ADVERTISEMENT

ಲಾಡ್‌ ಕುಟುಂಬದಿಂದ ಜಮೀನುಸ್ವಾಧೀನಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 10:58 IST
Last Updated 16 ಜುಲೈ 2021, 10:58 IST
ಕರ್ನಾಟಕ ‍ಪ್ರಾಂತ ರೈತ ಸಂಘದವರು ಶುಕ್ರವಾರ ಹೊಸಪೇಟೆಯಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದರು–ಪ್ರಜಾವಾಣಿ ಚಿತ್ರ
ಕರ್ನಾಟಕ ‍ಪ್ರಾಂತ ರೈತ ಸಂಘದವರು ಶುಕ್ರವಾರ ಹೊಸಪೇಟೆಯಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ಕಾಂಗ್ರೆಸ್‌ ಮುಖಂಡ ಸಂತೋಷ್‌ ಲಾಡ್‌ ಮತ್ತು ಅವರ ಕುಟುಂಬದವರು ಅಕ್ರಮವಾಗಿ ಕಬಳಿಸಿದ್ದಾರೆ ಎನ್ನಲಾದ ಸರ್ಕಾರಿ ಜಮೀನು ಹಿಂದಕ್ಕೆ ಪಡೆದು, ಅರ್ಹ ಉಳುಮೆಗಾರರಿಗೆ ಅದನ್ನು ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ‍ಪ್ರಾಂತ ರೈತ ಸಂಘದವರು ಶುಕ್ರವಾರ ನಗರದಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದರು.

ನಗರದ ಶ್ರಮಿಕ ಭವನದಿಂದ ತಾಲ್ಲೂಕು ಕಚೇರಿ ವರೆಗೆ ರ್‍ಯಾಲಿ ನಡೆಸಿದರು. ಬಳಿಕ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರಿಗೆ ಸಲ್ಲಿಸಿದರು.

ಸಂಡೂರು ತಾಲ್ಲೂಕಿನ ಮಾಳಾಪುರದ ಸರ್ವೇ ನಂ. 123ರಲ್ಲಿ 47.63 ಎಕರೆ ಸರ್ಕಾರಿ ಜಮೀನಿಗೆ ಸಂಬಂಧಿಸಿದಂತೆ ಲಾಡ್‌ ಕುಟುಂಬದವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವರ ಹೆಸರಿಗೆ ಮಾಡಿಕೊಂಡಿದ್ದಾರೆ. ಪರಿಶಿಷ್ಟರು ಸಾಗುವಳಿ ಮಾಡಿಕೊಂಡು ಬಂದಿದ್ದ ಕೃಷಿ ಜಮೀನು ಲಾಡ್‌ ಕುಟುಂಬದವರು ಭೂಗಳ್ಳರೊಂದಿಗೆ ಸೇರಿಕೊಂಡು ಅವರ ಹೆಸರಿಗೆ ಮಾಡಿಕೊಂಡು ವಂಚಿಸಿದ್ದಾರೆ. ಈ ಜಮೀನು ಸರ್ಕಾರ ವಶಕ್ಕೆ ಪಡೆದು, ನೈಜ ವಾರಸುದಾರರಿಗೆ ಕೊಡಬೇಕು ಎಂದು ಆಗ್ರಹಿಸಿದರು.

ADVERTISEMENT

ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿರುವವರಿಗೆ ಹಕ್ಕು ಪತ್ರ ನೀಡಬೇಕು. ಅರಣ್ಯ ಹಕ್ಕು ಸಮಿತಿ, ಗ್ರಾಮ ಸಭೆಗಳನ್ನು ನಡೆಸಿ, ಹೆಸರು ಬಿಟ್ಟುಹೋದ ಸಾಗುವಳಿದಾರರ ಅರ್ಜಿ ಸ್ವೀಕರಿಸಬೇಕು. ಸಾಗುವಳಿಗೆ ಅಡ್ಡಿಪಡಿಸುತ್ತಿರುವ ಅರಣ್ಯ ಇಲಾಖೆಯ ದೌರ್ಜನ್ಯ ತಡೆಯಬೇಕು ಎಂದು ಒತ್ತಾಯಿಸಿದರು.

ಕಳಪೆ ಬೀಜ, ಕಾಳಸಂತೆ ಬೀಜ, ರಸಗೊಬ್ಬರ ಮಾರಾಟಗಾರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಎಲ್ಲ ರೈತರಿಗೆ ಉಚಿತವಾಗಿ ಬೀಜ, ರಸಗೊಬ್ಬರ ವಿತರಿಸಬೇಕು ಎಂದು ಆಗ್ರಹಿಸಿದರು.

ಸಂಘದ ತಾಲ್ಲೂಕು ಅಧ್ಯಕ್ಷ ಜಿ. ಕೆರೆ ಹನುಮ, ಕಾರ್ಯದರ್ಶಿ ಎನ್‌. ಯಲ್ಲಾಲಿಂಗ, ಖಜಾಂಚಿ ಆರ್‌. ಹನುಮಂತಪ್ಪ, ಜಿ. ತಾರಾನಾಥ, ಬಿ. ರಾಮಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.