ವಿಜಯಪುರ: ನಗರದಲ್ಲಿ ಇದುವರೆಗೆ ಶೇ 72 ರಷ್ಟು ಜನ ಲಸಿಕೆ ಪಡೆದುಕೊಂಡಿದ್ದು, ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಕೋವಿಡ್ ಮೂರನೇ ಅಲೆ ಪ್ರಾರಂಭವಾಗುವುದಕ್ಕಿಂತ ಮೊದಲು ವಿಜಯಪುರ ನಗರವನ್ನು ಶೇ 100ರಷ್ಟು ಲಸಿಕೆ ಪಡೆದ ನಗರವನ್ನಾಗಿಸುವ ಗುರಿ ಇದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ವಕೀಲರ ಸಭಾಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕೋವಿಡ್-19 ಜಾಗೃತಿ ಹಾಗೂ ಲಸಿಕಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭೂಮಿ ಪೂಜೆ: ಮಹಾನಗರ ಪಾಲಿಕೆ 14ನೇ ಹಣಕಾಸು ನಿಧಿಯಲ್ಲಿ ನಗರದ ಡಾ. ಕರಿಗೌಡರ ಲ್ಯಾಬ್ ಹತ್ತಿರ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
15ನೇ ಹಣಕಾಸು ನಿಧಿಯಲ್ಲಿ ನಗರ ನೀರು ಸರಬರಾಜು ಮಂಡಳಿಗೆ ಮಂಜೂರಾದ ರೂ 1 ಕೋಟಿ ಮೊತ್ತದ ನಗರದ ತಾಜ್ ಬಾವಡಿಗೆ ಬೃಹತ್ ನೀರು ಶುದ್ಧೀಕರಣ ಘಟಕ ಅಳವಡಿಕೆ ಹಾಗೂ ಸುತ್ತಲಿನ ಕಾಲೊನಿಗಳಿಗೆ ಶುದ್ಧ ನೀರು ಪೂರೈಸುವ ಪೈಪ್ ಲೈನ್ ಅಳವಡಿಕೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಯಕ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಜಿರಾಳೆ, ಪಾಲಿಕೆ ಮಾಜಿ ಸದಸ್ಯರಾದ ಎಂ.ಎಸ್.ಕರಡಿ, ರಾಹುಲ್ ಜಾಧವ್, ಡಾ. ಬಾಲಕೃಷ್ಣ, ಡಾ.ಜನ್ನತ್, ಡಾ.ಜಯಶ್ರೀ ಮಸಳಿ, ಚಂದ್ರು ಚೌಧರಿ, ಸಂತೋಷ ತಳಕೇರಿ, ಶಿವರುದ್ರ ಬಾಗಲಕೋಟ, ಡಾ.ಮಹೇಶ ಕರಿಗೌಡರ, ಕೃಷ್ಣಾ ಗುನಾಳಕರ, ಮಹೇಶ ಪಾಟೀಲ, ವೇಣುಗೋಪಾಲ ಜೋಶಿ, ದತ್ತಾ ಗೊಲಾಂಡೆ, ಪ್ರಕಾಶ ಚವ್ಹಾಣ, ರಾಜಶೇಖರ ಭಜಂತ್ರಿ, ನಾಗರಾಜ ಮುಳವಾಡ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.