ADVERTISEMENT

ವಿಜಯನಗರ: ಹೂವಿನಹಡಗಲಿಯಲ್ಲಿ ಸಂಭ್ರಮದ ಉರುಸ್; ಹಿಂದೂ-ಮುಸ್ಲಿಮರಿಂದ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2023, 13:42 IST
Last Updated 12 ಮಾರ್ಚ್ 2023, 13:42 IST
   

ಹೂವಿನಹಡಗಲಿ: ವಿಜಯನಗರ ಜಿಲ್ಲೆ ಹೂವಿನಹಡಗಲಿ ಪಟ್ಟಣದ ಹಜರತ್ ರಾಜಾಬಾಗ್ ಸವಾರ್ (ಯಮನೂರು ಸ್ವಾಮಿ) ದರ್ಗಾದಲ್ಲಿ ಭಾನುವಾರ ವಿಜೃಂಭಣೆಯ ಉರುಸ್‌ ಕಾರ್ಯಕ್ರಮ ಜರುಗಿತು.

ವಂಶಪಾರಂಪರ್ಯ ಮುಜಾವರರು ಬೆಳಗಿನಜಾವ ದರ್ಗಾ ಕಟ್ಟೆಯ ಮೇಲೆ ನೀರಿನಲ್ಲಿ ದೀಪ ಬೆಳಗಿಸಿದರು. ಪವಾಡ ರೀತಿಯಲ್ಲಿ ನಡೆದ ಗಂಧ ಮಹೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಬಳಿಕ ಉರುಸು ಆಚರಣೆ ಪ್ರಾರಂಭವಾಯಿತು. ಬೆಳಿಗ್ಗೆಯಿಂದಲೇ ಹಿಂದೂ ಮುಸ್ಲಿಮರು ಏಕಕಾಲಕ್ಕೆ ದರ್ಗಾಕ್ಕೆ ತೆರಳಿ ಪೂಜೆ, ಪ್ರಾರ್ಥನೆ ಸಲ್ಲಿಸಿ ಭಾವೈಕ್ಯ ಮೆರೆದರು.

ವಿಜಯನಗರ, ಬಳ್ಳಾರಿ ಜಿಲ್ಲೆ ಸೇರಿದಂತೆ ನೆರೆಯ ದಾಣಗೆರೆ, ಗದಗ, ಹಾವೇರಿ ಜಿಲ್ಲೆಗಳ ಅಪಾರ ಭಕ್ತರು ಪಾಲ್ಗೊಂಡಿದ್ದರು. ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿ ಭಕ್ತರು ದೀಡು ನಮಸ್ಕಾರ, ಕೊಬ್ಬರಿ ಉಪ್ಪು ಸುಡುವುದು, ಸಕ್ಕರೆ ಅರ್ಪಿಸುವ ಹರಕೆಗಳನ್ನು ತೀರಿಸಿದರು.

ADVERTISEMENT

ಶನಿವಾರ ರಾತ್ರಿ ಗವಿಮಠದ ಹಿರಿಶಾಂತವೀರ ಸ್ವಾಮೀಜಿ, ಶ್ರೀರಾಮ ದೇವಸ್ಥಾನದ ಧರ್ಮದರ್ಶಿ ರಾಕೇಶಯ್ಯ ಬೆಳಗಟ್ಟಿಯ ಮುಸ್ತಫಾ ಖಾದ್ರಿ ಸಾನ್ನಿಧ್ಯದಲ್ಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಗಂಧ ಮಹೋತ್ಸವ ಮೆರವಣಿಗೆಗೆ ಚಾಲನೆ ನೀಡಿದರು. ಹಿರಿಯ ವಕೀಲ ಎಸ್.ಎಚ್.ಛಬ್ಬಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ಜ್ಯೋತಿ ಮಲ್ಲಣ್ಣ, ಉಪಾಧ್ಯಕ್ಷ ಎಸ್.ತಿಮ್ಮಣ್ಣ, ವೀರಶೈವ ಮಹಾಸಭಾ ಅಧ್ಯಕ್ಷ ಅಟವಾಳಗಿ ಕೊಟ್ರೇಶ, ಉರುಸು ಕಮಿಟಿ ಅಧ್ಯಕ್ಷ ಅರುಣಿ ಮಹ್ಮದ್ ರಫಿ, ಕೆ.ಗೌಸ್ ಮೊಹಿದ್ದೀನ್, ಬಿ.ಖಾಜಾಹುಸೇನ್, ಶೇಕ್ ಮಹ್ಮದ್, ದಾವಲ್ ಮಲ್ಲಿಕ್, ಹುಗಲೂರು ನಜೀರ್ ಸಾಹೇಬ್, ಶಫಿವುಲ್ಲಾ, ಕೋರ್ಟ್ ಗೌಸ್ ಸಾಬ್ ಇತರರು ಇದ್ದರು.

ಹಜರತ್ ತಾಜುದ್ದೀನ್ ಬಾಬಾ (ಯಮನೂರು ಸ್ವಾಮಿ) ಅವರು ಹಿಂದೆ ಹುಲಿ ಸವಾರಿ ಮಾಡುತ್ತಾ ನಾಡಿನಲ್ಲಿ ‘ಸೌಹಾರ್ದ ಯಾತ್ರೆ’ ಕೈಗೊಂಡಿದ್ದ ವೇಳೆ ಹೂವಿನಹಡಗಲಿಗೆ ಬಂದು ತಂಗಿದ್ದರು ಎಂಬ ಪ್ರತೀತಿ ಇದೆ. ಆ ಸಂತರ ಸ್ಮರಣೆಗಾಗಿ ನೂರಾರು ವರ್ಷಗಳಿಂದ ಇಲ್ಲಿ ಉರುಸ್ ಆಚರಿಸಿಕೊಂಡು ಬರಲಾಗುತ್ತಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.