಣ
ಹೊಸಪೇಟೆ (ವಿಜಯನಗರ): ಹಂಪಿ ಉತ್ಸವದಲ್ಲಿ ಈ ಬಾರಿ ಖ್ಯಾತ ಗಾಯಕರಾದ ಶ್ರೇಯಾ ಘೋಷಾಲ್, ಸಂಜಿತ್ ಹೆಗ್ಡೆ, ನಟ, ನಟಿಯರಾದ ಡಾಲಿ ಧನಂಜಯ, ಧ್ರುವ ಸರ್ಜಾ, ರಚಿತಾ ರಾಂ, ರುಕ್ಮಿಣಿ ವಸಂತ್ ಆಕರ್ಷಣೆ ಇರಲಿದ್ದು, ಕೃತಕ ಮೃಗಾಲಯ, ವಿಜಯುನಗರ ವೈಭವ ಸಾರುವ ಸ್ತಬ್ಧಚಿತ್ರಗಳು ಗಮನ ಸೆಳೆಯಲಿವೆ.
ಇಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ವಿಷಯ ತಿಳಿಸಲಾಯಿತು.
ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಗಳನ್ನು ಯಾವುದೇ ಲೋಪದೋಷವಿಲ್ಲದೆ ನಿರ್ವಹಿಸಬೇಕು. ಈಗಾಗಲೇ 21 ಉಪ ಸಮಿತಿಗಳನ್ನು ರಚಿಸಲಾಗಿದೆ. ಸೆಲೆಬ್ರೆಟಿಗಳಿಗೆ ಊಟ, ವಸತಿಯಲ್ಲಿ ಯಾವ ಕೊರತೆಯೂ ಆಗಬಾರದು. ನೆರೆ ಜಿಲ್ಲೆಗಳಿಂದ ಬರುವ ಪ್ರವಾಸಿಗರಿಗಾಗಿ ಕೆಎಸ್ಆರ್ಟಿಸಿ ವತಿಯಿಂದ ಹೆಚ್ಚಿನ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ರಸ್ತೆ ದುರಸ್ತಿ: ಹಂಪಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿನ ಅಪಾಯಕಾರಿ ಹೊಂಡಗಳನ್ನು ತಕ್ಷಣ ಮುಚ್ಚಲು ಕ್ರಮ ಕೈಗೊಳ್ಳಬೇಕು, ರಸ್ತೆ ಬದಿಯ ಗಿಡಗಂಟಿಗಳನ್ನು ಸಹ ತೆರವುಗೊಸಬೇಕು, ಹಿರಿಯನಾಗರಿಕರಿಗೆ ವಿಶೇಷ 'ಪಿಕಪ್ ಮತ್ತು ಡ್ರಾಪ್' ವ್ಯವಸ್ಥೆಯನ್ನು ಪ್ರಾದೇಶಿಕ ಸಾರಿಗೆ ಇಲಾಖೆ ಮಾಡಲಿದೆ ಎಂದು ಸಭೆಗೆ ತಿಳಿಸಲಾಯಿತು.
ಜಿಲ್ಲಾ ಪಂಚಾಯಿತಿ ವತಿಯಿಂದ ಸ್ವಚ್ಛತೆ, ಕುಡಿಯುವ ನೀರು ಮತ್ತು ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡುವಂತೆ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ತಿಮ್ಮಪ್ಪ ಅವರಿಗೆ ಸೂಚಿಸಲಾಯಿತು. ಜನರ ಆರೋಗ್ಯ ರಕ್ಷಣೆಗಾಗಿ ಉತ್ಸವದ ಸ್ಥಳದಲ್ಲಿ 8 ವೈದ್ಯಕೀಯ ಸ್ಟಾಲ್ಗಳು ಹಾಗೂ 108 ಅಂಬುಲೆನ್ಸ್ ಸದಾ ಸಿದ್ಧವಿರಲಿವೆ ಎಂದು ಸಹ ತಿಳಿಸಲಾಯಿತು.
ಜಿಲ್ಲಾ ಪಂಚಾಯಿತಿ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಷಾ, ಎಸ್ಪಿ ಎಸ್.ಜಾಹ್ನವಿ, ಎಡಿಸಿ ಇ.ಬಾಲಕೃಷ್ಣಪ್ಪ, ಡಿಸಿಎಫ್ ಎಚ್.ಅನುಪಮ ಇತರರು ಇದ್ದರು.
ಸಾಹಸ ಕ್ರೀಡೆ
ಮನರಂಜನೆ ಪ್ರತಿ ವರ್ಷದಂತೆ ಈ ಬಾರಿಯೂ ಸಾಹಸ ಕ್ರೀಡೆ ಶಿಲ್ಪಕಲೆ ರಂಗೋಲಿ ಸ್ಪರ್ಧೆ ಹಾಗೂ ಕವಿಗೋಷ್ಠಿ ವಿಚಾರಗೋಷ್ಠಿಗಳು ಇರಲಿವೆ. ಗಾಳಿಪಟ ಉತ್ಸವ ಈ ಬಾರಿ ಹೊಸದಾಗಿ ಸೇರ್ಪಡೆ ಎಂದು ಸಭೆಗೆ ತಿಳಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.