ADVERTISEMENT

ಬಿಜೆಪಿಯವರು ನಡೆಸುತ್ತಿರುವ ಅಸಹ್ಯ ಬಿಚ್ಚಿಡುತ್ತೇನೆ: ಎಚ್‌ಡಿಕೆ ಖಡಕ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 15:13 IST
Last Updated 21 ಅಕ್ಟೋಬರ್ 2021, 15:13 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ವಿಜಯಪುರ: ಬಿಜೆಪಿಯವರು ನನ್ನ ವೈಯಕ್ತಿಕ ವಿಚಾರಗಳನ್ನು ಇಲ್ಲಿಗೆ ಬಿಡುವುದು ಒಳ್ಳೆಯದು. ಇಲ್ಲವಾದರೆ ಆರ್.ಎಸ್. ಎಸ್ ಶಾಖೆಗಳಿಂದ ತರಬೇತಿ ಪಡೆದುಕೊಂಡು ಬಿಜೆಪಿಗೆ ಬಂದವರೆಲ್ಲ ನಡೆಸುತ್ತಿರುವ ಅಸಹ್ಯವನ್ನು ಬಿಚ್ಚಿಡಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಖಡಕ್ ಎಚ್ಚರಿಕೆ ನೀಡಿದರು.

ಸಿಂದಗಿ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಪರ ಚುನಾವಣಾ ಪ್ರಚಾರದ ವೇಳೆ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಇವತ್ತು ಬಿಜೆಪಿಯವರು ನನ್ನ ಖಾಸಗಿ ವಿಚಾರಗಳನ್ನು ಕೆದಕಿದ್ದಾರೆ. ಅವರಿಗೆ ನೇರವಾಗಿ ಹೇಳಲು ಬಯಸುತ್ತೇನೆ. ನನ್ನ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪ ಮಾಡಿದರೆ ನಾನು ಅವರೆಲ್ಲರ ವಿಚಾರಗಳನ್ನು ಮಾಧ್ಯಮಗಳ ಮುಂದೆ ಬಿಚ್ಚಿಡಬೇಕಾಗುತ್ತದೆ. ಅವೆಲ್ಲವನ್ನೂ ನೀವು ನೋಡಿದರೆ ಅಸಹ್ಯಪಡುತ್ತೀರಿ’ ಎಂದರು.

ADVERTISEMENT

ಬಿಜೆಪಿ ನಾಯಕರದ್ದು ಬ್ರಹ್ಮಾಂಡ ಬಂಡವಾಳ ಇದೆ. ಹಿಂದೆ ಚಿಕ್ಕಮಗಳೂರಿನ ಸರ್ಕಾರಿ ಅಧಿಕಾರಿಯೊಬ್ಬರ ಪತಿ ಕೆಆರ್‌ಎಸ್ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣನಾದವರು ಯಾರು? ಆ ನಾಯಕನ ಬಗ್ಗೆ ತಾಕತ್ತಿದ್ದರೆ ಬಿಜೆಪಿಯವರು ಮಾತನಾಡಲಿ ಎಂದು ಸವಾಲು ಹಾಕಿದರು.

ಕೊಂಡಿದ್ದು ಸೇರಿ, ಅನೇಕರ ಕಥೆಗಳು ನನಗೆ ಚೆನ್ನಾಗಿ ಗೊತ್ತಿವೆ. ಸುಮ್ಮನೆ ಕೆಣಕುತ್ತಾ ಹೋದರೆ ಅದೇ ನಿಮಗೆ ತಿರುಗುಬಾಣ ಆಗುತ್ತದೆ. ಬಿಜೆಪಿ ನಾಯಕರಿಗೆ ಇದು ನಾನು ಕೊಡುವ ನೇರ ಎಚ್ಚರಿಕೆ ಎಂದರು.

ಮಂಗಳೂರಿನಲ್ಲಿ ಸಂಘದ ಪ್ರಚಾರಕರೊಬ್ಬರ ಕುಟುಂಬದ ಹೆಣ್ಣು ಮಗಳೊಬ್ಬರನ್ನು ಹಾಳು ಮಾಡಿ ಮುಂಬೈಗೆ ಕದ್ದು ಓಡಿ ಹೋಗಿದ್ದವರು ಯಾರು? ನೀವೇ ಹೇಳಿ? ಇಲ್ಲವಾದರೆ ಅದೆಲ್ಲವನ್ನೂ ನಾನೇ ಬಿಚ್ಚಿ ಇಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಾನು ಯಾವುದೇ ಕುಟುಂಬಗಳನ್ನು ಹಾಳು ಮಾಡಿಲ್ಲ. ಬಿಜೆಪಿಯವರು ಎಷ್ಟು ಮನೆಗಳನ್ನು ಹಾಳು ಮಾಡಿದ್ದಾರೆ ಎಂಬುದು ನನಗೆ ಮಾತ್ರವಲ್ಲ ಇಡೀ ನಾಡಿಗೇ ಗೊತ್ತಿದೆ ಎಂದು ಹೇಳಿದರು.

ನನ್ನ ವಿಷಯಕ್ಕೆ ಬರಬೇಡಿ. ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ. ಆರ್. ಎಸ್. ಎಸ್ ಬಗ್ಗೆ ನಾನು ಎತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡಲಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.