ADVERTISEMENT

ಬಂಜಾರ ಸಮಾಜಕ್ಕೆ ಟಿಕೆಟ್‌ ಕೊಡಿ: ಮಾಜಿ ಶಾಸಕ ಮನೋಹರ ಐನಾಪುರ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2018, 13:55 IST
Last Updated 15 ಸೆಪ್ಟೆಂಬರ್ 2018, 13:55 IST

ವಿಜಯಪುರ:‘ಕಾಂಗ್ರೆಸ್‌ ಪಕ್ಷದೊಳಗಿನ ಸಾಮಾಜಿಕ ನ್ಯಾಯದ ಪರಿಕಲ್ಪನೆಯಂತೆ ವಿಜಯಪುರ ಲೋಕಸಭಾ ಕ್ಷೇತ್ರದ ಟಿಕೆಟ್‌ನ್ನು ಬಂಜಾರ ಸಮುದಾಯಕ್ಕೆ ನೀಡಬೇಕು’ ಎಂದು ಮಾಜಿ ಶಾಸಕ ಮನೋಹರ ಐನಾಪುರ ಆಗ್ರಹಿಸಿದರು.

‘ಈಚೆಗಿನ ದಿನಗಳಲ್ಲಿ ಹೊರಗಿನ ಅಭ್ಯರ್ಥಿಗಳಿಗೆ ಮಣೆ ಹಾಕಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ. ಯಾವುದೇ ಕಾರಣಕ್ಕೂ ಇದಕ್ಕೆ ಆಸ್ಪದ ಕೊಡಬಾರದು. ಸ್ಥಳೀಯರಿಗೆ ಟಿಕೆಟ್‌ ಕೊಡಬೇಕು’ ಎಂದು ಶನಿವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಚಿತ್ರದುರ್ಗ, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಎಡಗೈ ಸಮುದಾಯದವರಿಗೆ ಮನ್ನಣೆ ನೀಡಲಾಗಿದೆ. ಕಲಬುರ್ಗಿ, ಚಾಮರಾಜನಗರದಲ್ಲಿ ಬಲಗೈ ಸಮುದಾಯಕ್ಕೆ ಅವಕಾಶ ಸಿಕ್ಕಿದೆ. ಉಳಿದಿರುವ ಏಕೈಕ ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಬಂಜಾರ ಸಮುದಾಯಕ್ಕೆ ಈ ಬಾರಿಯೂ ಸ್ಪರ್ಧಿಸಲು ಅವಕಾಶ ಕೊಡಬೇಕು’ ಎಂದು ಐನಾಪುರ ಕಾಂಗ್ರೆಸ್‌ ಮುಖಂಡರಿಗೆ ಮನವಿ ಮಾಡಿದರು.

ADVERTISEMENT

‘ಪ್ರಕಾಶ ರಾಠೋಡ ವಿಜಯಪುರದಲ್ಲಿ ನೆಲೆಸದ ಪರಿಣಾಮ ಅವಕಾಶ ಕೊಟ್ಟರೂ ಗೆಲ್ಲಲು ಸಾಧ್ಯವಾಗಿಲ್ಲ. ಇದೇ ರೀತಿ ಬೆಂಗಳೂರು ವಾಸ್ತವ್ಯ. ಮುಖಂಡರು ಬಂದಾಗ ಜಿಲ್ಲೆಗೆ ಭೇಟಿ ನೀಡುವ ಮುಖಂಡರಿಗೂ ಮನ್ನಣೆ ನೀಡಬಾರದು. ಸ್ಥಳೀಯವಾಗಿಯೇ ಇರುವ ಲಂಬಾಣಿ ಸಮಾಜದ ಪ್ರಮುಖರಿಗೆ ಈ ಬಾರಿ ಕಾಂಗ್ರೆಸ್‌ ಟಿಕೆಟ್‌ ನೀಡಬೇಕು’ ಎಂದು ಮಾಜಿ ಶಾಸಕರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.