ಹೊಸಪೇಟೆ (ವಿಜಯನಗರ): ‘ತುಂಗಭದ್ರಾ ಅಣೆಕಟ್ಟೆಗೆ ಕ್ರೆಸ್ಟ್ಗೇಟ್ ಅಳವಡಿಸಲು ಆಂಧ್ರಪ್ರದೇಶ ನೀಡಿದ್ದ ಹಣದಲ್ಲಿ ತಡೆಹಿಡಿದಿದ್ದ ₹10 ಕೋಟಿ ಅನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ’ ಎಂದು ಸಂಸದ ಇ.ತುಕಾರಾಂ ಶುಕ್ರವಾರ ತಿಳಿಸಿದರು.
‘ಹಣ ತಡೆ ಹಿಡಿದಿಟ್ಟ ವಿಷಯ ಗೊತ್ತಾದ ತಕ್ಷಣವೇ ನಾನು ರಾಜ್ಯ ಸರ್ಕಾರದ ಜೊತೆ ಚರ್ಚಿಸಿದೆ. ಕಾಮಗಾರಿಗೆ ಧಕ್ಕೆ ಆಗಬಾರದೆಂದು ತಿಳಿಸಿದೆ. ನನ್ನ ಮನವಿಗೆ ಸ್ಪಂದಿಸಿ ತುಂಗಭದ್ರಾ ಮಂಡಳಿಗೆ ಹಣ ಬಿಡುಗಡೆಗೆ ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಖಜಾನೆ ಇಲಾಖೆ ಆಯುಕ್ತರಿಗೆ ಫೆಬ್ರುವರಿ 2ರಂದು ಸೂಚಿಸಿದ್ದಾರೆ’. ಪ್ರತಿಯನ್ನು ಮಂಡಳಿಗೂ ಕಳುಹಿಸಲಾಗಿದೆ’ ಎಂದು ಶುಕ್ರವಾರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ತಿಂಗಳಾಂತ್ಯಕ್ಕೆ 20 ಗೇಟ್ ಸಿದ್ಧ: ‘ಅಣೆಕಟ್ಟೆಯಲ್ಲಿ ಗೇಟ್ ಅಳವಡಿಕೆ ಕಾರ್ಯ ಚುರುಕಿನಿಂದ ಸಾಗಿದೆ. ಫೆಬ್ರುವರಿ ಅಂತ್ಯದೊಳಗೆ 20 ಗೇಟ್ಗಳನ್ನು ಅಳವಡಿಸುವ ಭರವಸೆ ತುಂಗಭದ್ರಾ ಮಂಡಳಿ ನೀಡಿದೆ’ ಎಂದರು.
‘ಹಣ ತಡೆ ಹಿಡಿದ ಕುರಿತು ಜನವರಿ 23 ಮತ್ತು 28ರಂದು ‘ಪ್ರಜಾವಾಣಿ’ ವರದಿ ಮಾಡಿತ್ತು. ಗೇಟ್ ತಜ್ಞ ಕನ್ಹಯ್ಯ ನಾಯ್ಡು ಅವರು ಜನವರಿ 20ರಂದು ಗೇಟ್ ಪರಿಶೀಲನೆಗೆ ಬಂದ ಸಂದರ್ಭದಲ್ಲಿ ‘ರಾಜ್ಯ ಸರ್ಕಾರ ₹10 ಕೋಟಿ ತಡೆ ಹಿಡಿದ ಕಾರಣ ಕಾಮಗಾರಿ ವಿಳಂಬವಾಗುತ್ತಿದೆ’ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.