
ಎಂ.ಬಿ.ಪಾಟೀಲ ಮತ್ತು ನರೇಂದ್ರ ಮೋದಿ
ವಿಜಯಪುರ: ‘ನರೇಗಾ ಯೋಜನೆಯಿಂದ ಮಹಾತ್ಮ ಗಾಂಧಿ ಹೆಸರನ್ನು ಬದಲಿಸಿ, ರಾಮನ ಹೆಸರನ್ನು ಇಟ್ಟಿರುವುದು ಸರಿಯಲ್ಲ. ರಾಮನ ಹೆಸರಿಟ್ಟಿರುವ ಕಾರಣಕ್ಕಾದರೂ ಯೋಜನೆಯನ್ನು ಬಲಿಷ್ಠಗೊಳಿಸಬೇಕಿತ್ತು. ಆದರೆ, ರಾಮನ ಹೆಸರಲ್ಲಿ ಯೋಜನೆಯನ್ನು ಬಲಹೀನಗೊಳಿಸಿ, ನಿರ್ನಾಮ ಮಾಡಲು ಪ್ರಧಾನಿ ಮೋದಿ ಹೊರಟಿದ್ದಾರೆ’ ಎಂದು ಸಚಿವ ಎಂ.ಬಿ.ಪಾಟೀಲ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದ್ವೇಷ ಭಾಷಣ ವಿದೇಯಕವನ್ನು ಬಿಜೆಪಿಯವರು ವಿರೋಧಿಸುತ್ತಿರುವುದು ಏಕೆ ಎಂಬುದು ತಿಳಿಯುತ್ತಿಲ್ಲ. ಈ ವಿದೇಯಕ ಕೇವಲ ಬಿಜೆಪಿಯವರಿಗಲ್ಲ, ಕಾಂಗ್ರೆಸಿನವರಿಗೂ ಅನ್ವಯಿಸುತ್ತದೆ. ಕುಂಬಳಕಾಯಿ ಕಳ್ಳ ಎಂದಾಕ್ಷಣ ಹೆಗಲು ಮುಟ್ಟಿಕೊಳ್ಳುವುದು ಏಕೆ? ದ್ವೇಷ ಭಾಷಣ ಮಾಡಿ, ಸಮಾಜದ ಶಾಂತಿ ಕೆಡಿಸುವವರನ್ನು ನಿಯಂತ್ರಿಸಲು ಈ ಕಾನೂನಿನಿಂದ ಅನುಕೂಲವಾಗಲಿದೆ’ ಎಂದರು.
ಕಬ್ಬು ಬೆಳೆಗಾರರಿಗೆ ಮೋಸ: ‘ಪ್ರತಿ ಟನ್ ಕಬ್ಬಿಗೆ ಕೇಂದ್ರ ಸರ್ಕಾರ ₹3550 ನಿಗದಿ ಮಾಡಿದೆ. ಆದರೆ, ಇದರಲ್ಲಿ ₹700 ರಿಂದ ₹800 ಕಟಾವು ಮತ್ತು ಸಾಗಾಟ(ಎಚ್ ಅಂಡ್ ಟಿ)ಕ್ಕೆ ಸೇರಿದೆ. ಇದನ್ನು ಕಳೆದರೆ ರೈತರಿಗೆ ಪ್ರತಿ ಟನ್ಗೆ ಸಿಗುವುದು ₹2750 ಮಾತ್ರ. ಇದು ರೈತರಿಗೆ ಮೋದಿ ಸರ್ಕಾರ ನೀಡುವ ದರ. ಇದನ್ನು ರೈತರು, ರೈತ ಹೋರಾಟಗಾರರು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.
‘ಎಥೆನಾಲ್ ಉತ್ಪಾದನೆಗೆ ಕೇಂದ್ರ ಸರ್ಕಾರ ಉತ್ತೇಜನ ನೀಡಿ, ದೊಡ್ಡ ಮಟ್ಟದ ಪ್ರಚಾರ ಮಾಡಿತು. ಆದರೆ, ಕಾರ್ಖಾನೆಗಳಿಂದ ಉತ್ಪಾದನೆಯಾದ ಅರ್ಧದಷ್ಟು ಖರೀದಿಸದೇ ಮೋಸ ಮಾಡಿದೆ. ಇದರ ಪರಿಣಾಮ ರೈತರು, ಕಾರ್ಖಾನೆಯವರು ಅನುಭವಿಸುವಂತಾಗಿದೆ’ ಎಂದು ದೂರಿದರು.