ನಾಲತವಾಡ (ವಿಜಯಪುರ): ‘ಮೀಸಲಾತಿ ಕೊಡುವುದಾಗಿ ಮಾತು ಕೊಟ್ಟು ತಪ್ಪಿದ್ದಕ್ಕೆ ಯಡಿಯೂರಪ್ಪ ಅಧಿಕಾರ ಕಳೆದುಕೊಂಡ. ಇನ್ನು ನಮಗೆ 2ಎ ಮೀಸಲಾತಿ ನೀಡದಿದ್ದರೆ ಬೊಮ್ಮಾಯಿ ಸರ್ಕಾರಕ್ಕೂ ಶಾಕ್ ಗ್ಯಾರಂಟಿ’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಿತ್ತೂರ ಚನ್ನಮ್ಮ ಸಾಮಾಜಿಕ ಸೇವಾ ಸಂಘದಡಿ ಗುರುವಾರ ಹಮ್ಮಿಕೊಂಡಿದ್ದ ಕಿತ್ತೂರ ಚನ್ನಮ್ಮನ 243ನೇ ಜಯಂತಿ ಹಾಗೂ 198ನೇ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಬೇಡಿಕೆಗೆ ಅನುಗುಣವಾಗಿ ಮೀಸಲಾತಿ ನೀಡದವರು ಮಣ್ಣು ಮುಕ್ಕಿದ್ದಾರೆ. ಬೊಮ್ಮಾಯಿ ಸಹ 3 ತಿಂಗಳಲ್ಲಿ ಮೀಸಲಾತಿ ಘೋಷಿಸುವ ಭರವಸೆ ನೀಡಿದ್ದಾರೆ. ಕಾದು ನೋಡೋಣ’ ಎಂದು ಹೇಳಿದರು.
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ‘ಮುಖ್ಯಮಂತ್ರಿ ಬೊಮ್ಮಾಯಿ ನಮ್ಮ ಸಮಾಜಕ್ಕೆ ಯಾವ ಕೊಡುಗೆ ಕೊಡುತ್ತಾರೋ ನೋಡೋಣ. ಇವರೂ ಭರವಸೆಯಲ್ಲೇ ಕಾಲ ಕಳೆದರೆ ಅಧಿಕಾರದಿಂದ ಕೆಳಗೆ ಇಳಿಸಿ ಬಿಡೋಣ’ ಎಂದರು.
ಕೂಡಲಸಂಗಮ ಬಸವಜಯ ಮೃತ್ಯುಂಜಯ ಶ್ರೀಗಳು ಆಶೀರ್ವಚನ ನೀಡಿ, ‘ಮೀಸಲಾತಿ ಸಿಗುವವರೆಗೂ ಹೋರಾಟ ಕೈ ಬಿಡುವ ಪ್ರಶ್ನೆಯೇ ಇಲ್ಲ. ಈ ಬಾರೀ ಸುಮಾರು 20 ಲಕ್ಷ ಮಂದಿಯನ್ನು ಸೇರಿಸಿ ಹೋರಾಟ ಮಾಡುತ್ತೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.