ADVERTISEMENT

ಜಿಲ್ಲಾ ವಾರ್ಷಿಕ ಸಾಲ ಯೋಜನೆ: ₹ 8040 ಕೋಟಿ ಸಾಲ ನೀಡುವ ಗುರಿ

ಜಿಲ್ಲಾ ವಾರ್ಷಿಕ ಸಾಲ ಯೋಜನೆ ವರದಿ ಬಿಡುಗಡೆ ಮಾಡಿದ ಜಿ.ಪಂ.ಸಿಇಒ ಗೋವಿಂದ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2021, 15:03 IST
Last Updated 26 ಮಾರ್ಚ್ 2021, 15:03 IST
ವಿಜಯಪುರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಡಿಎಲ್‌ಸಿಸಿ ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ವಾರ್ಷಿಕ ಸಾಲ ಯೋಜನೆ ವರದಿ ಬಿಡುಗಡೆ ಮಾಡಿದರು
ವಿಜಯಪುರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಡಿಎಲ್‌ಸಿಸಿ ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ವಾರ್ಷಿಕ ಸಾಲ ಯೋಜನೆ ವರದಿ ಬಿಡುಗಡೆ ಮಾಡಿದರು   

ವಿಜಯಪುರ: ಲೀಡ್ ಬ್ಯಾಂಕ್‍ನ 2021-22ನೇ ಸಾಲಿಗೆ ₹8040 ಕೋಟಿ ಗುರಿಯ ವಿಜಯಪುರ ಜಿಲ್ಲಾ ವಾರ್ಷಿಕ ಸಾಲ ಯೋಜನೆ(ಎಸಿಪಿ)ವರದಿಯನ್ನು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಬಿಡುಗಡೆ ಮಾಡಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಡಿಎಲ್‌ಸಿಸಿ ಸಭೆಯಲ್ಲಿ ವಾರ್ಷಿಕ ಸಾಲ ಯೋಜನೆ ವರದಿ ಬಿಡುಗಡೆ ಮಾಡಿ ಮಾತನಾಡಿದ ಅವರು,ಜಿಲ್ಲೆಯ ಎಲ್ಲಾ ಬ್ಯಾಂಕ್‍ಗಳು ಸಾಲ ವಿತರಿಸುವುದರ ಮೂಲಕ ನಿಗದಿಪಡಿಸಿರುವ ಪ್ರಗತಿ ಸಾಧಿಸಬೇಕು. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಬೇಕು ಎಂದರು.

ಕೋವಿಡ್‌ನಿಂದ ಜನ ಸಾಮಾನ್ಯರ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿದ್ದು, ಈ ಸಂದರ್ಭದಲ್ಲಿ ಕೃಷಿಕರಿಗೆ ಸಾಲ ವಿತರಿಸುವ ಮೂಲಕ ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಪ್ರಯತ್ನಿಸುವಂತೆ ಸಲಹೆ ಮಾಡಿದರು.

ADVERTISEMENT

ಎಲ್ಲ ಸರ್ಕಾರಿ ಪ್ರಾಯೋಜಿತ ಯೋಜನೆಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಮತ್ತು ಜಿಲ್ಲಾ ಆಡಳಿತಕ್ಕೆ ಎಸ್ ಸಿ. ಎಸ್. ಟಿ ವಿದ್ಯಾರ್ಥಿಗಳ ಬಾಕಿ ಇರುವ ಆಧಾರ್ ಮ್ಯಾಪಿಂಗ್‌ ಅನ್ನು ಕಡಿಮೆ ಮಾಡಲು ಸಹಾಯ ಮಾಡುವಂತೆ ಬ್ಯಾಂಕರ್ಸ್‌ಗಳಿಗೆ ಅವರು ಸೂಚಿಸಿದರು.

ಸಾಲ ಯೋಜನೆಯಡಿ ₹ 5932 ಕೋಟಿ (ಶೇ73.79) ಕೃಷಿ, ₹ 865 ಕೋಟಿ (ಶೇ10.77) ಎಂಎಸ್‌ಎಂಇ ಮತ್ತು ಇತರ ಆದ್ಯತೆಯ ವಲಯಕ್ಕೆ ₹418.50 ಕೋಟಿ (ಶೇ5.20), ಸಮಗ್ರ ಕೃಷಿ ಸಂಬಂಧಿತ ಚಟುವಟಿಕೆಗಳಾದ ಡೈರಿ, ಕೋಳಿ, ಕುರಿ,ಮೇಕೆ, ಕೃಷಿ ಚಟುವಟಿಕೆಯ ಜೊತೆಗೆ ತೋಟಗಾರಿಕೆ ಬೆಳೆಗಳಾದ ಲಿಂಬೆ, ದ್ರಾಕ್ಷಿ, ದಾಳಿಂಬೆ, ಪಿಎಂಎಫ್‌ಎಂಇ, ಎಐಎಫ್ ಅಡಿಯಲ್ಲಿ ಹಣಕಾಸು, ಆತ್ಮ ನಿರ್ಭರ ಭಾರತ್ ಅಡಿಯಲ್ಲಿ ಮುದ್ರಾ ಸಾಲಗಳು, ವಸತಿ ಸಾಲಗಳು ಇತ್ಯಾದಿಗಳಿಗೆ ಅನುದಾನ ಮೀಸಲಿಡಲಾಗಿದೆ.

ಲೀಡ್‌ ಬ್ಯಾಂಕ್ ಮ್ಯಾನೇಜರ್ ಸೋಮನಗೌಡ ಪಾಟೀಲ, ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ವೀರಪ್ಪ ಪತ್ರಾದ್, ನಬಾರ್ಡ್ ಡಿಡಿಎಂ ವಿದ್ಯಾ ಗಣೇಶ್,ಕೈಗಾರಿಕಾ ಸಂಘಗಳ ಪ್ರತಿನಿಧಿಗಳಾದ ಎಸ್. ವಿ. ಪಾಟೀಲ್, ಗುಡ್ಡೋಡಗಿ ಮತ್ತು ವಿವಿಧ ಬ್ಯಾಂಕುಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.