ಹೊಸಪೇಟೆ ರೋಟರಿ ಕ್ಲಬ್ ಆವರಣದಲ್ಲಿರುವ ಪಿ.ಬಾಲಸುಬ್ಬಾ ಶೆಟ್ಟಿ ಡಯಾಲಿಸಿಸ್ ಕೇಂದ್ರ –
ಪ್ರಜಾವಾಣಿ ಚಿತ್ರ
ಹೊಸಪೇಟೆ (ವಿಜಯನಗರ): ಹೊಸಪೇಟೆ ರೋಟರಿ ಕ್ಲಬ್ ವತಿಯಿಂದ ಡಯಾಲಿಸಿಸ್ ಕೇಂದ್ರ, ರಕ್ತ ಕೇಂದ್ರ ಸಹಿತ 12 ಶಾಶ್ವತ ಸೇವೆಯನ್ನು ಸಾರ್ವಜನಿಕರಿಗೆ ನೀಡುವ ಮೂಲಕ ದೇಶದಲ್ಲೇ ದ್ವಿತೀಯ ಸ್ಥಾನದಲ್ಲಿದೆ. ರಾಜ್ಯದಲ್ಲಿ ಇದುವೇ ನಂಬರ್ ವನ್ ಆಗಿದೆ.
‘ಕೋಲ್ಕತ್ತ ರೋಟರಿ 16 ಕಾಯಂ ಸೇವೆಗಳನ್ನು ಒದಗಿಸುವ ಮೂಲಕ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಹೊಸಪೇಟೆ ರೋಟರಿ ಕ್ಲಬ್ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಲ್ಲದೆ, ದೇಶದಲ್ಲೇ ದ್ವಿತೀಯ ಸ್ಥಾನ ಗಳಿಸಿರುವುದು ಈ ಹಿಂದಿನ ಹಲವು ಅಧ್ಯಕ್ಷರು, ಇತರ ಪದಾಧಿಕಾರಿಗಳು ಮಾಡಿದ ಶ್ರಮದ ಫಲ, ಈ ಸೇವಾ ಕಾರ್ಯ ಮುಂದುವರಿಯಲಿದೆ’ ಎಂದು ಕ್ಲಬ್ನ 67ನೇ ಅಧ್ಯಕ್ಷರಾಗಿ ನಾಲ್ಕು ದಿನಗಳ ಹಿಂದೆ ಅಧಿಕಾರ ವಹಿಸಿಕೊಂಡಿರುವ ಕೆ.ಎಸ್.ದಾದಾಪೀರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಆಪದ್ಭಾಂಧವ ಡಯಾಲಿಸಿಸ್ ಕೇಂದ್ರ: ಹೊಸಪೇಟೆ ಮಾತ್ರವಲ್ಲ, ಸುತ್ತಮುತ್ತಲಿನ ಹಲವು ತಾಲ್ಲೂಕು, ಪಟ್ಟಡ ಪ್ರದೇಶಗಳ ಜನರಿಗೆ ಡಯಾಲಿಸಿಸ್ ಕೇಂದ್ರ ವರದಾನವಾಗಿದೆ. ಅದೆಷ್ಟೋ ಸಂದರ್ಭಗಳಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರ ಕೈಕೊಟ್ಟಿದ್ದಾಗ ಇಲ್ಲಿ ಡಯಾಲಿಸಿಸ್ ಮಾಡಿಸಿಕೊಂಡವರು ಬಹಳಷ್ಟು ಮಂದಿ ಇದ್ದಾರೆ. ಇಲ್ಲಿನ ಒಂಬತ್ತು ಯಂತ್ರಗಳು ಅಗ್ಗದ ದರದಲ್ಲಿ ರೋಗಿಗಳಿಗೆ ಡಯಾಲಿಸಿಸ್ ಸೇವೆ ನೀಡುತ್ತಿದೆ’ ಎಂದು ಅವರು ಹೇಳಿದರು.
ಏನೆಲ್ಲ ಸೇವೆ?: ರೋಟರಿ ಕ್ಲಬ್ ವತಿಯಿಂದ ಚಾರಿಟಬಲ್ ಆಸ್ಪತ್ರೆ, ವೃತ್ತಿಪರ ತರಬೇತಿ ಕೇಂದ್ರ, ಕಣ್ಣಿನ ಆಸ್ಪತ್ರೆ, ಎಚ್ಐವಿ ರೋಗಿಗಳಿಗೆ ಮಾಸಿಕ ವೈದ್ಯಕೀಯ ತಪಾಸಣೆ ನಡೆಸುವ ಪ್ರಾಜೆಕ್ಟ್ ಆಶಾ, ಫಿಸಿಯೋಥೆರಪಿ ಕೇಂದ್ರ, ಡಯಾಲಿಸಿಸ್ ಕೇಂದ್ರ, ಸಾರ್ವಜನಿಕ ಶೌಚಾಲಯ, ನೇತ್ರ ಸಂಗ್ರಹಣಾ ಕೇಂದ್ರ, ಐಸಿಯು ಕಾರ್ಡಿಯೊ ಆಂಬುಲೆನ್ಸ್, ಶಾಲೆ, ಪೆಥಾಲಜಿ ಲ್ಯಾಬ್ ಹಾಗೂ ರಕ್ತ ಕೇಂದ್ರಗಳನ್ನು ನಡೆಸಲಾಗುತ್ತಿದೆ.
ದಾನಿಗಳು ನೆರವು ನೀಡಲು ಮುಂದೆ ಬಂದ ಕಾರಣ ಹಲವು ಕಾಯಂ ಸೇವೆಗಳು ರೋಟರಿಯಿಂದ ನೀಡುವುದು ಸಾಧ್ಯವಾಗಿದೆ. ರಾಜ್ಯದಲ್ಲಿ ಬೇರ ಯಾವ ರೋಟರಿಯೂ ಮಾಡದ ಸಾಧನೆ ಮಾಡಿದ್ದಕ್ಕೆ ಖುಷಿ ಇದೆಕೆ.ಎಸ್.ದಾದಾಪೀರ್, ರೋಟರಿ ಕ್ಲಬ್ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.