ಮಳೆಯಲ್ಲೇ ಶಾಲೆ, ಕಾಲೇಜುಗಳಿಗೆ ಹೊರಟ ವಿದ್ಯಾರ್ಥಿಗಳು
– ಪ್ರಜಾವಾಣಿ ಚಿತ್ರ
ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆಯಾದ್ಯಂತ ಗುರುವಾರ ಬೆಳಿಗ್ಗೆಯಿಂದಲೇ ಮಳೆ ಸುರಿಯುತ್ತಿದ್ದು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಮಳೆಯಲ್ಲೇ ಸಾಗುತ್ತಿರುವ ದೃಶ್ಯ ಕಾಣಿಸಿದೆ. ಮಳೆ ಅಷ್ಟೇನೂ ಬಿರುಸಿನಿಂದ ಸುರಿಯದ ಕಾರಣ ಜನಜೀವನ ಸಹಜವಾಗಿ ಸಾಗಿದೆ.
ಬುಧವಾರ ರಾತ್ರಿ ಕೆಲವೆಡೆ ಭಾರಿ ಮಳೆ ಸುರಿದಿತ್ತು. ಗುರುವಾರ ಬೆಳಿಗ್ಗೆ ದಟ್ಟ ಮೋಡ ಆವರಿಸಿಕೊಂಡಿತ್ತು. 7 ಗಂಟೆಯ ಬಳಿಕ ಹೊಸಪೇಟೆ ನಗರ ಮತ್ತು ಸುತ್ತಮುತ್ತ ಲಘುವಾಗಿ ಮಳೆ ಸುರಿಯಲು ಆರಂಭಿಸಿತು. ಸತತ ಎರಡು ಗಂಟೆಯಿಂದ ಮಳೆ ಮುಂದುವರಿದಿದೆ.
ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಹೂವಿನ ಹಡಗಲಿ, ಕೂಡ್ಲಿಗಿ ತಾಲ್ಲೂಕುಗಳಲ್ಲಿ ಸಹ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ. ಜಿಲ್ಲೆಯ ಹಲವೆಡೆ ಈಗಾಗಲೇ ಬಿತ್ತನೆ ಕಾರ್ಯ ಆರಂಭವಾಗಿದೆ.
ತುಂಗಭದ್ರಾ ಜಲಾಶಯಕ್ಕೆ ಸದ್ಯ 5,306 ಕ್ಯುಸೆಕ್ನಷ್ಟು ಒಳಹರಿವು ಇದ್ದು, ಜಿಲಾಶಯದಲ್ಲಿ 24.88 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಗರಿಷ್ಠ 1,633 ಅಡಿ ಎತ್ತರದ ಅಣೆಕಟ್ಟೆಯಲ್ಲಿ ಸದ್ಯ 1,602.47 ಅಡಿ ಮಟ್ಟದಲ್ಲಿ ನೀರು ಇದೆ. ಹೊಸ ಕ್ರಸ್ಟ್ಗೇಟ್ಗಳನ್ನು ಅಳವಡಿಸದ ಕಾರಣ ಈ ಬಾರಿ ಗರಿಷ್ಠ ಮಟ್ಟಕ್ಕೆ ನೀರು ನಿಲ್ಲಿಸುವುದಿಲ್ಲ ಎಂದು ತುಂಗಭದ್ರಾ ಮಂಡಳಿ ಈಗಾಗಲೇ ತಿಳಿಸಿದೆ. ಹೀಗಾಗಿ ಇನ್ನು ಕೇವಲ 24 ಅಡಿಯಷ್ಟು ನೀರು ತುಂಬಿದರೆ (80 ಟಿಎಂಸಿ ಅಡಿ ನೀರು ಸಂಗ್ರಹ) ಕ್ರಸ್ಟ್ಗೇಟ್ಗಳನ್ನು ತೆರೆದು ನೀರನ್ನು ನದಿಗೆ ಹರಿಸುವುದು ಅನಿವಾರ್ಯವಾಗಲಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.