ADVERTISEMENT

ಯಾವುದೇ ಖಾತೆ ಕೊಟ್ಟರೂ ಆನಂದ್ ಸಿಂಗ್ ನಿಭಾಯಿಸುತ್ತಾರೆ: ಸಂತೋಷ್‌ ಲಾಡ್‌

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 10:11 IST
Last Updated 12 ಆಗಸ್ಟ್ 2021, 10:11 IST
ಹೊಸಪೇಟೆಯ ಕನಕದಾಸ ವೃತ್ತದಲ್ಲಿ ಗುರುವಾರ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರ ಜನ್ಮದಿನದ ಪ್ರಯುಕ್ತ ಅವರ ಭಾವಚಿತ್ರವಿರುವ ಕೇಕ್‌ ಅನ್ನು ಪಕ್ಷದ ಮುಖಂಡರು ಕತ್ತರಿಸಿದರು.
ಹೊಸಪೇಟೆಯ ಕನಕದಾಸ ವೃತ್ತದಲ್ಲಿ ಗುರುವಾರ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರ ಜನ್ಮದಿನದ ಪ್ರಯುಕ್ತ ಅವರ ಭಾವಚಿತ್ರವಿರುವ ಕೇಕ್‌ ಅನ್ನು ಪಕ್ಷದ ಮುಖಂಡರು ಕತ್ತರಿಸಿದರು.   

ಹೊಸಪೇಟೆ(ವಿಜಯನಗರ): ‘ಸಚಿವ ಆನಂದ್ ಸಿಂಗ್ ಸಮರ್ಥರಿದ್ದಾರೆ. ಅವರಿಗೆ ಯಾವುದೇ ಖಾತೆ ನೀಡಿದರೂ ನಿಭಾಯಿಸುತ್ತಾರೆ’ ಎಂದು ಕಾಂಗ್ರೆಸ್ ಮುಖಂಡ ಸಂತೋಷ್ ಲಾಡ್ ತಿಳಿಸಿದರು.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರ ಜನ್ಮದಿನ, ಕಾಂಗ್ರೆಸ್‌ನಿಂದ ಹಮ್ಮಿಕೊಂಡಿರುವ ಕೋವಿಡ್‌–19 ಸಹಾಯಹಸ್ತ ಅನುಷ್ಠಾನ ಸಭೆಯಲ್ಲಿ ಪಾಲ್ಗೊಂಡ ನಂತರ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

‘ರಾಜಕೀಯವಾಗಿ ಏನು ನಿರ್ಣಯ ಕೈಗೊಳ್ಳುತ್ತಾರೆ ಎನ್ನುವುದು ಆನಂದ್‌ ಸಿಂಗ್‌ ಅವರ ವೈಯಕ್ತಿಕ ವಿಚಾರ. ಅವರು ಯಾವ ಖಾತೆ ಬಯಸಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ಆದರೆ, ಅವರು ಸಮರ್ಥ ನಾಯಕರು. ಅವರಿಗೆ ಯಾವುದೇ ಖಾತೆ ನೀಡಿದರೂ ನಿಭಾಯಿಸುವ ಶಕ್ತಿ ಇದೆ’ ಎಂದು ಹೇಳಿದರು.

‘ಕಾಂಗ್ರೆಸ್‌ ಪಕ್ಷಕ್ಕೆ ಯಾರು ಬೇಕಾದರೂ ಬರಬಹುದು. ಪಕ್ಷಕ್ಕೆ ಸೇರಿಸಿಕೊಳ್ಳುವುದು, ಬಿಡುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದು. ಪಕ್ಷದ ಹೈಕಮಾಂಡ್ ಅನುಮತಿ ದೊರೆತಲ್ಲಿ ಯಾರು ಬೇಕಾದರೂ ಬರಬಹುದು’ ಎಂದು ಪ್ರಶ್ನೆಗೆ ಉತ್ತರಿಸಿದರು.

ಇದಕ್ಕೂ ಮುನ್ನ ಕಾಂಗ್ರೆಸ್‌ ಸಭೆಯಲ್ಲಿ ಮಾತನಾಡಿದ ಅವರು, ‘ಕೋವಿಡ್‌ನಿಂದ ಮೃತಪಟ್ಟವರು ಹಾಗೂ ಅದರಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಸಂಕಷ್ಟ ಎದುರಿಸುತ್ತಿರುವವರ ಸಮೀಕ್ಷೆ ಕಾರ್ಯಕ್ಕೆ ಮತ್ತಷ್ಟು ವೇಗ ನೀಡಬೇಕು. ಪ್ರತಿ ವಾರ್ಡಿಗೆ ಕಾರ್ಯಕರ್ತರು ತೆರಳಿ ಮಾಹಿತಿ ಸಂಗ್ರಹಿಸಬೇಕು. ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಮಾಹಿತಿ ಸಂಗ್ರಹಿಸಿದ ನಂತರ ಕೆಪಿಸಿಸಿಗೆ ವರದಿ ಸಲ್ಲಿಸಲಾಗುವುದು. ಕೋವಿಡ್‌ನಿಂದ ಮೃತರಾದವರಿಗೆ ಸರ್ಕಾರ ಪರಿಹಾರ ನೀಡಲು ವಿಫಲವಾಗಿದೆ’ ಎಂದು ಆರೋಪಿಸಿದರು.

ಸಂಡೂರು ಶಾಸಕ ಈ. ತುಕಾರಾಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೊಹಮ್ಮದ್‌ ಇಮಾಮ್ ನಿಯಾಜಿ, ವಿ. ಸೋಮಪ್ಪ, ಮುಕಂಡರಾದ ಬಿ.ವಿ. ಶಿವಯೋಗಿ, ಗುಜ್ಜಲ್ ರಘು, ರವಿಕುಮಾರ್, ಸಿದ್ದನಗೌಡ, ಭರತ್ ಕುಮಾರ್, ಮುನ್ನಿ ಬೀ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT