ADVERTISEMENT

ಬಲಗೈ ಸಮುದಾಯದ ಜನರು ಜಾಗೃತರಾಗಿ: ವಕೀಲ ಆರ್.ಎಂ. ಚೌರ ಮನವಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 2:23 IST
Last Updated 2 ಮಾರ್ಚ್ 2026, 2:23 IST
ಆರ್.ಎಂ.ಚೌರ
ಆರ್.ಎಂ.ಚೌರ   

ಸಿಂದಗಿ: ‘ಸದಾಶಿವ ಆಯೋಗದ ವರದಿಯ ಒಳಮೀಸಲಾತಿ ಅಸಮತೋಲನದಿಂದ ಕೂಡಿದ್ದು, ಈ ಕುರಿತು ಬಲಗೈ ಸಮುದಾಯದ ಜನರು ಜಾಗೃತರಾಗಬೇಕು. ಒಳಮೀಸಲಾತಿ ವಿರೋಧಿಸಿ ವಿಜಯಪುರ ಜಿಲ್ಲೆಯಲ್ಲಿ ಹೋರಾಟ ನಡೆಯದಿರುವುದು ದುರದೃಷ್ಟಕರ. ಹೋರಾಟಕ್ಕೆ ಸಜ್ಜಾಗಬೇಕು’ ಎಂದು ವಕೀಲ ಆರ್.ಎಂ. ಚೌರ ಮನವಿ ಮಾಡಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಲಗೈ ಸಮುದಾಯದ ಜನರಿಗೆ ಸರ್ಕಾರಿ ನೌಕರಿ ದೊರಕುವುದು ದುರ್ಲಭವಾಗುತ್ತದೆ. ಹೀಗಿದ್ದಾಗ್ಯೂ ಬಲಗೈ ಸಮುದಾಯದ ಸಚಿವರು, ಶಾಸಕರು ಮೌನ ವಹಿಸಿರುವುದು ಏಕೆ’ ಎಂದು ಪ್ರಶ್ನಿಸಿದರು.

‘ಮಾದಿಗ ಸಮುದಾಯದ ಮುಖಂಡ ಭಾಸ್ಕರರಾವ್ ಮತ್ತು ಮೈಸೂರಿನ ವಕೀಲ ಅರುಣ ಅವರು ಸಚಿವರಾದ ಎಚ್.ಡಿ. ಮಹಾದೇವಪ್ಪ, ಪರಮೇಶ್ವರ, ಪ್ರಿಯಾಂಕ್ ಖರ್ಗೆ ಅವರನ್ನು ಅವಹೇಳನಕಾರಿಯಾಗಿ ಟೀಕಿಸುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಒಳಮೀಸಲಾತಿಯಿಂದ ಸದ್ಯ ಸರ್ಕಾರಿ ನೇಮಕಾತಿ ಮಾಡಿಕೊಳ್ಳುತ್ತಿರುವ 56 ಸಾವಿರ ಹುದ್ದೆಗಳಲ್ಲಿ ಹೆಚ್ಚಿನ ಲಾಭ ಸ್ಪ್ರಶ್ಯ ಜಾತಿ ಲಂಬಾಣಿ ಸಮುದಾಯಕ್ಕೆ ದಕ್ಕುತ್ತದೆ. ಮಾದಿಗ ಸಮುದಾಯದ ಸಚಿವರು, ಸಂಸದರು ತಮ್ಮ ಸಮುದಾಯದ ಜನತೆಗೆ ಯಾರಿಗೂ ಗೊತ್ತಿಲ್ಲದ ರೀತಿಯಲ್ಲಿ ಸರ್ಕಾರಿ ಸೌಲಭ್ಯಗಳನ್ನು ದೊರಕಿಸಿಕೊಡುವ ಕಾರ್ಯ ಮಾಡುತ್ತಾರೆ. ಆದರೆ ಬಲಗೈ ಸಮುದಾಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಕುಟುಂಬ ಜೊತೆಗೆ ಮಾದಿಗ ಸಮುದಾಯದ ಆರ್.ಬಿ. ತಿಮ್ಮಾಪುರ ಅವರಿಗೆ ವಿಧಾನ ಪರಿಷತ್ ಸ್ಥಾನ ದೊರಕಿಸಿಕೊಟ್ಟು ಸಚಿವರನ್ನಾಗಿ ಮಾಡುತ್ತಾರೆ’ ಎಂದು ಟೀಕಿಸಿದರು.

‘ಮಾದಿಗ ಸಮುದಾಯಕ್ಕೆ ಸೇರಿದ ಗೋವಿಂದ ಕಾರಜೋಳ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ತಮ್ಮ ಸಮುದಾಯದ ಜನರನ್ನು ಎತ್ತಿ ಹಿಡಿದಿದ್ದಾರೆ. ಆದರೆ ಈ ಜಾತಿ ನಿಷ್ಠೆ ಬಲಗೈ ಸಮುದಾಯದ ನಾಯಕರಲ್ಲಿ ಕಾಣದಿರುವುದು ದುರಂತವೇ ಸರಿ’ ಎಂದು ವಿಷಾದಿಸಿದರು.

ರವಿ ಅಲಹಳ್ಳಿ, ಚಂದ್ರಕಾಂತ ಕಾಂಬಳೆ, ಸಂತೋಷ ಪೂಜಾರಿ ಇದ್ದರು.

‘ಸಿದ್ಧರಾಮಯ್ಯ ಜಾತಿನಿಷ್ಠ, ಖರ್ಗೆ ಪಕ್ಷ ನಿಷ್ಠ’

‘ಮುಖ್ಯಮಂತ್ರಿ ಸಿದ್ಧರಾಮಯ್ಯ ಜಾತಿ ನಿಷ್ಠರಾಗಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷ ನಿಷ್ಠರಾಗಿದ್ದಾರೆ. ಅವರಲ್ಲಿ ಪುತ್ರ ವ್ಯಾಮೋಹ ಇದೆ. ತಮ್ಮ ಬಲಗೈ ಸಮುದಾಯದ ನಿಷ್ಠೆ ಎಳ್ಳಷ್ಟೂ ಇಲ್ಲ. ಇದರಿಂದಾಗಿ ಒಳಮೀಸಲಾತಿಯಲ್ಲಿ ಪರಿಶಿಷ್ಟ ಜಾತಿಯಾದ ಚಲವಾದಿ ಸಮುದಾಯದವರು ಅನ್ಯಾಯಕ್ಕೊಳಗಾಗಿದ್ದಾರೆ’ ಎಂದು ಆರ್.ಎಂ. ಚೌರ ಅವರು ಚಲವಾದಿ ಸಮುದಾಯದ ಸಚಿವರು ಶಾಸಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.