ADVERTISEMENT

ಬದು ನಿರ್ಮಾಣದಿಂದ ರೈತರಿಗೆ ಉದ್ಯೋಗ

ಐನಾಪೂರದಲ್ಲಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಚಾಲನೆ

​ಪ್ರಜಾವಾಣಿ ವಾರ್ತೆ
Published 19 ಮೇ 2020, 15:39 IST
Last Updated 19 ಮೇ 2020, 15:39 IST
ವಿಜಯಪುರ ತಾಲ್ಲೂಕಿನ ಐನಾಪುರದಲ್ಲಿ ಹೊಲದಲ್ಲಿ ಬದು ನಿರ್ಮಿಸುವ ಕಾರ್ಯಕ್ಕೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಚಾಲನೆ ನೀಡಿದರು
ವಿಜಯಪುರ ತಾಲ್ಲೂಕಿನ ಐನಾಪುರದಲ್ಲಿ ಹೊಲದಲ್ಲಿ ಬದು ನಿರ್ಮಿಸುವ ಕಾರ್ಯಕ್ಕೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಚಾಲನೆ ನೀಡಿದರು   

ವಿಜಯಪುರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹೊಲದಲ್ಲಿ ಬದು ನಿರ್ಮಾಣ ಅಭಿಯಾನದಿಂದ ರೈತರಿಗೆ ಮತ್ತು ಬಡಜನರಿಗೆ ಉದ್ಯೋಗ ಲಭಿಸಲಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.

ತಾಲ್ಲೂಕಿನ ಐನಾಪೂರ ಗ್ರಾಮದರೈತ ಶರಣಪ್ಪ ಭೀಮಸಿ ಬಳಗಾನೂರ ಹೊಲದಲ್ಲಿ ಬದು ನಿರ್ಮಾಣ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿ, ಬದು ನಿರ್ಮಾಣ ಅಭಿಯಾನದಿಂದ ಆಯಾ ಗ್ರಾಮಗಳಲ್ಲಿ 100 ದಿನಗಳ ಕೆಲಸವು ಮಹಿಳೆ ಮತ್ತು ಪುರುಷ ಕೂಲಿಕಾರರಿಗೆ ದೊರೆಯಲಿದ್ದು, ₹ 275 ಸಮಾನ ಕೂಲಿ ನೀಡಲಾಗುವುದು ಎಂದು ಹೇಳಿದರು.

ADVERTISEMENT

ಬದು ನಿರ್ಮಾಣದಿಂದ ಮಣ್ಣಿನ ಸವಕಳಿ ನಿಯಂತ್ರಣವಾಗಿ ತೇವಾಂಶ ಹೆಚ್ಚಾಗುವುದರಿಂದ ಅಧಿಕ ಇಳುವರಿ ಬರುತ್ತದೆ. ಮಳೆ ನೀರು ಸಂಗ್ರಹಣೆಗೆ ಅನುಕೂಲವಾಗಲಿದೆ ಎಂದರು.

ಜಿಲ್ಲೆಯಾದ್ಯಂತ 2020-21ನೇ ಸಾಲಿನಲ್ಲಿ ಈವರೆಗೆ 1390 ಬದು ನಿರ್ಮಾಣ ಕಾಮಗಾರಿ ಅನುಷ್ಠಾನಗೊಳಿಸಲಾಗಿದೆ. ಬಸವನ ಬಾಗೇವಾಡಿಯಲ್ಲಿ 280, ಇಂಡಿ 304, ಮುದ್ದೇಬಿಹಾಳ 59, ಸಿಂದಗಿ 342, ವಿಜಯಪುರ 405 ಕಾಮಗಾರಿ ಅನುಷ್ಠಾನಗೊಳಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ 457 ಕೃಷಿಕೊಳ್ಳ ನಿರ್ಮಾಣ ಕಾಮಗಾರಿ ಅನುಷ್ಠಾನ ಗೊಳಿಸಲಾಗಿದೆ. ಬಸವನ ಬಾಗೇವಾಡಿಯಲ್ಲಿ 32, ಇಂಡಿಯಲ್ಲಿ 188, ಮುದ್ದೇಬಿಹಾಳದಲ್ಲಿ 32, ಸಿಂದಗಿ 115, ವಿಜಯಪುರದಲ್ಲಿ 90 ಕೃಷಿಕೊಳ್ಳಗಳ ಕಾಮಗಾರಿ ಪೂರ್ಣಗೊಂಡಿವೆ ಎಂದರು.

ಜಿಲ್ಲೆಯಲ್ಲಿ 186 ಜಾನುವಾರು ಶೆಡ್‍ಗಳ ನಿರ್ಮಾಣ ಕಾಮಗಾರಿ ಮಾಡಲಾಗಿದೆ. ಬಸವನ ಬಾಗೇವಾಡಿಯಲ್ಲಿ 5, ಇಂಡಿ 126, ಮುದ್ದೇಬಿಹಾಳ 10, ವಿಜಯಪುರ 45 ಕಾಮಗಾರಿ ಮಾಡಲಾಗಿದೆ ಎಂದು ತಿಳಿಸಿದರು.

36 ಕೆರೆಗಳ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಂಡಿದ್ದು, ಇದರಲ್ಲಿ ಬಸವನ ಬಾಗೇವಾಡಿ 4, ಇಂಡಿ 11, ಸಿಂದಗಿ 10, ವಿಜಯಪುರ 11 ಕೆರೆಗಳನ್ನು ಹೂಳೆತ್ತಲಾಗುವುದು ಎಂದರು.

119 ಹಳ್ಳಗಳನ್ನು ಹೂಳೆತ್ತುವ ಕಾರ್ಯ ಕೈಗೊಂಡಿದ್ದು. ಇದರಲ್ಲಿ ಬ.ಬಾಗೇವಾಡಿಯ 2, ಇಂಡಿಯಲ್ಲಿ 61, ಮುದ್ದೇಬಿಹಾಳ 4, ಸಿಂದಗಿ 21, ವಿಜಯಪುರ 31 ಹಳ್ಳಗಳನ್ನು ಹೂಳೆತ್ತಲಾಗುವುದು ಎಂದು ಹೇಳಿದರು.

ಜಿಲ್ಲೆಯಾದ್ಯಂತ ಒಟ್ಟು 2,188 ಕಾಮಗಾರಿಗಳನ್ನು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕ್ಷೇತ್ರ ಬದು ನಿರ್ಮಾಣ ಕಾರ್ಯಕ್ರಮದಡಿ ಅನುಷ್ಠಾನಗೊಳಿಸಲಾಗುತ್ತಿದ್ದು, ಬಡ ಕೂಲಿಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲಾಗಿದೆ. ಬ.ಬಾಗೇವಾಡಿಯಲ್ಲಿ 323 ಇಂತಹ ವಿವಿಧ ಕಾಮಗಾರಿಗಳನ್ನು ಕೈಗೊಂಡಿದೆ. ಇಂಡಿಯಲ್ಲಿ 690, ಮುದ್ದೇಬಿಹಾಳದಲ್ಲಿ 105, ಸಿಂದಗಿಯಲ್ಲಿ 488 ಮತ್ತು ವಿಜಯಪುರದಲ್ಲಿ 582 ಇಂತಹ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್. ರಾಠೋಡ, ಪಿಡಿಒ ಸರಿತಾ ನಾಯಕ ಸೇರಿದಂತೆ ರೈತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.