ADVERTISEMENT

ರಾಮರಾಯರ ಸಮಾಧಿ ಶೀಘ್ರ ಅಭಿವೃದ್ಧಿ: ಎ.ಎಸ್.ಪಾಟೀಲ ನಡಹಳ್ಳಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 13:07 IST
Last Updated 25 ಮಾರ್ಚ್ 2023, 13:07 IST
ಮುದ್ದೇಬಿಹಾಳ ತಾಲ್ಲೂಕು  ಕೋಳೂರು ಗ್ರಾಮದಲ್ಲಿರುವ ವಿಜಯನಗರ ಸಾಮ್ರಾಜ್ಯದ ಕೊನೆಯ ಅರಸ ಅಳಿಯ ರಾಮರಾಯನ ಸಮಾಧಿ ಸ್ಥಳಕ್ಕೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಗ್ರಾಮಸ್ಥರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು
ಮುದ್ದೇಬಿಹಾಳ ತಾಲ್ಲೂಕು  ಕೋಳೂರು ಗ್ರಾಮದಲ್ಲಿರುವ ವಿಜಯನಗರ ಸಾಮ್ರಾಜ್ಯದ ಕೊನೆಯ ಅರಸ ಅಳಿಯ ರಾಮರಾಯನ ಸಮಾಧಿ ಸ್ಥಳಕ್ಕೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಗ್ರಾಮಸ್ಥರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು   

ವಿಜಯಪುರ: ಮುದ್ದೇಬಿಹಾಳ ತಾಲ್ಲೂಕು ಕೋಳೂರು ಗ್ರಾಮದಲ್ಲಿರುವ ವಿಜಯನಗರ ಸಾಮ್ರಾಜ್ಯದ ಕೊನೇಯ ಅರಸ ಅಳಿಯ ರಾಮರಾಯರ ಸಮಾಧಿಯನ್ನು ಅತಿ ಶೀಘ್ರದಲ್ಲಿ ಅಭಿವೃದ್ದಿಪಡಿಸಲು ಅಗತ್ಯವಿರುವ ಎಲ್ಲ ಕ್ರಮ ಕೈಕೊಳ್ಳಲಾಗುತ್ತದೆ ಎಂದು ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಕೋಳೂರು ಗ್ರಾಮದಲ್ಲಿರುವ ರಾಮರಾಯರ ಸಮಾಧಿ ಸ್ಥಳಕ್ಕೆ ಗ್ರಾಮಸ್ಥರೊಂದಿಗೆ ಭೇಟಿ ನೀಡಿ ಸಮಾಧಿಯ ಸ್ಥಿತಗತಿ ಪರಿಶೀಲಿಸಿದ ನಂತರ ಅವರು ಮಾತನಾಡಿದರು.

ತಾಳಿಕೋಟೆ ಕದನವೆಂದೇ ಖ್ಯಾತಿ ಪಡೆದಿರುವ ರಕ್ಕಸ-ತಂಗಡಗಿ ಯುದ್ಧದಲ್ಲಿ ಅವನತಿ ಹೊಂದಿದ ವಿಜಯನಗರ ಸಾಮ್ರಾಜ್ಯ ದಕ್ಷಿಣ ಭಾರತದ ಏಕೈಕ ಕನ್ನಡ ಅರಸರ ಸಾಮ್ರಾಜ್ಯವಾಗಿತ್ತು. ಆದರೆ, ಇದರ ಕೊನೇಗಾಲ ದುರಂತಮಯವಾಗಿತ್ತು ಎಂದರು

ADVERTISEMENT

ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಕೃಷ್ಣಾ ನದಿ ತೀರದ ರಕ್ಕಸ ತಂಗಡಗಿಯಿಂದ ಹಿಡಿದು ತಾಳಿಕೋಟೆವರೆಗೂ ಯುದ್ಧದ ಕುರುಹುಗಳು ಇವೆ. ಇದೊಂದು ರಣಭೂಮಿ ಆಗಿತ್ತು. ಈಗಾಗಲೇ ನನ್ನ ಕೋರಿಕೆ ಮತ್ತು ವಿಧಾನಸಭೆಯಲ್ಲಿ ಧ್ವನಿ ಎತ್ತಿದ ಪರಿಣಾಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಪ್ರದೇಶದಲ್ಲಿರುವ ಐತಿಹಾಸಿಕ ಪ್ರದೇಶಗಳ ಅಭಿವೃದ್ದಿ ಕುರಿತು ಬಜೆಟ್‍ನಲ್ಲಿ ಘೋಷಣೆ ಮಾಡಿದ್ದಾರೆ. ಇದಕ್ಕಾಗಿ ವಿಶೇಷ ಅನುದಾನವೂ ಮುಂದಿನ ದಿನಗಳಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ ಎಂದು ಹೇಳಿದರು.

ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ಇಂದಿನ ಪೀಳಿಗೆಗೆ ತಿಳಿಸಿಕೊಡಲು ಮತ್ತು ಈ ಭಾಗದ ಐತಿಹಾಸಿಕ ಪ್ರದೇಶಗಳನ್ನು ಪ್ರವಾಸಿ ತಾಣವನ್ನಾಗಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ. ದೇಶ ವಿದೇಶದ ಪ್ರವಾಸಿಗಳು ಈ ಭಾಗಕ್ಕೆ ಆಗಮಿಸಿ ಇಲ್ಲಿನ ಐತಿಹಾಸಿಕ, ಪ್ರವಾಸಿ ತಾಣಗಳ ಸೌಂದರ್ಯ ಅನುಭವಿಸುವ ರೀತಿಯಲ್ಲಿ ಅಭಿವೃದ್ಧಿ ಮಾಡುವ ಸಂಕಲ್ಪ ತೊಟ್ಟಿದ್ದೇನೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಸಮಾಧಿಯ ಮೇಲಿರುವ ಶಿವಲಿಂಗ, ವೀರಗಲ್ಲು, ಬಸವಣ್ಣ, ಕಲ್ಲುನಾಗರ, ಯುದ್ಧದ ಚಿತ್ರಣ ತಿಳಿಸುವ ಕಲ್ಲು ಮುಂತಾದ ಪಳೆಯುಳಿಕೆಗಳನ್ನು ಶಾಸಕರು ಇದೇ ಸಂದರ್ಭ ಪರಿಶೀಲಿಸಿ ಗ್ರಾಮಸ್ಥರಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡರು.

ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಮಲ್ಲಿಕಾರ್ಜುನ ತಂಗಡಗಿ, ಗ್ರಾಮದ ಪ್ರಮುಖರು ಇದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.