ADVERTISEMENT

ವಿಜಯಪುರ: ಐಕ್ಯ ಮಂಟಪದಲ್ಲಿ ಎಂ.ಬಿ. ಪಾಟೀಲರಿಂದ ಇಷ್ಟಲಿಂಗ ಪೂಜೆ

​ಪ್ರಜಾವಾಣಿ ವಾರ್ತೆ
Published 3 ಮೇ 2022, 5:49 IST
Last Updated 3 ಮೇ 2022, 5:49 IST
ವಿಜಯಪುರ: ಐಕ್ಯ ಮಂಟಪದಲ್ಲಿ ಎಂ.ಬಿ. ಪಾಟೀಲರಿಂದ ಇಷ್ಟಲಿಂಗ ಪೂಜೆ
ವಿಜಯಪುರ: ಐಕ್ಯ ಮಂಟಪದಲ್ಲಿ ಎಂ.ಬಿ. ಪಾಟೀಲರಿಂದ ಇಷ್ಟಲಿಂಗ ಪೂಜೆ   

ವಿಜಯಪುರ: ಬಸವ ಜಯಂತಿ ಪ್ರಯುಕ್ತ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಅವರು ಮಂಗಳವಾರ ಕೂಡಲಸಂಗಮಕ್ಕೆ ಭೇಟಿ ನೀಡಿ, ಬಸವ ಐಕ್ಯ ಮಂಟಪ, ಸಂಗಮನಾಥನ ದರ್ಶನ ಪಡೆದರು.

ಸಂಗಮನಾಥನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಐಕ್ಯಮಂಟಪದಲ್ಲಿ ಇಷ್ಟಲಿಂಗಪೂಜೆ ನೆರವೇರಿಸಿ, ಕೆಲ ಹೊತ್ತು ಧ್ಯಾನ ಮಾಡಿ, ವಚನ ಪಠಿಸಿದರು.

ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಮುಖಂಡರು ಉಪಸ್ಥಿತರಿದ್ದರು.

ADVERTISEMENT

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ. ಪಾಟೀಲ್, ಇಂದು ಜಗತ್ತಿನಾದ್ಯಂತ ಅಣ್ಣ ಬಸವಣ್ಣನವರ ಜಯಂತಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾನೂ ಕೂಡ ಕೂಡಲ ಸಂಗಮಕ್ಕೆ ಬಂದು ಬಸವಣ್ಣನವರ ಐಕ್ಯ ಮಂಟಪದಲ್ಲಿ ನಮನಗಳನ್ನು ಸಲ್ಲಿಸಿದ್ದೇನೆ ಎಂದರು.

12ನೇ ಶತಮಾನದಲ್ಲಿ ಬಸವಾದಿ ಶರಣರು ಮಾನವ ಕುಲಕ್ಕೆ ತಮ್ಮ ಸೈದ್ದಾಂತಿಕ ನೆಲೆಯಲ್ಲಿ ವಚನಗಳ ನೀಡಿದ್ದಾರೆ. ಅಲ್ಲದೇ, ಜಗತ್ತಿನ ಮೊದಲ ಸಂಸತ್ ಆದ ಅನುಭವ ಮಂಟಪದ ಮೂಲಕ ಸಮಾನತೆ ಸಾರಿದ್ದಾರೆ ಎಂದರು.

ಸುಂದರ ಸಮಾಜ ನಿರ್ಮಾಣವಾಗಬೇಕು. ಸಮಾಜದಲ್ಲಿನ ತಾರತಮ್ಯಗಳನ್ನು ಹೋಗಲಾಡಿಸಿ ಸುಂದರ ಜೀವನ ಸಾಗಿಸಲು ಅಗತ್ಯವಾಗಿರುವ ಸಂದೇಶಗಳನ್ನು ಸರಳ ಮತ್ತು ಆಡುಭಾಷೆಯಲ್ಲಿ ರಚಿಸುವ ಮೂಲಕ ನಮ್ಮ ನಾಡು, ದೇಶ ಮತ್ತು ಜಗತ್ತಿಗೆ ದೊಡ್ಡ ಸಂದೇಶವನ್ನು ವಚನಕಾರರು ನೀಡಿದ್ದಾರೆ ಎಂದು ಅವರು ಹೇಳಿದರು.

ವಚನಗಳು ಮತ್ತು ಬಸವ ಧರ್ಮದ ಕುರಿತು ಜಾಗತಿಕ ಮಟ್ಟದಲ್ಲಿ ಪ್ರಚಾರವಾಗಬೇಕು. ಇದು ಕೇವಲ ನಮ್ಮ ಸ್ವತ್ತಲ್ಲ. ಜಗತ್ತಿನ ಸ್ವತ್ತು. ಜಗತ್ತಿನ ಎಲ್ಲ ಜನರು ಇದನ್ನು ತಿಳಿದುಕೊಂಡು ತಮ್ಮ ಬದುಕನ್ನು ಸುಂದರಗೊಳ್ಳಬೇಕು. ಹಿಂದೆಂದಿಗಿಂತಲೂ ಇಂದು ಬಸವಾದಿ ಶರಣರು ಹೆಚ್ಚು ಪ್ರಸ್ತುತರಾಗಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.