
ಹೊರ್ತಿ: ಹೊಸ ಬಟ್ಟೆ ತೊಟ್ಟು, ಬಿದಿರಿನ ಬುಟ್ಟಿಗಳಲ್ಲಿ ತಹರೇವಾರಿ ಭಕ್ಷ್ಯ ಭೋಜನಗಳನ್ನು ತುಂಬಿಕೊಂಡು ಎತ್ತಿನ ಗಾಡಿ ಹಾಗೂ ಟ್ಯ್ರಾಕ್ಟರ್ ಮತ್ತು ಜಿಪ್, ಬೈಕ್ ವಾಹನಗಳಲ್ಲಿ ಮತ್ತು ಮಹಿಳೆಯರು ತಲೆಯ ಮೇಲೆ ಬುಟ್ಟಿಗಳನ್ನು ಹೊತ್ತುಕೊಂಡು ಹೊಲದ ಕಡೆಗೆ ಹೋಗುತ್ತಿರುವ ದೃಶ್ಯ ಎಳ್ಳು ಅಮಾವಾಸ್ಯೆ ದಿನ ಮುಂಜಾನೆ ಗ್ರಾಮೀಣ ಭಾಗದಲ್ಲಿ ಸಾಮಾನ್ಯವಾಗಿ ಕಂಡು ಬರುವ ದೃಶ್ಯ.
ಗ್ರಾಮೀಣ ಜನರ ವಿಶಿಷ್ಟ ಹಬ್ಬವಾದ ಎಳ್ಳು ಅಮಾವಾಸ್ಯೆಯಂದು ರೈತ ಸಮುದಾಯದಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಹೊಲಗಳಿಗೆ ತೆರಳಿ ಹೊಲದ ಮಧ್ಯದ ಬನ್ನಿ ಗಿಡಕ್ಕೆ ಸೀರೆ ತೊಡಿಸಿ, ಹೂ ಮುಡಿಸಿ, ಭಕ್ತಿಯಿಂದ ಭೂತಾಯಿಗೆ ಉಡಿ ತುಂಬಿ ವಿಭೂತಿ, ಕುಂಕುಮ, ಊದಬತ್ತಿ ಬೆಳಗಿ, ಆರತಿ ಮಾಡಿ ವಿಶೇಷ ಪೂಜೆ ಸಲ್ಲಿಸಿ ಎಡೆ ಹಿಡಿಯುವ ಸಂಪ್ರದಾಯ ಗ್ರಾಮೀಣ ಭಾಗದಲ್ಲಿ ವಿಶೇಷವಾಗಿ ಕಂಡು ಬರುತ್ತದೆ.
ಎಳ್ಳು ಅಮಾವಾಸ್ಯೆ ದಿನ ಎಲ್ಲಿ ನೋಡಿದರೂ ರೈತರು ಹೆಗಲ ಮೇಲೆ ಕಂಬಳಿ ಹೊದ್ದು, ವಿವಿಧ ಬಗೆಯ ಭೋಜನಗಳನ್ನು ತಯಾರಿಸಿಕೊಂಡು, ಬುಟ್ಟಿಯಲ್ಲಿ ತುಂಬಿಕೊಂಡು ಹೊಲಗಳ ಕಡೆಗೆ ಹೋಗುವ ದೃಶ್ಯ ರಸ್ತೆಯುದ್ದಕ್ಕೂ ಕಂಡು ಬರುತ್ತದೆ.
ವರ್ಷ ಪೂರ್ತಿ ಹಸಿವನ್ನು ನೀಗಿಸುವ ಭೂತಾಯಿಯನ್ನು ರೈತರು ತಮ್ಮ ಸಂಬಂಧಿಕರು ಹಾಗೂ ಸಹೋದ್ಯೋಗಿ ಮಿತ್ರರೊಡನೆ ಜತೆಗೂಡಿ ಹೊಲದಲ್ಲಿ ಗಿಡದ ಕೆಳಗೆ ಕುಳಿತು ಹಾಲು ಹುಗ್ಗಿ, ಸಜ್ಜಕ, ಶೇಂಗಾ ಹೋಳಿಗೆ, ಸುರುಳಿ ಹೋಳಿಗೆ, ಜೋಳದ ಕಡುಬು, ಪುಂಡಿ ಚಟ್ಟಿ, ಕಾಳಿನ ಪಲ್ಯ, ಮೆಣಸಿನಕಾಯಿ ಚಟ್ಟಿ, ಚಿತ್ರಾನ್ನ, ಮೊಸರನ್ನ, ಹುರಕ್ಕಿ ಹೋಳಿಗೆ, ಚಪಾತಿ, ಸಜ್ಜೆ, ಜೋಳದ ರೊಟ್ಟಿ, ಡೊಣ್ಣ ಮೆಣಸಿನ ಕಾಯಿಪಲ್ಲೆ, ಬದನೆಕಾಯಿ ಎಣ್ಣೆಗಾಯಿ ಪಲ್ಲೆ, ಮೊಸರು, ಶೇಂಗಾ (ಹಿಂಡಿ)ಚಟ್ನಿ ಸೇರಿದಂತೆ ವಿವಿಧ ಬಗೆಯ ಊಟವನ್ನು ಸವಿದು ಖುಷಿ ಪಡುತ್ತಾರೆ.
ಬಾಂಧವ್ಯದ ಆಚರಣೆ: ಗ್ರಾಮೀಣ ಭಾಗದಲ್ಲಿ ಎಳ್ಳು ಅಮಾವಾಸ್ಯೆಯಂದು ಯಾವುದೇ ಜಾತಿ, ಧರ್ಮದ ಬೇಧವಿಲ್ಲದೇ, ಎಲ್ಲ ವರ್ಗದ ಜನರು ತಮ್ಮ, ತಮ್ಮ ಹೊಲಗಳಿಗೆ ತೆರಳಿ ಪದ್ಧತಿಯಂತೆ ಪೂಜೆ ಸಲ್ಲಿಸಿ ಚೆರಗ ಚೆಲ್ಲಿ ವಿವಿಧ ತರಹದ ಮೃಷ್ಟಾನ್ನ ಭೋಜನ ಸವಿಯುತ್ತಾರೆ.
ಆಟದ ಸಂಭ್ರಮ: ಎಳ್ಳು ಅಮಾವಾಸ್ಯೆ ದಿನ ಕುಟುಂಬ ಸಮೇತ ಭಕ್ಷ್ಯ ಭೋಜನ ಸವಿದ ನಂತರ ಹಿರಿ ಜೀವಿಗಳು ಗಿಡದ ನೆರಳಿನಲ್ಲಿ ವಿಶ್ರಾಂತಿ ಪಡೆದರೆ, ಮಕ್ಕಳು ಮತ್ತು ಯುವಕರು ಹೊಲ ಗದ್ದೆಗಳಲ್ಲಿ ಖುಷಿಯಿಂದ ತಿರುಗಾಡಿ ಹೊಲದಲ್ಲಿ ಬೆಳೆದ ಸುಲಗಾಯಿ, ಬೋರೆಹಣ್ಣು, ಪೇರಲ, ಸೀತಾಫಲ, ಚಿಕ್ಕು ಹಣ್ಣುಗಳನ್ನು ತಡಕಾಡಿ ಕಿತ್ತುಕೊಂಡು ಸವಿಯುತ್ತಾರೆ. ಅಲ್ಲದೇ, ಹಸಿ ಶೇಂಗಾ ಬಳ್ಳಿ ಕಿತ್ತು ಶೇಂಗಾ ಮತ್ತು ಹಸಿ ಗೊಂಜಾಳ ತೆನೆ ತಂದು ಕಟ್ಟಿಗೆಯಲ್ಲಿ ಸುಟ್ಟು ತೆನೆ ತಿಂದು ಸಂಭ್ರಮ ಪಡುತ್ತಾರೆ.
'ವರ್ಷ ಪೂರ್ತಿ ನಮ್ಮ ಹಸಿವನ್ನು ನೀಗಿಸುವ ಭೂಮಿ ತಾಯಿಗೆ ಎಳ್ಳ ಅಮಾವಾಸ್ಯೆಯಂದು ಬಂಧು- ಬಾಂಧವರು ಕುಟುಂಬ ಹಾಗೂ ಬಂಧು ಮಿತ್ರರೊಡನೆ ತೆರಳಿ ಭಕ್ತಿ ಪೂರ್ವಕವಾಗಿ ಪೂಜೆ ಸಲ್ಲಿಸಿ, ಭೂತಾಯಿಗೆ ಉಡಿ ತುಂಬಿ ಚರಗ ಚೆಲ್ಲುವ ಸಂಪ್ರದಾಯ ಈಗಲೂ ಗ್ರಾಮೀಣ ಭಾಗದಲ್ಲಿ ಆಚರಿಸಲಾಗುತ್ತಿದೆ. ಈ ಆಚರಣೆಯಿಂದ ಉತ್ತಮ ಮಳೆಯ ಜೊತೆ ಬೆಳೆ ಚನ್ನಾಗಿ ಬರುತ್ತದೆ ಎಂಬ ನಂಬಿಕೆ ರೈತಾಪಿ ಜನರದ್ದಾಗಿದೆ’ ಎನ್ನುತ್ತಾರೆ ಇಂಚಗೇರಿ ಗ್ರಾಮದ ಶೋಭಾ ಪಾಟೀಲ ಶೋಭಾ ಪಾಟೀಲ, ನಂದಿನಿ ಹಾಲಳ್ಳಿ ಮತ್ತು ಗಿರಿಜೆವ್ವ ವರೂರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.