ಹೂವಿನ ಹಡಗಲಿ: ತಾಲ್ಲೂಕಿನಲ್ಲಿ ಮುಂಗಾರು ಈರುಳ್ಳಿ ಬೆಳೆ ಕಟಾವು ಇದೀಗ ಆರಂಭವಾಗಿದ್ದು, ಮಾರುಕಟ್ಟೆಯಲ್ಲಿ ಬೆಲೆ ಕುಸಿದಿರುವುದು ರೈತರನ್ನು ಚಿಂತೆಗೀಡು ಮಾಡಿದೆ.
ಕಳೆದ ಐದಾರು ವರ್ಷಗಳಿಂದ ಈರುಳ್ಳಿ ಬೆಳೆಗೆ ಕೊಳೆ ರೋಗ, ಬಾಣಂತಿ ರೋಗ ವ್ಯಾಪಿಸಿ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ. ಈ ಬಾರಿ ಉತ್ತಮ ಇಳುವರಿ ಬಂದಿದ್ದರೂ ಬೆಳೆಗೆ ತಕ್ಕ ಬೆಲೆ ಸಿಗದೇ ರೈತರು ಕಂಗಾಲಾಗಿದ್ದಾರೆ.
ತಾಲ್ಲೂಕಿನಲ್ಲಿ 1,500 ಹೆಕ್ಟೇರ್ನಲ್ಲಿ ಮುಂಗಾರು ಈರುಳ್ಳಿ ಬಿತ್ತನೆಯಾಗಿದೆ. ಇಟ್ಟಿಗಿ ಹೋಬಳಿಯಲ್ಲಿ ಈರುಳ್ಳಿ ಪ್ರಮುಖ ಬೆಳೆಯಾಗಿದ್ದು, ಇಟ್ಟಿಗಿ, ಉತ್ತಂಗಿ, ಸೋಗಿ, ತಳಕಲ್ಲು, ಮಹಾಜನದಹಳ್ಳಿ, ಕೆಂಚಮ್ಮನಹಳ್ಳಿ, ಮುಸುವಿನಕಲ್ಲಹಳ್ಳಿಯಲ್ಲಿ ನೀರಾವರಿ ಹಾಗೂ ಮಳೆಯಾಶ್ರಿತವಾಗಿ ರೈತರು ಈರುಳ್ಳಿ ಬೆಳೆದಿದ್ದಾರೆ. ಹಡಗಲಿ, ಹಿರೇಹಡಗಲಿ ಹೋಬಳಿಯಲ್ಲೂ ಅಲ್ಪ ಪ್ರಮಾಣದ ಈರುಳ್ಳಿ ಕ್ಷೇತ್ರವಿದೆ. ಆರಂಭಿಕ ಮುಂಗಾರು ಬಿತ್ತನೆಯಾಗಿದ್ದ ಹೊಲಗಳಲ್ಲಿ ಕಟಾವು ಶುರುವಾಗಿದೆ.
ಇಲ್ಲಿನ ರೈತರು ಈರುಳ್ಳಿಯನ್ನು ಬೆಂಗಳೂರು ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡುತ್ತಾರೆ. ಬುಧವಾರ ‘ಎ’ ಗ್ರೇಡ್ ಈರುಳ್ಳಿ ಕ್ವಿಂಟಲ್ಗೆ ₹800ರಿಂದ ಗರಿಷ್ಠ ₹1,400 ವರೆಗೆ ಮಾರಾಟವಾಗಿದೆ. ‘ಪ್ರತಿ ಕ್ವಿಂಟಲ್ ಈರುಳ್ಳಿಗೆ ₹1,800ರಿಂದ ₹2,000 ಉತ್ಪಾದನಾ ವೆಚ್ಚ ತಗುಲುತ್ತದೆ. ಮಾರುಕಟ್ಟೆಯ ಧಾರಣೆ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯಾಗಿ ಸಾಲದ ಹೊರೆ ಬೆನ್ನೇರುವಂತೆ ಮಾಡಿದೆ’ ಎಂದು ರೈತರು ಗೋಳು ತೋಡಿಕೊಂಡಿದ್ದಾರೆ.
‘ನಾಲ್ಕೂವರೆ ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದೇವೆ. ಬೆಲೆ ಕುಸಿದಿರುವುದರಿಂದ ಒಂದೂಕಾಲು ಎಕರೆ ಮಾತ್ರ ಕಟಾವು ಮಾಡಿ ಮಾರುಕಟ್ಟೆಗೆ ಕಳಿಸಲು ಅಣಿಗೊಳಿಸಿದ್ದೇವೆ. ಕಟಾವು, ಗ್ರೇಡ್ ಮಾಡಲು ₹45 ಸಾವಿರ ಖರ್ಚಾಗಿದೆ. ಒಂದು ಎಕರೆ ಈರುಳ್ಳಿ ಬೆಳೆ ನಿರ್ವಹಣೆಗೆ ₹60-70 ಸಾವಿರ ಖರ್ಚು ಬರುತ್ತದೆ. ಪ್ರತಿ ಕ್ವಿಂಟಲ್ಗೆ ಕನಿಷ್ಠ ₹3,000 ಬೆಲೆ ಸಿಕ್ಕರೆ ಒಂದಿಷ್ಟು ಆದಾಯ ಕೈ ಸೇರುತ್ತದೆ. ಇಲ್ಲದಿದ್ದರೆ ಉತ್ತಮ ಫಸಲು ಬಂದರೂ ಸಾಲಗಾರರಬೇಕಾಗುತ್ತದೆ’ ಎಂದು ಉತ್ತಂಗಿ ಗ್ರಾಮದ ರೈತ ಪ್ರದೀಪ ಮಣಿಯಪ್ಪನವರ ಹೇಳಿದರು.
ಪಿಡಿಪಿಎಸ್ ಜಾರಿಗೆ ಆಗ್ರಹ
‘ಈರುಳ್ಳಿ ಬೆಲೆ ಕುಸಿತದಿಂದ ರೈತರ ಪರಿಸ್ಥಿತಿ ಶೋಚನೀಯವಾಗಿದೆ. ಕೇಂದ್ರ ಸರ್ಕಾರ ‘ಮಾರುಕಟ್ಟೆ ಬೆಲೆ ವ್ಯತ್ಯಾಸ ಪಾವತಿ’ (ಪಿಡಿಪಿಎಸ್) ಯೋಜನೆಯನ್ನು ಜಾರಿಗೊಳಿಸಿ ರೈತರಿಗೆ ನೆರವಾಗಬೇಕು’ ಎಂದು ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ ಎನ್.ಎಂ.ಸಿದ್ದೇಶ್ ಆಗ್ರಹಿಸಿದ್ದಾರೆ. ತಾಲ್ಲೂಕು ಮಟ್ಟದಲ್ಲಿ ನಾಫೆಡ್ ಎನ್ಸಿಸಿಎಫ್ನಿಂದ ಈರುಳ್ಳಿ ಖರೀದಿ ಕೇಂದ್ರ ತೆರೆದು ₹4000 ಬೆಂಬಲ ಬೆಲೆ ನೀಡಿ ಖರೀದಿಸಬೇಕು. ಬೆಳೆ ಸಮೀಕ್ಷೆಯನ್ನು ತ್ವರಿತಗೊಳಿಸಿ ಈರುಳ್ಳಿ ಕ್ಷೇತ್ರ ನಮೂದಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.