ADVERTISEMENT

ಇನ್ಮುಂದೆ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಳ್ಳುವುದಿಲ್ಲ: ಯತ್ನಾಳ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2023, 13:10 IST
Last Updated 12 ಸೆಪ್ಟೆಂಬರ್ 2023, 13:10 IST
   

ವಿಜಯಪುರ: ‘ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಹಗಲಲ್ಲ ಪಾಲ್ಗೊಳ್ಳಲು ಆಗದು’ ಎಂದು ಈ ಹಿಂದೆ ಹೋರಾಟದ ಮುಂಚೂಣಿಯಲ್ಲಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಸಮದಾನ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರದ ಅವಧಿಯಲ್ಲೇ  ಲಿಂಗಾಯತ ಪಂಚಮಸಾಲಿಗಳಿಗೆ ಮೀಸಲಾತಿ ನೀಡಿ, ನೋಟಿಫಿಕೇಶನ್‌ ಹೊರಡಿಸಲಾಗಿದೆ. ಅಲ್ಲದೇ, ರಾಜ್ಯಪಾಲರಿಂದ ಸುಘ್ರೀವಾಜ್ಞೆಯೂ ಆಗಿದೆ. ಈಗೇನಿದ್ದರೂ ರಾಜ್ಯ ಸರ್ಕಾರ ಜಾರಿಗೆ ತರುವುದಷ್ಟೇ ಬಾಕಿ ಇದೆ, ಇದು ನಮ್ಮ ಕೈಯಲ್ಲಿಲ್ಲ’ ಎಂದರು.

‘ಮೀಸಲಾತಿ ವಿಷಯದಲ್ಲಿ ಮುಂದೇನಾದರೂ ಆಗಬೇಕಾಗಿರುವುದು ಇದ್ದರೇ ಗುರುಗಳ ಶಿಷ್ಯರಾದ ಲಕ್ಷ್ಮಿ ಹೆಬ್ಬಾಳಕರ, ವಿನಯ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ ಇದ್ದಾರೆ. ಅವರ ಮೂಲಕ ಜಾರಿ ಮಾಡಿಸಲಿ. ಹಗಲೆಲ್ಲ ಹೋರಾಟ ಮಾಡುವುದರಲ್ಲಿ ಅರ್ಥವಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಹಿಂದುಳಿದ ವರ್ಗಗಳ 2 ‘ಎ’ಗೆ ಇರುವ ಶೇ 15ರಷ್ಟು ಮೀಸಲಾತಿಯನ್ನು ಪಂಚಮಸಾಲಿಗಳಿಗೇ ಕೊಡಬೇಕು ಎಂದು ಈ ಹಿಂದೆ ಶಾಸಕ ವಿಜಯಾನಂದ ಕಾಶಪ್ಪನವರ ಬೇಡಿಕೆ ಇಟ್ಟಿದ್ದರು. ಈಗ ಅವರದೇ ಸರ್ಕಾರ ಇದೆ ನೋಡೋಣ ಕೊಡಿಸಲಿ’ ಎಂದು ಸವಾಲು ಹಾಕಿದರು.

ವಜಾ ಮಾಡಿ:

‘ಸಚಿವ ಡಿ.ಸುಧಾಕರ ಜಾತಿ ನಿಂದನೆ ಮಾಡಿದ್ದಾರೆ.  ಸಂವಿಧಾನ ವಿರೋಧಿ ನಡವಳಿಕೆ ತೋರಿರುವ ಅವರು ತಕ್ಷಣ ರಾಜೀನಾಮೆ ನೀಡಬೇಕು, ಮುಖ್ಯಮಂತ್ರಿ ಅವರಿಗೆ ದಲಿತರ ಬಗ್ಗೆ ಗೌರವ ಇದ್ದರೆ ಸುಧಾಕರ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು’ ಎಂದು ಯತ್ನಾಳ ಒತ್ತಾಯಿಸಿದರು.

ಸಜೀವವಾಗಿ ಬಂದರೂ ಬೇಡ:

‘ನನ್ನ ಹೆಣ ಕೂಡ ಬಿಜೆಪಿಗೆ ಹೋಗಲ್ಲ‘ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ,  ‘ಸಿದ್ದರಾಮಯ್ಯನವರು ಸಜೀವವಾಗಿ ಬಂದರೂ ಬಿಜೆಪಿಗೆ ತೆಗೆದುಕೊಳ್ಳುವುದಿಲ್ಲ. ಇನ್ನು ಹೆಣವಾಗಿ ಬಂದರೆ ತೆಗೆದುಕೊಳ್ಳುತ್ತೇವಾ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.