ADVERTISEMENT

ರಾಜ್ಯದಲ್ಲಿ ಕುಗ್ಗುತ್ತಿದೆ ಅರಣ್ಯ ಪ್ರದೇಶ: ಅರಣ್ಯ ಸಚಿವ ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 4:28 IST
Last Updated 2 ಸೆಪ್ಟೆಂಬರ್ 2025, 4:28 IST
<div class="paragraphs"><p>ಮುದ್ದೇಬಿಹಾಳ ಪಟ್ಟಣದ ಮದರಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ, ರಡ್ಡಿ ಸಹಕಾರ ಬ್ಯಾಂಕ್‌ನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ಸಚಿವರಾದ ಎಚ್.ಕೆ.ಪಾಟೀಲ, ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ ಚಾಲನೆ ನೀಡಿದರು</p></div>

ಮುದ್ದೇಬಿಹಾಳ ಪಟ್ಟಣದ ಮದರಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ, ರಡ್ಡಿ ಸಹಕಾರ ಬ್ಯಾಂಕ್‌ನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ಸಚಿವರಾದ ಎಚ್.ಕೆ.ಪಾಟೀಲ, ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ ಚಾಲನೆ ನೀಡಿದರು

   

ಮುದ್ದೇಬಿಹಾಳ: ‘ಪ್ರಕೃತಿ ವಿಕೋಪದಿಂದ ಮೇಘ ಸ್ಪೋಟ ಆಗುತ್ತಿದೆ. ಮಳೆ ಬೇಕಾದಾಗ ಬಾರದೇ ಬೇಡವಾದ ಸುರಿಯುತ್ತಿದೆ. ರಾಜ್ಯದಲ್ಲಿ ಅರಣ್ಯ ಕ್ಷೇತ್ರ ಕಡಿಮೆ ಆಗುತ್ತಿದೆ. ಅರಣ್ಯ ಸಂರಕ್ಷಣೆಯತ್ತ ನಾವಾರೂ ಚಿಂತಿಸುತ್ತಿಲ್ಲ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ತಾಲ್ಲೂಕಿನ ಬಿದರಕುಂದಿ ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಸೋಮವಾರ ಏರ್ಪಡಿಸಿದ್ದ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನ ನಿರ್ಮಾಣಕ್ಕೆ ಶಂಕುಸ್ಥಾಪನೆ, ರಡ್ಡಿ ಸಹಕಾರ ಬ್ಯಾಂಕ್‌ನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಅಂಗವಾಗಿ ಮುದ್ದೇಬಿಹಾಳದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ಕಲ್ಯಾಣ ಕರ್ನಾಟಕ, ಕಿತ್ತೂರ ಕರ್ನಾಟಕ ಭಾಗದಲ್ಲಿ ಶೇ 5ಕ್ಕಿಂತ ಕಡಿಮೆ ಅರಣ್ಯ ಇದೆ. ವಿಜಯಪುರ ಜಿಲ್ಲೆಯಲ್ಲಿ ಶೇ 0.5 ಪ್ರಮಾಣ ಇದೆ. ಆದರೆ ಸಚಿವ ಎಂ.ಬಿ.ಪಾಟೀಲರು ಗಿಡಗಳನ್ನು ಬೆಳೆಸಿದ್ದಾರೆ. ಕ್ಷೇತ್ರದ ಶಾಸಕ ನಾಡಗೌಡರು 37 ಎಕರೆ ಜಮೀನು ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ಕೊಟ್ಟಿದ್ದಾರೆ. ಶಾಸಕರ ಶ್ರಮದಿಂದ ₹2 ಕೋಟಿ ವೆಚ್ಚದಲ್ಲಿ ವೃಕ್ಷ್ಯೋದ್ಯಾನ ಅಭಿವೃ‌ದ್ಧಿ ಮಾಡಲಾಗುವುದು’ ಎಂದರು.

‘ಮುದ್ದೇಬಿಹಾಳದ ಬಿದರಕುಂದಿ ಬೆಟ್ಟದಲ್ಲಿ 3,760 ಸಸ್ಯ ಪ್ರಬೇಧಗಳನ್ನು ನೆಡಲಾಗಿದೆ. ಆರು ತಿಂಗಳಲ್ಲಿ ಇದನ್ನು ಪೂರ್ಣಗೊಳಿಸಲಾಗುವುದು’ ಎಂದು ತಿಳಿಸಿದರು.

‘ರಡ್ಡಿ ಸಹಕಾರ ಬ್ಯಾಂಕ್‌ಗೆ 111 ವರ್ಷವಾಗಿದ್ದು, ರಾಜ್ಯದ ಹಲವಡೆಯ ಬ್ಯಾಂಕ್‌ನ ಶಾಖೆಗಳಲ್ಲಿ ಅತೀ ಕಡಿಮೆ ಬಂಡವಾಳ ಹೊಂದಿರುವ ಶಾಖೆ ಮುದ್ದೇಬಿಹಾಳದ್ದಾಗಿದೆ. ಬ್ಯಾಂಕಿನ ಅಂಕಿ ಸಂಖ್ಯೆ ಎರಡು ವರ್ಷಗಳಲ್ಲಿ ಹೆಚ್ಚಳವಾಗಬೇಕು. ಈ ಜವಾಬ್ದಾರಿ ನಾಡಗೌಡರ ಮೇಲಿದೆ‘ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಶಾಸಕ ಸಿ.ಎಸ್.ನಾಡಗೌಡ ಮಾತನಾಡಿದರು. ಸಚಿವ ಎಂ.ಬಿ.ಪಾಟೀಲ, ಎರೆಹೊಸಳ್ಳಿ ವೇಮನಾನಂದ ಸ್ವಾಮೀಜಿ, ಇಲಕಲ್ ಗುರುಮಹಾಂತ ಸ್ವಾಮೀಜಿ, ಸಂಸದ ರಮೇಶ ಜಿಗಜಿಣಗಿ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಗ್ರಾ.ಪಂ ಅಧ್ಯಕ್ಷೆ ರೂಪಾ ಚಲವಾದಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ, ಅರಣ್ಯ ಇಲಾಖೆಯ ಮಂಜುನಾಥ ಚವ್ಹಾಣ, ಮಲ್ಲಿನಾಥ ಕುಸನಾಳ, ಕೆ.ಆರ್.ಐ.ಡಿ.ಎಲ್ ಇಇ ಆನಂದ, ಬಸನಗೌಡ ಬಿರಾದಾರ, ಗಿರೀಶ ಅಲಕುಡೆ ಇದ್ದರು.

ಗದ್ದಲ: ಮದರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜನರು ಒಮ್ಮೆಲೆ ಸನ್ಮಾನಕ್ಕೆ ಮುಂದಾದ್ದರಿಂದ ಕೆಲಕಾಲ ಗದ್ದಲದ ವಾತಾವರಣ ಉಂಟಾಯಿತು. ಅಲ್ಲದೇ ವೇದಿಕೆ ಪಕ್ಕದಲ್ಲಿಯೇ ಇದ್ದ ಊಟದ ಸ್ಥಳದಿಂದ ಸಾರ್ವಜನಿಕರು ಒಮ್ಮೆಲೆ ಊಟಕ್ಕೆ ತೆರಳಿದ್ದರಿಂದ ನೂಕುನುಗ್ಗಲು ಉಂಟಾಯಿತು. ಮಹಿಳೆಯರಿಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಿರಲಿಲ್ಲ. 

ಜಿ.ಪಂ, ತಾ.ಪಂ ಚುನಾವಣೆ ಶೀಘ್ರ: ಸಚಿವ ಎಚ್.ಕೆ.ಪಾಟೀಲ

ಮುದ್ದೇಬಿಹಾಳ: ‘ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ತ್ವರಿತವಾಗಿ ನಡೆಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಹಲವಾರು ಕಾನೂನು ತೊಡಕುಗಳು ಇರುವುದರಿಂದ ಅವುಗಳನ್ನು ಬಗೆಹರಿಸಿಕೊಂಡು ಚುನಾವಣೆ ನಡೆಸಲಾಗು ತ್ತದೆ’ ಎಂದು ತಿಳಿಸಿದರು.

ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ಆಗದೇ ಸಂಕಷ್ಟದಲ್ಲಿದ್ದು, ಬಿಲ್ ಪಾವತಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಉತ್ತರಿಸಿದ ಸಚಿವರು, ‘ಎಲ್ಲರಿಗೂ ಒಮ್ಮೆಗೆ ಬಿಲ್ ಪಾವತಿ ಮಾಡಲು ಆಗುವುದಿಲ್ಲ. ವಿಳಂಬ ಆಗುತ್ತಿರುವುದು ನಿಜ. ಆದರೆ ಸೂಕ್ತ ಸಮಯದಲ್ಲಿ ಬಿಲ್ ಪಾವತಿಸಲಾಗುವುದು. ಸಂಬಂಧಪಟ್ಟ ಸಚಿವರನ್ನು ಕೇಳಿ’ ಎಂದು ಹೇಳಿದರು.

ಮುದ್ದೇಬಿಹಾಳ ಮತಕ್ಷೇತ್ರದ ಮೂರ‍್ನಾಲ್ಕು ಐತಿಹಾಸಿಕ ಕ್ಷೇತ್ರಗಳ ಕುರಿತು ಶಾಸಕ ನಾಡಗೌಡ ಪ್ರಸ್ತಾವನೆ ಸಲ್ಲಿಸಿದ್ದಾರೆ. ಪರಿಶೀಲಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

ಬಿದರಕುಂದಿ ಸಾಲುಮರದ ವೃಕ್ಷೋದ್ಯಾನಕ್ಕೆ ತೆರಳಲು ಜೀಪ್ ಲೈನ್ ನಿರ್ಮಾಣ ಮಾಡಬೇಕು ಎಂಬ ಪರಿಸರ ಪ್ರಿಯರ ಬೇಡಿಕೆಯ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಕ್ರಮ ಕೈಗೊಳ್ಳುವುದಾಗಿ ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯಿಸಿದರು.

ಶಾಸಕ ಸಿ.ಎಸ್.ನಾಡಗೌಡ, ಮುಖಂಡ ಸಿ.ಬಿ.ಅಸ್ಕಿ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಪ್ರಭುರಾಜ ಕಲ್ಬುರ್ಗಿ, ಸತೀಶ ಓಸ್ವಾಲ ಮೊದಲಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.