ಹೊಸಪೇಟೆ (ವಿಜಯನಗರ): ‘ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳಿಂದ ಹೊಸಪೇಟೆ ಉದ್ಧಾರವಾಗಲಿಲ್ಲ. ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣದಲ್ಲಿ ನಂಬಿಕೆ ಹೊಂದಿರುವ ಕೆ.ಆರ್.ಎಸ್. ಪಕ್ಷವನ್ನು ಮತದಾರರು ಒಮ್ಮೆ ಬೆಂಬಲಿಸಿ ನೋಡಿ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಮನವಿ ಮಾಡಿದರು.
ನಗರಸಭೆ ಚುನಾವಣೆಗೆ ಸ್ಪರ್ಧಿಸಿರುವ ಪಕ್ಷದ ಏಳು ಅಭ್ಯರ್ಥಿಗಳ ಪರ ಬುಧವಾರ ನಗರದಲ್ಲಿ ಪ್ರಚಾರ ಕೈಗೊಂಡು ಮಾತನಾಡಿದ ಅವರು, ಪಕ್ಷದ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದರೆ ಭ್ರಷ್ಟಾಚಾರ ಮುಕ್ತ ಹೊಸಪೇಟೆ ನಗರಸಭೆ ಮಾಡಲು ಶ್ರಮಿಸುತ್ತಾರೆ. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳ ಆಡಳಿತವನ್ನು ಎಲ್ಲರೂ ನೋಡಿದ್ದಾರೆ. ಒಮ್ಮೆ ಕೆಆರ್ಎಸ್ ಕೆಲಸವೂ ಜನ ನೋಡಲಿ. ಪಕ್ಷವು ಉತ್ತಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅವರಿಗೆ ಜನರ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದರು.
ಸಾಯಿಬಾಬಾ ವೃತ್ತ, ಚಪ್ಪರದಹಳ್ಳಿ, ಶ್ರೀರಾಮುಲು ನಗರ, ಮದಕರಿ ನಾಯಕ ವೃತ್ತದಲ್ಲಿ ಪ್ರಚಾರ ಭಾಷಣ ಮಾಡಿದರು. ಪಕ್ಷದ ಅಭ್ಯರ್ಥಿಗಳಾದ ಪಿ. ಸುಬ್ರಮಣ್ಯಂ, ಟಿ. ವಿರೂಪಾಕ್ಷ, ಟಿ. ನಜೀರ್, ಜೆ. ಅಶೋಕ, ವರುಣ್ ಕುಮಾರ್ ಟಿ.ಎಂ., ಪ.ಯ. ಗಣೇಶ, ಗಂಗಮ್ಮ, ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಕೆ.ಎಸ್. ಸೋಮಸುಂದರ್, ಹಾವೇರಿ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಜಾಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.