ADVERTISEMENT

ಹೃದ್ರೋಗಗಳ ನೆರವಿಗೆ ಮನೆ ಬಾಗಿಲಿಗೆ ಅಂಬುಲೆನ್ಸ್‌ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 14:27 IST
Last Updated 29 ಸೆಪ್ಟೆಂಬರ್ 2021, 14:27 IST
ವಿಜಯಪುರ ನಗರದಲ್ಲಿ ರಾಘವೇಂದ್ರ ಕಾರ್ಡಿಯೊ ಕೇರ್‌ ವತಿಯಿಂದ ಅರಂಭಿಸಿರುವ ಹೃದ್ರೋಗಿಗಳ  ಮನೆ ಬಾಗಿಲಿಗೆ ಅಂಬುಲೆನ್ಸ್‌ ಸೌಲಭ್ಯ ಕಲ್ಪಿಸುವ ಕಾರ್ಯಕ್ಕೆ ಹೃದ್ರೋಗ ತಜ್ಞ ಡಾ.ಕಿರಣ್‌ ಚುಳಕಿ ಚಾಲನೆ ನೀಡಿದರು
ವಿಜಯಪುರ ನಗರದಲ್ಲಿ ರಾಘವೇಂದ್ರ ಕಾರ್ಡಿಯೊ ಕೇರ್‌ ವತಿಯಿಂದ ಅರಂಭಿಸಿರುವ ಹೃದ್ರೋಗಿಗಳ  ಮನೆ ಬಾಗಿಲಿಗೆ ಅಂಬುಲೆನ್ಸ್‌ ಸೌಲಭ್ಯ ಕಲ್ಪಿಸುವ ಕಾರ್ಯಕ್ಕೆ ಹೃದ್ರೋಗ ತಜ್ಞ ಡಾ.ಕಿರಣ್‌ ಚುಳಕಿ ಚಾಲನೆ ನೀಡಿದರು   

ವಿಜಯಪುರ: ನಗರದಲ್ಲಿ ಪ್ರಥಮ ಬಾರಿಗೆ ತುರ್ತು ಹೃದ್ರೋಗ ತಪಾಸಣೆಗೆ ಸಂಬಂಧಿಸಿದಂತೆ ರೋಗಿಗಳ ಮನೆ ಬಾಗಿಲಿಗೆ ಅಂಬುಲೆನ್ಸ್‌ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಆರಂಭಿಸಿರುವುದಾಗಿರಾಘವೇಂದ್ರ ಕಾರ್ಡಿಯೊ ಕೇರ್‌ನ ಮುಖ್ಯಸ್ಥರಾದ ಹೃದ್ರೋಗ ತಜ್ಞ ಡಾ.ಕಿರಣ್‌ ಚುಳಕಿ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಹೃದಯಾಘಾತ ಅಥವಾ ಹೃದಯ ಸಂಬಂಧಿ ಸಮಸ್ಯೆಗಳು ಯಾರಿಗಾದರೂ ಕಾಣಿಸಿಕೊಂಡರೆ ರಾಘವೇಂದ್ರ ಕಾರ್ಡಿಯೊ ಕೇರ್‌ನ ಸಹಾಯವಾಣಿ ಸಂಖ್ಯೆ 8197318833/9902208108 ಗೆ ಕರೆ ಮಾಡಿದರೆ. ಆ ಕ್ಷಣವೇ ಅಂಬುಲೆನ್ಸ್‌ ಮನೆ ಬಾಗಿಲಿಗೆ ಬರಲಿದೆ ಎಂದು ಹೇಳಿದರು.

ಮನೆಗೆ ಬರುವ ವೈದ್ಯ ಸಿಬ್ಬಂದಿ ಅಲ್ಲಿಯೇ ರೋಗಿಯ ಇಸಿಜಿ ಮಾಡಲಿದ್ದು, ಆ ಕ್ಷಣವೇ ವರದಿಯನ್ನು ಆಸ್ಪತ್ರೆಯಲ್ಲಿರುವ ವೈದ್ಯರಿಗೆ ಕಳುಹಿಸಲಿದ್ದಾರೆ. ವೈದ್ಯರ ಸಲಹೆ ಮೇರೆಗೆ ಮುಂದಿನ ಚಿಕಿತ್ಸೆ ಕೈಗೊಳ್ಳುವ ಮೂಲಕ ರೋಗಿಯ ಅಗತ್ಯ ಚಿಕಿತ್ಸೆ, ನೆರವು ನೀಡಲಾಗಿದೆ ಎಂದು ತಿಳಿಸಿದರು.

ADVERTISEMENT

ರಾತ್ರಿ ವೇಳೆ ಹೃದಯ ಸಂಬಂಧಿ ತೊಂದರೆ ಕಾಣಿಸಿಕೊಂಡಾಗ ವೈದ್ಯರು ಸಿಗುತ್ತಾರೋ ಇಲ್ಲವೋ, ಆಸ್ಪತ್ರೆ ಬಾಗಿಲು ತೆರೆದಿರುತ್ತಾರೋ ಇಲ್ಲವೋ ಎಂದು ಕಾಯುವ ಬದಲು24X7 ಲಭ್ಯ ಇರುವ ಈ ಅಂಬುಲೆನ್ಸ್‌ಗೆ ಫೋನ್‌ ಕರೆ ಮಾಡಿದರೆ ತಕ್ಷಣವೇ ಸ್ಥಳಕ್ಕೆ ಆಗಮಿಸಲಿದೆ. ಅಗತ್ಯ ಚಿಕಿತ್ಸೆಯಿದ್ದರೆ ಆ ಕ್ಷಣವೇ ಆಸ್ಪತ್ರೆಗೆ ಸಾಗಿಸಿ ಸೂಕ್ತ ಚಿಕತ್ಸೆ ನೀಡಲಾಗುವುದು ಎಂದರು.

ಈ ಅಂಬುಲೆನ್ಸ್‌ ಸೌಲಭ್ಯ ಸದ್ಯಕ್ಕೆ ವಿಜಯಪುರ ನಗರಕ್ಕೆ ಸೀಮಿತವಾಗಿದೆ. ಅಂಬುಲೆನ್ಸ್ ಮತ್ತು ಇಸಿಜಿ ವೆಚ್ಚ ₹700 ಆಗಲಿದೆ ಎಂದು ಹೇಳಿದರು.

ಎಂಥದೇ ಹೃದ್ರೋಗಗಳಿಗೆ ಸಂಬಂಧಿಸಿದಂತೆ ವಿಜಯಪುರ ನಗರದಲ್ಲೇ ಆರೋಗ್ಯ ಸೌಲಭ್ಯಗಳಿವೆ. ಬೇರೆ ನಗರಗಳನ್ನು ಅವಲಂಭಿಸುವ ಅಗತ್ಯವಿಲ್ಲ ಎಂದು ತಿಳಿಸಿದರು.

ಹೃದಯದ ಬಗ್ಗೆ ಜನರು ಹೆಚ್ಚು ಕಾಳಜಿ ವಹಿಸಬೇಕು. ಚಿಕ್ಕ ವಯಸ್ಸಿನವರಿಗೂ ಹೃದಯ ಸಂಬಂಧಿ ಕಾಯಿಲೆಗಳು ಬಾಧಿಸುತ್ತಿವೆ. ವರ್ಷಕ್ಕೊಮ್ಮೆಯಾದರೂ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿಶ್ವ ಹೃದಯ ದಿನದ ಅಂಗವಾಗಿ ನಗರದ ಲಕ್ಷ್ಮಿ ಗುಡಿ ಎದುರು ಇರುವ ರಾಘವೇಂದ್ರ ಕಾರ್ಡಿಯೊ ಕೇರ್‌ನಲ್ಲಿ ಉಚಿತ ಇಸಿಜಿ, ಇಕೋ ಪರೀಕ್ಷೆ, ಬಿಪಿ ಪರೀಕ್ಷೆ ಹಾಗೂ ಹೃದಯ ರೋಗಗಳ ಬಗ್ಗೆ ಜಾಗೃತಿ, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಉಚಿತ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು 50 ಜನರು ಶಿಬಿರದಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.