ವಿಜಯಪುರ: ಜಿಲ್ಲೆಯ ರೈತರಿಗೆ ಕಳಪೆ ತೊಗರಿ ಬೀಜ ವಿತರಣೆ ಮಾಡಿ, ಬೆಳೆ ನಷ್ಠಕ್ಕೆ ಕಾರಣವಾಗಿರುವ ಖಾಸಗಿ ಬೀಜ ಕಂಪನಿಗಳ ಹಿತರಕ್ಷಣೆಯಲ್ಲಿ ತೊಡಗಿರುವ ವಿಜಯಪುರ ಜಿಲ್ಲಾಧಿಕಾರಿ, ಜಂಟಿ ಕೃಷಿ ನಿರ್ದೇಶಕರು ಹಾಗೂ ತೊಗರಿ ಬೀಜ ಪೂರೈಕೆ ಮಾಡಿದ ಏಜೆನ್ಸಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲೆಯ ಸುಮಾರು 15 ಸಾವಿರಕ್ಕೂ ಅಧಿಕ ರೈತರು ಲೋಕಾಯುಕ್ತರಿಗೆ ಡಿ.10 ರಿಂದ ದೂರು ದಾಖಲಿಸಲಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಪೆ ಬೀಜ ವಿತರಣೆ ಮಾಡಿರುವ ಖಾಸಗಿ ಕಂಪನಿಗಳನ್ನು ರಕ್ಷಣೆ ಮಾಡುತ್ತಿರುವ ಜಿಲ್ಲಾಧಿಕಾರಿ, ಜಂಟಿ ಕೃಷಿ ನಿರ್ದೇಶಕರ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಬಳಿ ಕ್ರಿಮಿನಲ್ ಕೇಸು ಕೂಡ ದಾಖಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಶೇ 80ರಷ್ಟು ಬೆಳೆ ನಷ್ಠ
ಉತ್ತರ ಕರ್ನಾಟಕ ಭಾಗದ ಜಿಲ್ಲೆಯ ರೈತರು ಈ ಬಾರಿ ತೊಗರಿ ಬೆಳೆ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಇದ್ದರು. ಎದೆ ಎತ್ತರ ಬೆಳೆದಿದೆ. ಹೂವು ಕಟ್ಟಿದ ಬಳಿಕ ಕಾಯಿ ಕಟ್ಟುವ ಸಮಯದಲ್ಲಿ ಉದುರಿ ಹೋಗಿದೆ. ಶೇ 20 ರಿಂದ ಶೇ 30ರಷ್ಟು ಮಾತ್ರ ಉಳಿದುಕೊಂಡಿದೆ. ಉಳಿದಿರುವುದೆಲ್ಲ ಉದುರಿಹೋಗಿ ಶೇ 80ರಷ್ಟು ಬೆಳೆ ನಷ್ಠವಾಗಿದೆ ಎಂದು ಹೇಳಿದರು.
ಕೃಷಿ ಕೇಂದ್ರದ ಮೂಲಕ ಖಾಸಗಿ ಏಜೆನ್ಸಿಯಿಂದ ರೈತರಿಗೆ ವಿತರಿಸಲಾಗಿರುವ ತೊಗರಿ ಬೀಜ ಕಳಪೆಯಾಗಿವೆ. ಈ ಬೀಜ ಬಿತ್ತನೆ ಮಾಡಿದ ಹೊಲಗಳಲ್ಲಿ ತೊಗರಿ ಗೊಡ್ಡು ರೋಗಕ್ಕೆ ತುತ್ತಾಗಿದೆ. ಅಂದಾಜು ₹5 ಸಾವಿರ ಕೋಟಿಗೂ ಅಧಿಕ ನಷ್ಠವಾಗಿದೆ ಎಂದರು.
ಜಿಲ್ಲಾಡಳಿತ ಸಂಪೂರ್ಣ ಸತ್ತುಹೋಗಿದೆ. ಜಿಲ್ಲಾಧಿಕಾರಿ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಉಸ್ತುವಾರಿ ಸಚಿವರು ಇದ್ದಾರೋ, ಇಲ್ಲವೋ ಗೊತ್ತಿಲ್ಲ, ಕೆಡಿಪಿ ಸಭೆ ಮಾಡಿ ಅಧಿಕಾರಿಗಳಿಗೆ ಬೆಳೆ ನಷ್ಠ ಸಮೀಕ್ಷೆಗೆ ಸೂಚಿಸಿಲ್ಲ. ರೈತರ ಹೊಲಕ್ಕೆ ಭೇಟಿ ನೀಡಿ, ಸಮಸ್ಯೆ ಅರಿಯುವ ಕೆಲಸ ಮಾಡಿಲ್ಲ ಎಂದು ದೂರಿದರು.
ಇನ್ನೊಂದು ವಾರ ಅಥವಾ ಎರಡು ವಾರದೊಳಗೆ ತೊಗರಿ ಕೊಯ್ಲು ಮುಗಿಯಲಿದೆ. ಅಷ್ಟರೊಳಗೆ ತುರ್ತಾಗಿ ಬೆಳೆ ಹಾನಿ ಸಮೀಕ್ಷೆ ಆಗಬೇಕು. ಆದರೆ, ಸರ್ಕಾರ ಇದುವರೆಗೂ ಸಮೀಕ್ಷೆಗೆ ಕ್ರಮ ಕೈಗೊಳ್ಳದೆ ದಿನ ದೂಡುತ್ತಿದೆ. ಪರಿಹಾರ ಕೊಡುವುದರಿಂದ ತಪ್ಪಿಸಿಕೊಳ್ಳಲು ಹವಣಿಸುತ್ತಿದೆ ಎಂದು ದೂರಿದರು.
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ಸಮೀಕ್ಷೆ ಮಾಡಿ ನೀಡಿರುವ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಹಸಿ ಸುಳ್ಳಿನಿಂದ ಕೂಡಿದೆ. ಬೆಳೆ ಹಾನಿಗೆ ಪರಿಹಾರ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಹವಾಮಾನ ವೈಪರೀತ್ಯ ಎಂದು ಹೇಳಿ ದಾರಿ ತಪ್ಪಿಸುವ ಕೆಲಸ ಮಾಡಲಾಗಿದೆ ಎಂದು ಆರೋಪಿಸಿದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಬಾಲರಾಜ ರೆಡ್ಡಿ, ರಾಜಶೇಖರ ರೊಳ್ಳಿ, ರಾಚಪ್ಪ, ಪಾಂಡು ಸಾಹುಕಾರ, ಡಿ.ಜಿ.ಬಿರಾದಾರ, ರೇಣುಕಾ ಪರಸಪ್ಪಗೋಳ, ವಿಜಯ್ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.