ಆಲಮಟ್ಟಿ (ವಿಜಯಪುರ ಜಿಲ್ಲೆ):‘ಲಾಕ್ ಡೌನ್ ಹಾಗೂ ಬೆಲೆ ಕುಸಿತದ ಕಾರಣ ಟೊಮೆಟೊ ಹಣ್ಣು ಹರಿಯದೆ ಹೊಲದಲ್ಲೇ ಬಿಟ್ಟಿದ್ದೇವೆ. ಖರ್ಚು ಮಾಡಿದ್ದ ₹60 ಸಾವಿರ, 3 ತಿಂಗಳ ಶ್ರಮ ವ್ಯರ್ಥವಾಗಿದೆ’ ಎಂದು ನೊಂದು ನುಡಿದರು ಬೇನಾಳ ಆರ್ಎಸ್ ಗ್ರಾಮದ ಬುಡ್ಡೇಸಾಬ್ ಬಾಗವಾನ.
ಈಗಿನ ಸಂಕಷ್ಟದ ಸ್ಥಿತಿ ಇಲ್ಲದಿದ್ದರೆ ಇಲ್ಲದಿದ್ದರೆ ಸುಮಾರು ₹2.5 ಲಕ್ಷದವರೆಗೆ ಆದಾಯ ಬರುತ್ತಿತ್ತು.ಎರಡು ಎಕರೆ ಪ್ರದೇಶದಲ್ಲಿ ಕಷ್ಟ ಪಟ್ಟು ಮೂರು ತಿಂಗಳ ಹಿಂದೆ ಹಾಕಿದ ಟೊಮೆಟೊ, ಉತ್ತಮ ಫಸಲು ನೀಡಿತ್ತು. ಈಗ ಟೊಮೆಟೊ ಕಿತ್ತರೂ ಮಾರಾಟಕ್ಕೆ ಮಾಡಿದ ವೆಚ್ಚವೂ ಸಿಗಲ್ಲ. 15 ದಿನಗಳಿಂದ ಹೊಲವನ್ನು ನೋಡಿಲ್ಲ ಎಂದು ಅವರು ಹೇಳಿದರು.
ಬೇನಾಳ ಹಾಗೂ ಸುತ್ತಮುತ್ತಲಿನ ಜನ ಇದನ್ನು ತಿಳಿದು ಬುಟ್ಟಿ, ಚೀಲಗಟ್ಟಲೇ ಟೊಮೆಟೊ ಹರಿದುಕೊಂಡು ಹೋಗುತ್ತಿದ್ದಾರೆ. ದನ, ಕುರಿಗಳನ್ನು ಮೇಯಿಸುತ್ತಿದ್ದಾರೆ. ಇದರಿಂದ ಎರಡು ಎಕರೆ ಟೊಮೆಟೊ ಸಂಪೂರ್ಣ ನಾಶವಾಗುವತ್ತ ಸಾಗಿದೆ.
‘ಟೊಮೆಟೊ ಕಿತ್ತು, ಅದನ್ನು ತುಂಬಿ, ನಿಡಗುಂದಿ ಸುತ್ತಮುತ್ತಲೂ ವಾಹನದಲ್ಲಿ ಮಾರಾಟ ಮಾಡಿದರೂ ಅದರ ಬಾಡಿಗೆ ಹಣವೂ ಮಾರಾಟದಿಂದ ದಕ್ಕದು. ಸಗಟಾಗಿ ಖರೀದಿಸುವವರೂ ಯಾರೂ ಇಲ್ಲ, 25 ಕೆ.ಜಿ ತೂಕದ ಟ್ರೆ ಹಣ್ಣನ್ನು ₹ 50ಕ್ಕೂ ಕೇಳುವವರಿಲ್ಲ. ಹೀಗಾಗಿ ಅದನ್ನು ಹರಿಯದೆ ಹಾಗೆ ಬಿಟ್ಟಿದ್ದೇನೆ’ ಎಂದು ಬುಡ್ಡೇಸಾಬ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.