ಹೊಸಪೇಟೆ (ವಿಜಯನಗರ): ವೇತನ ಹಿಂಬಾಕಿ ಪಾವತಿ ಸಹಿತ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿದ್ದ ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರ ಮಂಗಳವಾರ ಜಿಲ್ಲೆಯಲ್ಲಿ ನಡೆಯಲಿಲ್ಲ. ಹೀಗಾಗಿ ಜಿಲ್ಲೆಯೊಳಗೆ ಸಾರಿಗೆ ಬಸ್ಗಳ ಸಂಚಾರ ಬಹುತೇಕ ಸಹಜ ಸ್ಥಿತಿಯಲ್ಲಿತ್ತು.
ನಗರದಿಂದ ಜಿಲ್ಲೆಯೊಳಗಿನ ಎಲ್ಲಾ ಪ್ರದೇಶಗಳಿಗೆ ಬಸ್ಗಳ ಓಡಾಟ ಎಂದಿನಂತೆಯೇ ಇದ್ದರೆ, ಹೊರ ಜಿಲ್ಲೆಗಳು ಮತ್ತು ದೂರದ ಊರುಗಳಿಗೆ ತೆರಳುವ ಬಸ್ಗಳ ಸಂಖ್ಯೆ ಕಡಿಮೆ ಇತ್ತು.
‘ನಮ್ಮಲ್ಲಿ ಸಿಬ್ಬಂದಿಯ ಹಾಜರಾತಿ ಶೇ 100ರಷ್ಟು ಇದೆ. ಹೀಗಾಗಿ ಯಾವುದೇ ತೊಂದರೆಯೂ ಆಗಿಲ್ಲ. ನಮ್ಮ ಕಾಯಂ ಸಿಬ್ಬಂದಿ ಮತ್ತು ಹೊರಗುತ್ತಿಗೆ ಸಿಬ್ಬಂದಿಯೇ ಬಸ್ಗಳನ್ನು ಓಡಿಸಿದ್ದಾರೆ. ಹರಪನಹಳ್ಳಿಯಲ್ಲಿ ಬೆಳಿಗ್ಗೆ 8 ಗಂಟೆಯವರೆಗೆ ಸ್ವಲ್ಪ ಸಮಸ್ಯೆ ಆಗಿದ್ದು ಬಿಟ್ಟರೆ ಬೇರೆ ಎಲ್ಲೂ ಅಂತಹ ಸಮಸ್ಯೆ ಆಗಲಿಲ್ಲ’ ಎಂದು ಕೆಕೆಆರ್ಟಿಸಿ ಹೊಸಪೇಟೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ (ಡಿ.ಸಿ) ತಿಮ್ಮಾರೆಡ್ಡಿ ಹೀರಾ ‘ಪ್ರಜಾವಾಣಿ’ಗೆ ತಿಳಿಸಿದರು.
ನಗರದಲ್ಲಿ ಬೆಳಿಗ್ಗೆ 7ರಿಂದ ಸುಮಾರು ಒಂದು ಗಂಟೆ ಸಾಮಾನ್ಯ ಮಳೆ ಸುರಿದಿತ್ತು. ಆಗ ಬಸ್ಗಳ ಸಂಚಾರ ವಿರಳವಾಗಿತ್ತು. 8.30ರ ಸುಮಾರಿಗೆ ಮಳೆ ಕಡಿಮೆಯಾದ ಬಳಿಕ ಬಸ್ಗಳ ಓಡಾಟ ಸಹಜವೆಂಬಂತೆ ನಡೆಯಿತು. ನಗರದಿಂದ ಕೊಪ್ಪಳ ಮತ್ತು ಬಳ್ಳಾರಿಯತ್ತ ಸಾಕಷ್ಟು ಬಸ್ಗಳ ಸಂಚಾರ ಇರಲಿಲ್ಲವಾದರೂ, ಪ್ರಯಾಣಿಕರ ಅಗತ್ಯಕ್ಕೆ ತಕ್ಕಷ್ಟು ಬಸ್ಗಳನ್ನು ಬಿಡಲಾಯಿತು.
ಎಸ್ಪಿ ಭೇಟಿ: ಜಿಲ್ಲಾ ಪೊಲೀಸ್ ವರಿಷ್ಠ ಅರುಣಾಂಗ್ಷುಗಿರಿ ಅವರು ಇಲ್ಲಿನ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಬೆಳಿಗ್ಗೆಯಿಂದಲೇ ಒಂದು ಪೊಲೀಸ್ ಬಸ್ ಸಹಿತ ಡಿಎಆರ್ ಸಿಬ್ಬಂದಿಯನ್ನು ಬಸ್ ನಿಲ್ದಾಣದ ಬಳಿಯಲ್ಲಿ ನಿಯೋಜಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.