ಹೊಸಪೇಟೆ (ವಿಜಯನಗರ): ಒಂದೂವರೆ ವರ್ಷದ ನಂತರ ಪ್ರಾಥಮಿಕ ಶಾಲೆಗಳಲ್ಲಿ ಚಿಣ್ಣರ ಕಲರವ ಕೇಳಿ ಬಂದಿದೆ. ಇದರೊಂದಿಗೆ ಬಿಕೋ ಎನ್ನುತ್ತಿದ್ದ ಶಾಲೆಗಳಿಗೆ ಮೊದಲಿನ ಕಳೆ ಬಂದಿದೆ.
ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಸೋಮವಾರದಿಂದ ಕಿರಿಯ ಪ್ರಾಥಮಿಕ ಶಾಲೆಗಳು ಆರಂಭಗೊಂಡಿವೆ. ಎಲ್ಲ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಕಾಣಿಸಿಕೊಂಡರು.
ಯಾರಲ್ಲೂ ಕೋವಿಡ್ ಭಯ ಇರಲಿಲ್ಲ. ಎಲ್ಲ ಮಕ್ಕಳು ಸಮವಸ್ತ್ರ ಧರಿಸಿಕೊಂಡು ನಗುತ್ತ ಶಾಲೆ ಕಡೆಗೆ ಹೆಜ್ಜೆ ಹಾಕಿದರು.
ಶಾಲೆ ಆರಂಭ ಹಿನ್ನೆಲೆಯಲ್ಲಿ ಶನಿವಾರದಿಂದಲೇ ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿತ್ತು. ಭಾನುವಾರ ತಳಿರು ತೋರಣ, ರಂಗೋಲಿಯಿಂದ ಶಾಲೆಗಳು ಸಿಂಗಾರಗೊಂಡಿದ್ದವು. ಪ್ರತಿ ಮಗುವಿನ ಥರ್ಮಲ್ ಸ್ಕ್ರೀನಿಂಗ್ ನಡೆಸಿ ಶಾಲೆಯೊಳಗೆ ಬಿಡಲಾಯಿತು. ಶಾಲೆಯ ಮುಖ್ಯಶಿಕ್ಷಕ ಹಾಗೂ ಶಿಕ್ಷಕರು, ಮಕ್ಕಳಿಗೆ ಗುಲಾಬಿ ಹೂ, ಬಿಸ್ಕತ್, ಚಾಕೋಲೇಟ್ ಕೊಟ್ಟು ಬರಮಾಡಿಕೊಂಡರು. ಮಕ್ಕಳಿಗೆ ಇದು ಭಿನ್ನ ಅನುಭವವಾಗಿತ್ತು. ಬಳಿಕ ಮಕ್ಕಳನ್ನು ಕೊಠಡಿಗಳಲ್ಲಿ ಅಂತರದಿಂದ ಕೂರಿಸಿ ಪಾಠ ಮಾಡಲಾಯಿತು.
'ಮನೆಯಲ್ಲಿ ಕೂತು ಸಾಕಾಗಿತ್ತು. ಶಾಲೆ ಶುರುವಾಗಿದ್ದರಿಂದ ಖುಷಿಯಾಗಿದೆ. ನಮ್ಮ ಶಿಕ್ಷಕರು, ಗೆಳೆಯರನ್ನು ಕಾಣಲು ಸಾಧ್ಯವಾಗಿದೆ. ಆನ್ ಲೈನ್ ಪಾಠ ಕೇಳಿ ಸಾಕಾಗಿತ್ತು. ಈಗ ಖುದ್ದು ಅವರಿಂದಲೇ ಪಾಠ ಕೇಳಬಹುದು. ಗೆಳೆಯರೊಂದಿಗೆ ಹರಟೆ ಹೊಡೆಯಬಹುದು. ಆಟ ಆಡಬಹುದು' ಎಂದು ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಚಿನ್ಮಯ ಹೇಳಿದ.
ಸರ್ಕಾರಿ ಶಾಲೆಯ ಶಿಕ್ಷಕ ಬಸವರಾಜ ಮಾತನಾಡಿ, ಮಕ್ಕಳ ಬರುವಿಕೆಯಿಂದ ಶಾಲೆಗೆ ವಿಶೇಷ ಕಳೆ ಬಂದಿದೆ. ಮೊದಲ ದಿನವೇ ನಿರೀಕ್ಷೆಗೂ ಮೀರಿ ಮಕ್ಕಳು ಬಂದಿರುವುದು ಖುಷಿಯ ವಿಚಾರ' ಎಂದರು.
ಈ ಹಿಂದೆಯೇ ಪ್ರೌಢಶಾಲೆ, ಕಾಲೇಜುಗಳು ಆರಂಭಗೊಂಡಿದ್ದವು. ಪೂರ್ವ ಪ್ರಾಥಮಿಕ ಶಾಲೆಗಳು ಆರಂಭಗೊಂಡರೆ ಎಲ್ಲರೀತಿಯ ಶಾಲೆಗಳು ಆರಂಭಗೊಂಡಂತೆ ಆಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.