ಕೆನರಾ ಬ್ಯಾಂಕ್ನ ಮನಗೊಳಿ ಶಾಖೆಯಲ್ಲಿ ನಡೆದಿದ್ದ ಕಳವು ಪ್ರಕರಣಕ್ಕೆ ಸಂಬಂಧಿಸಿ ವಶಪಡಿಸಿಕೊಂಡಿರುವ ಚಿನ್ನ, ನಗದನ್ನು ಐಜಿಪಿ ಚೇತನ್ ಸಿಂಗ್ ರಾಠೋಡ್ ಮತ್ತು ವಿಜಯಪುರ ಜಿಲ್ಲಾ ಎಸ್ಪಿ ಲಕ್ಷ್ಮಣ ನಿಂಬರಗಿ ವೀಕ್ಷಿಸಿದರು
–ಪ್ರಜಾವಾಣಿ ಚಿತ್ರ
ವಿಜಯಪುರ: ಜಿಲ್ಲೆಯ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಬ್ಯಾಂಕಿನ ಹಿಂದಿನ ಹಿರಿಯ ವ್ಯವಸ್ಥಾಪಕ, ರೈಲ್ವೆ ಇಲಾಖೆ ಮೂವರು ನೌಕರರು, ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಹಾಗೂ ವಿವಿಧ ಖಾಸಗಿ ಕಂಪನಿಗಳ ನೌಕರರು, ಲಾರಿ ಚಾಲಕ, ವಾಚ್ಮನ್, ಇಲೆಕ್ಟ್ರೀಷಿಯನ್ ಸೇರಿದಂತೆ 15 ಆರೋಪಿಗಳನ್ನು ವಿಜಯಪುರ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ವಿಜಯಪುರ: ಜಿಲ್ಲೆಯ ಮನಗೂಳಿ ಪಟ್ಟಣದಲ್ಲಿ ಮೇ ತಿಂಗಳಲ್ಲಿ ನಡೆದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಬ್ಯಾಂಕ್ನ ಹಿಂದಿನ ಹಿರಿಯ ವ್ಯವಸ್ಥಾಪಕ, ರೈಲ್ವೆ ಇಲಾಖೆ ಮೂವರು ನೌಕರರು, ಧಾರವಾಡದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಮತ್ತು ವಿವಿಧ ಖಾಸಗಿ ಕಂಪನಿಗಳ ನೌಕರರು, ಲಾರಿ ಚಾಲಕ, ಎಲೆಕ್ಟ್ರಿಷಿಯನ್ ಸೇರಿ 15 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
‘39 ಕೆಜಿ ಚಿನ್ನ, ₹1.16 ಕೋಟಿ ನಗದು, ಕೃತ್ಯಕ್ಕೆ ಬಳಸಿದ ರೈಲ್ವೆ ಇಲಾಖೆಗೆ ಸೇರಿದ ಸರಕುಸಾಗಣೆ ಲಾರಿ, 4 ವಾಕಿಟಾಕಿ, ಪಿಸ್ತೂಲ್ ಮಾದರಿಯ ಸಿಗರೇಟ್ ಲೈಟರ್, ಎರಡು ಗ್ಯಾಸ್ ಸಿಲಿಂಡರ್, ಒಂದು ಆಮ್ಲಜನಕ ಸಿಲಿಂಡರ್, ಬರ್ನಿಂಗ್ ಗನ್, ನಕಲಿ ಕೀಲಿ ಕೈ, ವಿವಿಧ ಕಂಪನಿಗಳ ಐದು ಕಾರು ವಶಕ್ಕೆ ಪಡೆಯಲಾಗಿದೆ.
‘ಬಂಧಿತರು ₹ 1.16 ಕೋಟಿ ನಗದನ್ನು ಗೋವಾದ ಕ್ಯಾಸಿನೊ
ವೊಂದರಲ್ಲಿ ಜಮೆ ಮಾಡಿದ್ದರು’ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ಚೇತನ್ ಸಿಂಗ್ ರಾಠೋಡ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
‘ಮನಗೂಳಿ ಕೆನರಾ ಬ್ಯಾಂಕ್ನ ಹಿಂದಿನ ಹಿರಿಯ ವ್ಯವಸ್ಥಾಪಕ ವಿಜಯಕುಮಾರ್ ಮಿರಿಯಾಲ (41), ಖಾಸಗಿ ಸಂಸ್ಥೆಯ ಉದ್ಯೋಗಿ ಚಂದ್ರಶೇಖರ ನೆರೆಲ್ಲಾ (38), ಸುನೀಲ ಮೋಕಾ (40) ಅವರನ್ನು ಹಿಂದೆಯೇ ಬಂಧಿಸಿ, ₹10.75 ಕೋಟಿ ಮೌಲ್ಯದ 10.5 ಕೆಜಿ ಚಿನ್ನಾಭರಣ ಮತ್ತು ಕರಗಿಸಿದ್ದ ಚಿನ್ನದ ಗಟ್ಟಿ ವಶಪಡಿಸಿಕೊಳ್ಳಲಾಗಿತ್ತು’ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
ನೈರುತ್ಯ ರೈಲ್ವೆ ನೌಕರರಾದ ಬಾಲರಾಜ ಮಣಿಕಮ್ ಯೆರುಕುಲಾ (40), ಬಾಬುರಾವ್ ಮಿರಿಯಾಲ (40), ಸುಲೇಮಾನ್ ವೆಸ್ಲಿ ಪಲುಕುರಿ (40), ಧಾರವಾಡ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಪೀಟರ್ (40), ಖಾಸಗಿ ಕಂಪನಿಯ ನೌಕರ ಗುಂಡು ಜೋಸೆಫ್ (28), ಚಂದನರಾಜ್ (29), ಚಾಲಕ ಇಜಾಜ್ ಧಾರವಾಡ (34), ವಾಚಮನ್ ಸುಸೈರಾಜ್ (44), ನಕಲಿ ಕೀಲಿ ಕೈ ತಯಾರಿಕೆ ಅಂಗಡಿಯ ಮಹಮ್ಮದ್ ಆಸೀಫ್ ಕಲ್ಲೂರ (31),ಚಾಲಕ ಅನಿಲ ಮಿರಿಯಾಲ (40), ಖಾಸಗಿ ಸಂಸ್ಥೆ ಉದ್ಯೋಗಿ ಅಬು ಅಲಿಯಾಸ್ ಮೋಹನ ಕುಮಾರ (42), ಎಲೆಕ್ಟ್ರಿಷಿಯನ್ ಮರಿಯಾದಾಸ(40) ಬಂಧಿತ ಆರೋಪಿಗಳು.
58 ಕೆ.ಜಿ ಅಲ್ಲ, 40 ಕೆ.ಜಿ.ಚಿನ್ನ: ‘ಕೃತ್ಯ ನಡೆದಿದ್ದ ವೇಳೆ ಎಫ್ಐಆರ್ನಲ್ಲಿ 58.97 ಕೆಜಿ ಚಿನ್ನಾಭರಣ ಕಳವಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದರು. ತನಿಖೆ ನಡೆಸಿದಾಗ 40.7 ಕೆಜಿ ಚಿನ್ನ ಕಳವು ಆಗಿರುವುದು ಖಚಿತವಾಯಿತು. ಇದರ ಕುರಿತು ಬ್ಯಾಂಕ್ನ ಅಧಿಕಾರಿಗಳು ಲಿಖಿತ ವರದಿ ನೀಡಿದ್ದಾರೆ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.
ಎಲ್ಲ ಬಂಧಿತರು ಹುಬ್ಬಳ್ಳಿಯವರು ಮತ್ತು ಸ್ನೇಹಿತರು. ಇದೇ ಮೊದಲ ಬಾರಿಗೆ ಕಳವು ಕೃತ್ಯ ನಡೆಸಿದ್ದರು. ಸಿನಿಮಾ, ಧಾರಾವಾಹಿಗಳನ್ನು ನೋಡಿ ಬ್ಯಾಂಕ್ ದರೋಡೆಗೆ ಯೋಜನೆ ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯಕ್ಕೂ ಮುನ್ನ ರಾಜ್ಯ, ದೇಶದ ವಿವಿಧೆಡೆ ಹಿಂದೆ ನಡೆದಿದ್ದ ದೊಡ್ಡ ಬ್ಯಾಂಕ್ ದರೋಡೆ ಪ್ರಕರಣಗಳನ್ನು ಅಧ್ಯಯನ ಮಾಡಿದ್ದರು ಎಂದು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.