ಹೊಸಪೇಟೆ (ವಿಜಯನಗರ): ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರವು ವಿಶ್ವಪ್ರಸಿದ್ಧ ಹಂಪಿಯಲ್ಲಿ ರಾತ್ರಿ 9ರ ವರೆಗೆ ಬ್ಯಾಟರಿಚಾಲಿತ ವಾಹನಗಳ ಸೌಕರ್ಯ ಕಲ್ಪಿಸಿದೆ.
‘ಭಯದಲ್ಲೇ ಹಂಪಿ ಸ್ಮಾರಕಗಳ ವೀಕ್ಷಣೆ!’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ ಶನಿವಾರ (ಆ.13) ವರದಿ ಪ್ರಕಟಿಸಿತ್ತು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹಂಪಿ ಸ್ಮಾರಕಗಳಿಗೆ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ರಾತ್ರಿ 9ರ ವರೆಗೆ ಸ್ಮಾರಕಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಸಂಜೆ 6ರ ನಂತರ ಬ್ಯಾಟರಿಚಾಲಿತ ವಾಹನಗಳ ಸೌಕರ್ಯ ಇರಲಿಲ್ಲ. ಸಂರಕ್ಷಿತ ಸ್ಮಾರಕವಾಗಿರುವುದರಿಂದ ಪೆಟ್ರೋಲ್, ಡೀಸೆಲ್ಚಾಲಿತ ವಾಹನಗಳ ಸಂಚಾರಕ್ಕೆ ನಿರ್ಬಂಧವಿದೆ.
ಜನ ಅವರ ವಾಹನಗಳನ್ನು ಕೂಡ ಕೊಂಡೊಯ್ಯುವಂತಿಲ್ಲ. ಹಂಪಿ ವಿಜಯ ವಿಠಲ ದೇವಸ್ಥಾನ, ಸಪ್ತಸ್ವರ ಮಂಟಪ ಹಾಗೂ ಕಲ್ಲಿನ ರಥ ಕಣ್ತುಂಬಿಕೊಳ್ಳಬೇಕಾದರೆ ಒಂದು ಕಿ.ಮೀ ದೂರ ನಡೆದುಕೊಂಡು ಹೋಗಬೇಕು. ಮಾರ್ಗದಲ್ಲಿ ಬೆಳಕಿನ ವ್ಯವಸ್ಥೆ ಇಲ್ಲ. ಸಂಜೆಯಾದ ನಂತರ ಚಿರತೆ, ಕರಡಿಗಳು ಓಡಾಡುತ್ತವೆ. ಯಾವುದೇ ಸುರಕ್ಷತೆ, ವ್ಯವಸ್ಥೆ ಇಲ್ಲದ ಕಾರಣ ಜನ ಸ್ಮಾರಕಗಳನ್ನು ವೀಕ್ಷಿಸದೇ ಹಿಂತಿರುಗುತ್ತಿದ್ದರು. ಇದರ ಬಗ್ಗೆ ‘ಪ್ರಜಾವಾಣಿ’ ಬೆಳಕು ಚೆಲ್ಲಿದ ನಂತರ ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ ಅವರು ಖುದ್ದು ಸ್ಥಳಕ್ಕೆ ಭೇಟಿ ನೀಡಿ, ರಾತ್ರಿ 9ಗಂಟೆಯ ವರೆಗೆ ಬ್ಯಾಟರಿಚಾಲಿತ ವಾಹನಗಳಿಗೆ ವ್ಯವಸ್ಥೆ ಮಾಡಿದ್ದಾರೆ.
ವಾಹನಗಳ ಸಂಚಾರ ಆರಂಭಗೊಂಡ ನಂತರ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಶನಿವಾರ ರಾತ್ರಿ ಭೇಟಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.