ADVERTISEMENT

ಮುದ್ದೇಬಿಹಾಳ | ಇಕೆವೈಸಿ: ಮುಗಿಬಿದ್ದ ಮಹಿಳೆಯರು

ಸುಳ್ಳು ವದಂತಿಗಳಿಂದ ಆತಂಕಕ್ಕೊಳಗಾದ ಜನ: ನಸುಕಿನಲ್ಲೆ ಪಾಳೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2023, 5:55 IST
Last Updated 28 ಡಿಸೆಂಬರ್ 2023, 5:55 IST
ಮುದ್ದೇಬಿಹಾಳ ಪಟ್ಟಣದ ಇಂಡೇನ್ ಗ್ಯಾಸ್ ಎದುರಿಗೆ ಸರದಿಯಲ್ಲಿ ನಿಂತಿರುವ ಮಹಿಳೆಯರು
ಮುದ್ದೇಬಿಹಾಳ ಪಟ್ಟಣದ ಇಂಡೇನ್ ಗ್ಯಾಸ್ ಎದುರಿಗೆ ಸರದಿಯಲ್ಲಿ ನಿಂತಿರುವ ಮಹಿಳೆಯರು   

ಮುದ್ದೇಬಿಹಾಳ: ಸುಳ್ಳು ವದಂತಿಗಳಿಂದ ಆತಂಕಕ್ಕೊಳಗಾದ ಬಡ ಜನರು ಮುದ್ದೇಬಿಹಾಳ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಇರುವ ಸಾಯಿ ಇಂಡೇನ್ ಗ್ಯಾಸ್ ಮಳಿಗೆಯ ಎದುರಿಗೆ ಬುಧವಾರ ನಸುಕಿನ ಜಾವಾದಲ್ಲೆ ಸರತಿ ಸಾಲಿನಲ್ಲಿ ನಿಂತಿದ್ದರು.

ಹೆಬ್ಬೆಟ್ಟ ಕೊಡದಿದ್ದರೆ ಸಿಲಿಂಡರ್‌ ದರ ಹೆಚ್ಚಾಗುತ್ತದೆ, ಸಬ್ಸಿಡಿ ಕೊಡುವುದಿಲ್ಲ, ಸಿಲಿಂಡರ್ ದರ ಕಡಿಮೆಯಾಗುತ್ತದೆ ಎಂಬ ವದಂತಿಯಿಂದ ಭೀತರಾದ ತಂಗಡಗಿ ಗ್ರಾಮದ ಅವ್ವಮ್ಮ, ಗುಂಡಕರ್ಜಗಿಯಿಂದ ಬಂದಿದ್ದ ಯಲ್ಲಮ್ಮ ಸೇರಿದಂತೆ ಅನೇಕ ಮಹಿಳೆಯರು ನಿತ್ಯದ ಕೆಲಸಗಳನ್ನು ಬಿಟ್ಟು ಸರತಿಯಲ್ಲಿ ನಿಂತಿರುವುದಾಗಿ ತಿಳಿಸಿದರು.

ಉಜ್ವಲ್ ಯೋಜನೆಯಡಿ ಗ್ಯಾಸ್ ಪಡೆದುಕೊಂಡವರು ಇಕೆವೈಸಿ ಮಾಡಿಸಬೇಕು ಎಂದು ನವೆಂಬರ್‌ನಲ್ಲೆ ಆದೇಶ ಹೊರಡಿಸಲಾಗಿತ್ತು. ಡಿ.31 ಕೊನೆಯ ದಿನ. ಅವಧಿ ಮುಗಿಯಲು ಕೆಲವೇ ದಿನ ಬಾಕಿ ಇದ್ದು ಆತಂಕಕ್ಕೊಳಗಾದ ಮಹಿಳೆಯರು ಕೊರೆಯುವ ಚಳಿಯನ್ನು ಲೆಕ್ಕಿಸದೇ ಬಂದು ಸರದಿಯಲ್ಲಿ ನಿಲ್ಲುತ್ತಿದ್ದಾರೆ.

ADVERTISEMENT

ಹೆಚ್ಚುವರಿ ಕೌಂಟರ್ ತೆರೆದರೆ ಅಥವಾ ಆಯಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಗ್ರಾಹಕರ ಇಕೆವೈಸಿ ಮಾಡಿಸುವಂತೆ ನಿರ್ದೇಶನ ನೀಡಿದರೆ ಗ್ರಾಹಕರ ದಟ್ಟಣೆ ತಪ್ಪಿಸಬಹುದು. ಸಂಬಂಧಿಸಿದ ಗ್ಯಾಸ್ ಏಜೆನ್ಸಿ, ರಾಜ್ಯ ಸರ್ಕಾರದ ಅಧಿಕಾರಿಗಳಾಗಲಿ ನಿರ್ದೇಶನ ನೀಡಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ.

ಮನೆಯಲ್ಲಿ ಕೂತು ಕೆವೈಸಿ ಮಾಡಿಕೊಳ್ಳಿ:

ಗ್ರಾಹಕರು ಮನೆಯಲ್ಲಿಯೇ ಕೂತು ತಮ್ಮ ಮೊಬೈಲ್‌ನಲ್ಲೆ ಇಕೆವೈಸಿ ಅಪ್ಡೇಟ್ ಮಾಡಬಹುದು. ಇಂಡಿಯನ್ ಆಯಿಲ್1 ಆ್ಯಪ್ ಡೌನಲೋಡ್ ಮಾಡಿ ಅಲ್ಲಿ ಗ್ರಾಹಕರು ತಮ್ಮ ಐಡಿ ಪಾಸ್‌ವರ್ಡ್‌ ಹಾಕಬೇಕು. ನಂತರ ಗ್ಯಾಸ್ ಕಂಪನಿಯಿಂದ ಕೊಟ್ಟಿರುವ ಗ್ರಾಹಕರ ಐಡಿ ಹಾಕಬೇಕು.ಬಳಿಕ ಆಧಾರ್ ಕಾರ್ಡ್‌ ಕೆವೈಸಿ ಮಾಡಬಹುದು. ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಒಟ್ಟು 21 ಸಾವಿರ ಗ್ರಾಹಕರು ಇದ್ದು, ಅದರಲ್ಲಿ 11 ಸಾವಿರ ಜನ ಉಜ್ವಲ್‌ ಗ್ಯಾಸ್ ಸಂಪರ್ಕ ಪಡೆದುಕೊಂಡಿದ್ದಾರೆ.ಈಗಾಗಲೇ ನಾಲ್ಕು ಸಾವಿರ ಜನರ ಕೆವೈಸಿ ಮಾಡಿದ್ದೇವೆ ಎಂದು  ಸಾಯಿ ಇಂಡೇನ್ ಗ್ಯಾಸ್ ಮಾಲೀಕ ಸುನೀಲಕುಮಾರ ಪೋಳ ತಿಳಿಸಿದರು.
 
‘ಇಕೆವೈಸಿ ಮಾಡಿಸದಿದ್ದರೆ ಸಬ್ಸಿಡಿ ಕಡಿತಗೊಳ್ಳುತ್ತದೆ. ಜ.1ರಿಂದ ಖಾತೆಗೆ ಹೆಚ್ಚಿನ ಹಣ ಹಾಕುತ್ತಾರೆ ಎಂಬುದೆಲ್ಲ ಸುಳ್ಳು. ಕೇಂದ್ರ  ಸರ್ಕಾರದ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಪೂರೈಕೆ ಸಚಿವಾಲಯದಿಂದ ಆಯಾ ಗ್ಯಾಸ್ ಕಂಪನಿಗಳಿಗೆ ಗ್ರಾಹಕರ ಆಧಾರ್ ಕಾರ್ಡ್‌ ಕೆವೈಸಿ ಮಾಡಿಸುವಂತೆ ಸೂಚನೆ ಬಂದಿದ್ದು ಡಿ.31 ರೊಳಗೆ ಕೆವೈಸಿ ಮಾಡಿಸಲು ಆಯಾ ಗ್ಯಾಸ್ ಕಂಪನಿಗಳು ತಮ್ಮ ಗ್ರಾಹಕರಿಗೆ ಸೂಚನೆ ಕೊಟ್ಟಿವೆ.ಈ ಬಗ್ಗೆ ರಾಜ್ಯ ಸರ್ಕಾದಿಂದ ಯಾವುದೇ ಸೂಚನೆ,ಆದೇಶ ಬಂದಿಲ್ಲಎಂದು ಆಹಾರ ಪೂರೈಕೆ ಮತ್ತು ಗ್ರಾಹಕ ಸರಬರಾಜು ಇಲಾಖೆ ಉಪ ನಿರ್ದೇಶಕ
 ವಿನಯಕುಮಾರ ಪಾಟೀಲ್ ಹೇಳಿದರು.

ಜನರು ಸುಳ್ಳು ವದಂತಿಗಳಿಗೆ ಕಿವಿ ಕೊಡಬಾರದು. ಇಕೆವೈಸಿ ಅವಧಿ ವಿಸ್ತರಣೆ ಮಾಡುವ ಸಾಧ್ಯತೆ ಇದೆ
ವಿನಯಕುಮಾರ ಪಾಟೀಲ್ ಉಪ ನಿರ್ದೇಶಕ ಆಹಾರ ಪೂರೈಕೆ ಮತ್ತು ಗ್ರಾಹಕ ಸರಬರಾಜು ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.