ವಿಜಯಪುರ: ಒತ್ತಡದ ಜೀವನ ಶೈಲಿಯ ಮಧ್ಯೆ ಆರೋಗ್ಯವಂತ ಬದುಕಿಗೆ ದೈಹಿಕ ಹಾಗೂ ಮಾನಸಿಕ ಸ್ಥಿರತೆ ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಭಾಗ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾನಸಿಕ ಸ್ಥಿರತೆ ಹೊಂದಲು ಕ್ರೀಡೆ ಸಹಾಯಕವಾಗಿವೆ. ಬಿಡುವಿಲ್ಲದ ಕಾರ್ಯದೊಂದಿಗೆ ಒತ್ತಡದ ನಿವಾರಣೆಗಾಗಿ ಹೆಚ್ಚೆಚ್ಚು ಕ್ರೀಡೆ, ಆಟೋಟ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ದೈಹಿಕ ಮಾನಸಿಕ ಸದೃಢತೆಯನ್ನು ಕಾಪಾಡಿಕೊಳ್ಳಬೇಕು. ದೇಹಾರೋಗ್ಯ ಮತ್ತು ಮಾನಸಿಕ ಆರೋಗ್ಯ ಹೊಂದಿ ಸ್ಪೂರ್ತಿದಾಯಕ ಜೀವನ ನಡೆಸಬೇಕು ಎಂದು ಹೇಳಿದರು.
ಸಾರಿಗೆ ಸಿಬ್ಬಂದಿ ನಿತ್ಯ ಸಾರ್ವಜನಿಕರೊಂದಿಗೆ ಸಂಪರ್ಕವಿರುವ ಒತ್ತಡದ ವೃತ್ತಿ ಜೀವನ. ಇಂತಹ ಸಂದರ್ಭದಲ್ಲಿ ತಾಳ್ಮೆ ಬಹುಮುಖ್ಯವಾಗಿದೆ. ಮಾನಸಿಕ ಒತ್ತಡಕ್ಕೊಳಗಾಗದೇ ತಾಳ್ಮೆಯಿಂದ ಸಂಯಮದಿಂದ ಸಾರ್ವಜನಿಕರೊಂದಿಗೆ ವರ್ತಿಸಬೇಕು ಎಂದು ಅವರು ಹೇಳಿದರು.
ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಮಾತನಾಡಿ, ಈ ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಕ್ರೀಡಾ ಮನೋಭಾವದಿಂದ ಸಕ್ರೀಯವಾಗಿ ಭಾಗವಹಿಸಿ ಸಾಧನೆಗೈದು ಇಲಾಖೆ ಕೀರ್ತಿ ಹೆಚ್ಚಿಸಬೇಕು ಎಂದು ಹೇಳಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ರಾಜಶೇಖರ ಧೈವಾಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಅಶೋಕ ಘೋಣಸಗಿ, ಸಾರಿಗೆ ಅಧಿಕಾರಿಗಳಾದ ಎಂ.ಎಸ್.ಹಿರೇಮಠ, ಎಂ.ಎಚ್.ಅಗರಖೇಡ, ಕಾರ್ಮಿಕ ಮುಖಂಡ ಆರ್.ಜಿ.ಲಿಂಗದಳ್ಳಿ, ಘಟಕ ವ್ಯವಸ್ಥಾಪಕ ಎಸ್.ಎಂ.ವಾಲೀಕಾರ ಇದ್ದರು.
ವಿವಿಧ ಕ್ರೀಡೆಗಳು ಕ್ರೀಡಾಕೂಟದಲ್ಲಿ ವಾಲಿಬಾಲ್ ಷೆಟಲ್ ಕಾಕ್ ಸಿಂಗಲ್ ಚೆಸ್ ಕೇರಂ ಪುರುಷ ಹಾಗೂ ಮಹಿಳೆಯರಿಗೆ ಆಥ್ಲೆಟಿಕ್ಸ್ 100ಮೀಟರ್ 200 ಮೀಟರ್ ಹಾಗೂ 400 ಓಟ್ ಪಾಸ್ಟ್ ವಾಕ್ ಥ್ರೋ ಬಾಲ್ ಕ್ರಿಕೆಟ್ ಮಹಿಳೆಯರಿಗೆ ಚುಕ್ಕಿ ರಂಗೋಲಿ ಭಾವಗೀತೆ ಏಕ ಪಾತ್ರಾಭಿನಯ ಸೇರಿದಂತೆ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.