
ಸಿಂದಗಿ: ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಆರಂಭಿಸಿರುವ ಮಹಾಸಂಪರ್ಕ ಅಭಿಯಾನ ಕಾರ್ಯಾಗಾರ ಕಾರ್ಯಕರ್ತರಿಗೆ ಅತ್ಯಂತ ಮಹತ್ವಪೂರ್ಣದ್ದು ಎಂದು ಬಿಜೆಪಿಯ ಮಹಾಸಂಪರ್ಕ ಅಭಿಯಾನ ರಾಜ್ಯ ಸಹ–ಪ್ರಮುಖ, ಬೆಳಗಾವಿ ಮಾಜಿ ಶಾಸಕ ಅಭಯ ಪಾಟೀಲ ಹೇಳಿದರು.
 
 ನಗರದ ಜ್ಯೋತಿ ಕಲ್ಯಾಣಮಂಟಪದಲ್ಲಿ ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ಮಹಾಸಂಪರ್ಕ ಅಭಿಯಾನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಸಿಂದಗಿ ಮತಕ್ಷೇತ್ರಕ್ಕೆ ನಿಗದಿಪಡಿಸಿದ್ದ 48 ಸಾವಿರ ಸದಸ್ಯತ್ವ ಗುರಿ ತಲುಪಿರುವುದು ಸಂತಸದ ವಿಷಯ. ಈ 48 ಸಾವಿರ ಸದಸ್ಯರ ಮನೆ, ಮನೆಗೆ ಹೋಗಿ ಪಾರ್ಮ್ ಗಳನ್ನು ಭರ್ತಿ ಮಾಡಿಕೊಂಡು ಬಂದಾಗಲೇ ಸದಸ್ಯತ್ವ ಕಾರ್ಯ ಪೂರ್ಣಗೊಳ್ಳುವುದು ಎಂದರು.
 
 ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಮೇಶ ಭೂಸನೂರ ಪ್ರಸ್ತುತ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರ ಕೊರತೆ ಎದ್ದು ಕಾಣುತ್ತಲಿದ್ದು, ಗ್ರಾಮ ಪಂಚಾಯ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಮುಗಿದ ಮೇಲೆ ಅಭಿಯಾನ ಕಾರ್ಯಾಗಾರ ಆಯೋಜನೆ ಮಾಡಬೇಕಿತ್ತು ಎಂದು ತಿಳಿಸಿದರು.
 
 ರಾಜ್ಯ ಸರ್ಕಾರದ ನೀತಿಯನ್ನು ಖಂಡಿಸಿದ ಶಾಸಕರು ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅತ್ಯಂತ ಚುರುಕಾಗಿತ್ತು. ಈಗ ಅಷ್ಟೇ ನಿಧಾನವಾಗಿದೆ ಎಂದರು. ಬಿಜೆಪಿ ಪ್ರಮುಖರಾದ ಮಲ್ಲಿಕಾರ್ಜುನ ಜೋಗೂರ, ಮಹಿಬೂಬಸಾಬ ನದಾಫ, ಬಸವರಾಜ ಸಜ್ಜನ ಅವರನ್ನು ಅಭಯ ಪಾಟೀಲ ಗೌರವಿಸಿದರು.
 
 ಬಿಜೆಪಿ ಮಂಡಲ ಅಧ್ಯಕ್ಷ ಸುರೇಶ ಕಿರಣಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ಅಶೋಕ ಅಲ್ಲಾಪೂರ, ಎಂ.ಎಸ್.ಮಠ, ಶ್ರೀಮಂತ ದುದ್ದಗಿ, ರಾಜಶೇಖರ ಪೂಜಾರ, ನಾಗೇಂದ್ರ ಮಾಯಾವಂಶಿ, ಚಿದಾನಂದ ಚಲವಾದಿ ಉಪಸ್ಥಿತರಿದ್ದರು. ಬಿಜೆಪಿ ಮಂಡಲ ಪ್ರಧಾನಕಾರ್ಯದರ್ಶಿ ಸಿದ್ದು ಬುಳ್ಳಾ ಸ್ವಾಗತಿಸಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.