ADVERTISEMENT

ವಿಜಯಪುರ: 'ಆರು ತಿಂಗಳೊಳಗೆ ಸೈಕ್ಲಿಂಗ್ ವೆಲೆಡ್ರೊಮ್ ಸಿದ್ಧವಾಗಬೇಕು'–ನಾರಾಯಣ ಗೌಡ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 7:14 IST
Last Updated 1 ಮಾರ್ಚ್ 2021, 7:14 IST
ಸೈಕ್ಲಿಸ್ಟ್‌ಗಳ ಜೊತೆ ಮಾತನಾಡಿದ ಸಚಿವ ಡಾ. ನಾರಾಯಣಗೌಡ
ಸೈಕ್ಲಿಸ್ಟ್‌ಗಳ ಜೊತೆ ಮಾತನಾಡಿದ ಸಚಿವ ಡಾ. ನಾರಾಯಣಗೌಡ   

ವಿಜಯಪುರ: ಐದು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸೈಕ್ಲಿಂಗ್ ವೆಲೊಡ್ರೊಮ್ ಕಾಮಗಾರಿ ಆರು ತಿಂಗಳೊಳಗೆ ಮುಗಿಸಬೇಕು. ಇಲ್ಲದಿದ್ದರೆ ಗುತ್ತಿಗೆದಾರರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಸಚಿವ ಡಾ. ನಾರಾಯಣಗೌಡ ಹೇಳಿದರು.

ವಿಜಯಪುರ ನಗರದಲ್ಲಿರುವ ಸೈಕ್ಲಿಂಗ್ ವೆಲೊಡ್ರೊಮ್ ಕಾಮಗಾರಿ ಪರಿಶೀಲಿಸಿದ ಸಚಿವರು, ಗುತ್ತಿಗದಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಆರು ತಿಂಗಳೊಳಗೆ ಸೈಕ್ಲಿಂಗ್ ವೆಲೆಡ್ರೊಮ್ ಸಿದ್ಧವಾಗಬೇಕು. ತಾಂತ್ರಿಕ ಸಮಸ್ಯೆ ಸರಿಪಡಿಸಿ, ನಿಯಮಾನುಸಾರ ಕಾಮಗಾರಿ ಮಾಡಬೇಕು. ಇಲ್ಲದಿದ್ದಲ್ಲಿ ಗುತ್ತಿಗೆದಾರರನ್ನ ಕಪ್ಪುಪಟ್ಟಿಗೆ ಸೇರಿಸುವುದಾಗಿ ಸಚಿವರು ಎಚ್ಚರಿಕೆ ನೀಡಿದರು.

ADVERTISEMENT

ಇದಕ್ಕು ಮುನ್ನ ಸಚಿವರು ಸೈಕ್ಲಿಸ್ಟ್‌ಗಳನ್ನು ಭೇಟಿ ಮಾಡಿದರು. ಇಲಾಖೆಯಿಂದ ನೀಡುತ್ತಿರುವ ಕ್ರೀಡಾ ಸೌಲಭ್ಯ ಸರಿಯಾಗಿ ತಲುಪುತ್ತಿದೆಯೆ ಎಂದು ಮಾಹಿತಿ ಪಡೆದರು.

ಈ ವೇಳೆ ಕ್ರೀಡಾ ವಸತಿ ನಿಲಯದಲ್ಲಿ ಊಟದ ವ್ಯವಸ್ಥೆ ಇನ್ನೂ ಆರಂಭಿಸಿಲ್ಲದ ಕಾರಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತಕ್ಷಣವೆ ಊಟ, ತಿಂಡಿ ವ್ಯವಸ್ಥೆ ಆರಂಭಿಸಿ, ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಜಯಪುರ ಸೈಕ್ಲಿಂಗ್‌ಗೆ ಅಂತರರಾಷ್ಟ್ರಮಟ್ಟದಲ್ಲಿ ಹೆಸರುಮಾಡಿದೆ. ಸೈಕ್ಲಿಂಗ್‌ನಲ್ಲಿ ಇನ್ನಷ್ಟು ಸಾಧನೆ ಮಾಡಬೇಕು. ಅದಕ್ಕೆ ಬೇಕಾದ ಎಲ್ಲ ಕ್ರೀಡಾ ಸೌಲಭ್ಯ ನೀಡಲು ನಾನು ಉತ್ಸುಕನಾಗಿದ್ದೇನೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದರು.

ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಕ್ರೀಡಾ ಇಲಾಖೆ ಅಧಿಕಾರಿ ಎಸ್.ಜಿ. ಲೋಣಿ, ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.