ADVERTISEMENT

Womens Day: 6 ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾದರೂ ಬತ್ತದ ಬದುಕಿನ ಉತ್ಸಾಹ

ಅಮರನಾಥ ಹಿರೇಮಠ
Published 8 ಮಾರ್ಚ್ 2024, 6:02 IST
Last Updated 8 ಮಾರ್ಚ್ 2024, 6:02 IST
ದೇವರಹಿಪ್ಪರಗಿ ಪಟ್ಟಣದ ವೈದ್ಯೆ ದಾನಮ್ಮ ವಾಲಿ ಬೆಂಗಳೂರಿನ ತಮ್ಮ ಆಸ್ಪತ್ರೆಯಲ್ಲಿ ರೋಗಿಯನ್ನು ಪರೀಕ್ಷಿಸುತ್ತಿರುವುದು
ದೇವರಹಿಪ್ಪರಗಿ ಪಟ್ಟಣದ ವೈದ್ಯೆ ದಾನಮ್ಮ ವಾಲಿ ಬೆಂಗಳೂರಿನ ತಮ್ಮ ಆಸ್ಪತ್ರೆಯಲ್ಲಿ ರೋಗಿಯನ್ನು ಪರೀಕ್ಷಿಸುತ್ತಿರುವುದು   

ದೇವರಹಿಪ್ಪರಗಿ: ಆತ್ಮವಿಶ್ವಾಸದಿಂದ  ಅಂಗವೈಕಲ್ಯಗಳನ್ನು ಮೆಟ್ಟಿ ನಿಂತ ದಾನಮ್ಮ ವಾಲಿ, ವೈದ್ಯೆಯಾಗಿ ಇತರರಿಗೂ ಮಾದರಿಯಾಗಿದ್ದಾರೆ.

ಪಟ್ಟಣದ ಮಧ್ಯಮ ವರ್ಗದಲ್ಲಿ ಜನಿಸಿದ ದಾನಮ್ಮ, ಬಾಲ್ಯದಲ್ಲೇ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದರೂ ಸತತ ಪರಿಶ್ರಮ, ಆತ್ಮವಿಶ್ವಾಸದಿಂದ ಗುರಿ ತಲುಪಿ ಸದ್ಯ ಬೆಂಗಳೂರಿನಲ್ಲಿ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಎಸ್ಸೆಸ್ಸೆಲ್ಸಿ ಓದುವಾಗ ಬೆನ್ನಿನ ಬಲಭಾಗದಲ್ಲಿ ಬೆನ್ನುಹುರಿಯ ಗಡ್ಡೆಯಾಗಿ  ಪ್ರಥಮ ಬಾರಿಗೆ ಹಾಗೂ ಪಿಯುಸಿ ಮೊದಲ ವರ್ಷದಲ್ಲಿ ಎರಡನೇ ಬಾರಿಗೆ ಶಸ್ತ್ರಚಿಕಿತ್ಸೆಗೆ ಒಳಗಾದೆ. ಈ ಎರಡು ಶಸ್ತ್ರಚಿಕಿತ್ಸೆಗಳು ನನ್ನನ್ನು ಶಾಶ್ವತ ಅಂಗವಿಕಲತೆಗೆ ದೂಡಿದವು ಎನ್ನುತ್ತಾರೆ ದಾನಮ್ಮ.

ADVERTISEMENT

‘ಬಲಗಾಲಿನ ನರಗಳು ಕಾರ್ಯನಿರ್ವಹಿಸದೇ ನಡೆಯಲು ಅಸಹಾಯಕಳಾದೆ. ನಂತರದ ದಿನಗಳಲ್ಲಿ ಕೊಂಚ ಆರೋಗ್ಯ ಸುಧಾರಿಸಿತು. ಗದಗ ಡಿಜಿಎಮ್ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಸಿಕ್ಕಿತು. ವೈದ್ಯಕೀಯ ಶಿಕ್ಷಣದ 4 ವರ್ಷ ಸುಗಮವಾಗಿತ್ತು. ಇಂಟರ್ನ್‌ಶಿಪ್‌ ಸಮಯದಲ್ಲಿ ಮತ್ತೇ ಗಡ್ಡೆ ಕಾಣಿಸಿ ಎರಡು ಬಾರಿ ಶಸ್ತ್ರಕ್ರಿಯೆಗೆ ಒಳಗಾದೆ. ಇದೇ ಸಂದರ್ಭದಲ್ಲಿ ನೀಟ್ ಪರೀಕ್ಷೆ ತೇರ್ಗಡೆ ಹೊಂದಿ, ಬೆಂಗಳೂರಿನ ಸರ್ಕಾರಿ ಆಯುರ್ವೇದ್ ವೈದ್ಯಕೀಯ ಕಾಲೇಜಿನಲ್ಲಿ ಎಂ.ಡಿ ಅಧ್ಯಯನಕ್ಕೆ ಪ್ರವೇಶ ಪಡೆದೆ. ಈ ಸಂದರ್ಭದಲ್ಲಿ ಮತ್ತೇ ಶಸ್ತ್ರಚಿಕಿತೆಗೆ ಒಳಗಾದೆ ಇದು ನನ್ನ 6ನೇ ಶಸ್ತ್ರಚಿಕಿತ್ಸೆ!...ಎನ್ನುತ್ತಾರೆ ಅವರು.

‘ನನ್ನ ತಂದೆ ಗುರುರಾಜ, ತಾಯಿ ಶಿವಲೀಲಾ ಬಡತನದ ಮಧ್ಯೆಯೂ ನನ್ನನ್ನು ಉಳಿಸಿದರು. ನನ್ನ ಜೀವನದ ಕಷ್ಟದ ದಿನಗಳಲ್ಲಿ ನರಗಳ ತಜ್ಞ ವೈದ್ಯರಾದ ಪ್ರಶಾಂತ ಕಟಕೋಳ ಹಾಗೂ ದೇವರಹಿಪ್ಪರಗಿಯ ಡಾ.ಆರ್.ಆರ್.ನಾಯಿಕ್ ತಮ್ಮ ಆತ್ಮವಿಶ್ವಾಸದ ಮಾತುಗಳ ಮೂಲಕ ನನ್ನಲ್ಲಿ ಹೊಸ ಚೈತನ್ಯ ಮೂಡಿಸಿದರು’ ಎಂದು ದಾನಮ್ಮ ಅವರ ಕಷ್ಟದ ದಿನಗಳನ್ನು ಮೆಲುಕು ಹಾಕಿದರು.

ಪ್ರಸ್ತುತ ಬೆಂಗಳೂರಿನ ಯಶವಂತಪುರದಲ್ಲಿ ಸ್ವಂತ ಆಸ್ಪತ್ರೆ ತೆರೆದಿದ್ದಾರೆ. ಕೈಯಿಂದ ಚಲಾಯಿಸುವ ಕಾರು ಕೊಂಡು ಸ್ವಾವಲಂಬಿಯಾಗಿರುವ ದಾನಮ್ಮ ಇತರರಿಗೆ ಸ್ಫೂರ್ತಿ.

 ವೈದ್ಯೆ ದಾನಮ್ಮ ವಾಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.