
ಹೊಸಪೇಟೆ (ವಿಜಯನಗರ): ಹಂಪಿ ಭಾಗದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ, ವಿಜಯನಗರ ಅರಸರು ನಿರ್ಮಿಸಿರುವ ಕಮಲಾಪುರ ಕೆರೆಯಲ್ಲಿ ಇನ್ನು ಮುಂದೆ ಕಾಯಂ ನೌಕಾವಿಹಾರ (ಬೋಟಿಂಗ್) ಆರಂಭವಾಗಲಿದ್ದು, ಡಿಸೆಂಬರ್ 6ರ ಸುಮಾರಿಗೆ ಇದು ಕಾರ್ಯಗತಗೊಳ್ಳುವ ನಿರೀಕ್ಷೆ ಇದೆ.
ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಸುರೇಶ್ ನಾಯ್ಕ್ ಎಂಬುವವರು ದೋಣಿ ವಿಹಾರ ಆರಂಭಿಸುವ ಆಸಕ್ತಿ ತೋರಿಸಿದ್ದು, ಹಂಪಿ ವಿಶ್ವಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರ (ಹವಾಮ) ಇದಕ್ಕೆ ಸಮ್ಮತಿ ಸೂಚಿಸಿದೆ. ಬರುವ ಆದಾಯ 80:20 ಅನುಪಾತದಲ್ಲಿ ಬೋಟ್ ಮಾಲೀಕರಿಗೆ ಮತ್ತು ಹವಾಮಾಕ್ಕೆ ಹಂಚಿಕೆಯಾಗಲಿದೆ. ತಿಂಗಳಿಗೆ ₹5 ಲಕ್ಷಕ್ಕಿಂತ ಅಧಿಕ ಆದಾಯ ಬಂದರೆ 75;25 ಅನುಪಾತದಲ್ಲಿ ಹಂಚಿಕೆ ಆಗಲಿದೆ. ಈ ನಿಟ್ಟಿನಲ್ಲಿ ಒಪ್ಪಂದ ಆಗಿದೆ.
ಸೋಲಾರ್–ಬ್ಯಾಟರಿ ಚಾಲಿತ ಬೋಟ್: ಆರಂಭದಲ್ಲಿ 8 ಆಸನದ ಒಂದು ಮತ್ತು 16 ಆಸನದ ಇನ್ನೊಂದು ಬೋಟ್ ಇಲ್ಲಿ ನೀರಿಗಿಳಿಯಲಿದೆ. ಕಾರವಾರ ಬಂದರು ಪ್ರದೇಶದಲ್ಲಿ ಇದರ ನಿರ್ಮಾಣ ಕಾರ್ಯ ಇದೀಗ ನಡೆಯುತ್ತಿದ್ದು, ನಾಲ್ಕೈದು ದಿನದೊಳಗೆ ಕಮಲಾಪುರ ಕೆರೆ ಸಮೀಪಕ್ಕೆ ತರುವ ನಿರೀಕ್ಷೆ ಇದೆ. ಈ ದೋಣಿಗಳು ಸೌರವಿದ್ಯುತ್ ಫಲಕಗಳನ್ನು ಹೊಂದಿದ್ದು, ಅದರಿಂದ ಸಂಗ್ರಹವಾಗುವ ಬ್ಯಾಟರಿಯಲ್ಲಿ ಚಲಿಸಲಿದೆ.
ಹೊಸ ಜಲವಿಹಾರ ಮಾನದಂಡದಂತೆ ಪೆಟ್ರೋಲ್, ಡೀಸೆಲ್ ಆಧರಿತ ದೋಣಿಗಳನ್ನು ಚಲಾಯಿಸುವಂತಿಲ್ಲ. ಹೀಗಾಗಿ ಸೌರಶಕ್ತಿ ಮತ್ತು ಚಾರ್ಜಿಂಗ್ ಆಧರಿತ ಬ್ಯಾಟರಿಗಳನ್ನು ಬಳಸಿ ಬೋಟ್ ಓಡಿಸುವುದು ಅನಿವಾರ್ಯವಾಗಿದೆ.
‘ಸದ್ಯ ಎರಡು ಬೋಟ್ಗಳು ಕಾಯಂ ಆಗಿ ಇಲ್ಲಿ ಸೇವೆ ನೀಡಲಿವೆ, ಕೆರೆ ದಡದ ಚಿಕ್ಕ ದೇವಸ್ಥಾನದ ಬಳಿ ಜೆಟ್ಟಿ ನಿರ್ಮಾಣವಾಗಲಿದೆ.ಕೆರೆಯ ಮಧ್ಯಭಾಗದಲ್ಲಿ ಕಿಟ್ಟಿಪಾರ್ಟಿ ನಡೆಸುವುದಕ್ಕೆ ಅನುಕೂಲವಾಗುವ ರೀತಿಯಲ್ಲಿ ತೇಲುವ ಜೆಟ್ಟಿ ಸಹ ನಿರ್ಮಾಣವಾಗಲಿದೆ. ಪ್ರವಾಸಿಗರ ಸ್ಪಂದನ ಆಧರಿಸಿ ಬೋಟ್ಗಳ ಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಬಹುದು, ಗುತ್ತಿಗೆ ಪಡೆದ ಕಂಪನಿ ದರ ನಿಗದಿಪಡಿಸಲಿದ್ದು, ಇನ್ನೂ ಅದು ನಿರ್ಧಾರವಾಗಿಲ್ಲ’ ಎಂದು ‘ಹವಾಮ’ ಆಯುಕ್ತ ರಮೇಶ್ ವಟಗಲ್ ‘ಪ್ರಜಾವಾಣಿ’ಗೆ ತಿಳಿಸಿದರು.
ಹಂಪಿಗೆ ಬರುವ ಪ್ರವಾಸಿಗರಿಗೆ ಇಲ್ಲಿ ಇರುವ ಸಂಪನ್ಮೂಲದಲ್ಲೇ ಇನ್ನಷ್ಟು ಆಕರ್ಷಣೆ ಸೃಷ್ಟಿಸಬೇಕಿದೆ ಅದಕ್ಕಾಗಿ ಕಾಯಂ ಬೋಟಿಂಗ್ ಸೌಲಭ್ಯ ಕಲ್ಪಿಸಲಾಗುತ್ತಿದೆರಮೇಶ್ ವಟಗಲ್ ಆಯುಕ್ತ ಹವಾಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.