ಇಂಡಿ ತಾಲ್ಲೂಕಿನ ಬಬಲಾದ ಗ್ರಾಮದಲ್ಲಿ ಕಟ್ಟಿಗೆ ಒಲೆಯಲ್ಲಿ ಮಹಿಳೆಯರು ಶೇಂಗಾ ಹೋಳಿಗೆ ಸಿದ್ಧಪಡಿಸುತ್ತಿರುವುದು
ಇಂಡಿ (ವಿಜಯಪುರ ಜಿಲ್ಲೆ): ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಉಚಿತ ಬಸ್ ಪ್ರಯಾಣ ಸೌಲಭ್ಯ ಬಳಸಿಕೊಂಡು ತಾಲ್ಲೂಕಿನ ಬಬಲಾದ ಗ್ರಾಮದ 20 ಮಹಿಳೆಯರು ಉದ್ಯಮಿಗಳಾಗಿದ್ದಾರೆ. ‘ಒಡಲ ಧ್ವನಿ’ ಎಂಬ ಮಹಿಳಾ ಸಂಘ ರಚಿಸಿಕೊಂಡಿರುವ ಅವರು ಹೋಳಿಗೆ ತಯಾರಿಸಿ, ಬೆಂಗಳೂರಿಗೆ ಬಸ್ನಲ್ಲಿ ತೆರಳಿ, ವ್ಯಾಪಾರ ಮಾಡುತ್ತಾರೆ.
ಬರಗಾಲದ ಸಂದರ್ಭದಲ್ಲಿ ಬೇರೆ ಊರುಗಳಿಗೆ ವಲಸೆ ಹೋಗದೇ, ಮಹಿಳೆಯರು ಸಾವಯವ ಶೇಂಗಾ, ಬೆಲ್ಲ, ಗೋಧಿಯ ಹೋಳಿಗೆ ತಯಾರಿಸಿದರು. ಬಸ್ನಲ್ಲಿ ಉಚಿತವಾಗಿ ಬೆಂಗಳೂರಿಗೆ ಪ್ರಯಾಣಿಸಿ, ಅಲ್ಲಿ ವ್ಯಾಪಾರ ಆರಂಭಿಸಿದರು. ಸಾವಯವ ಧಾನ್ಯಗಳಿಂದ ಹೋಳಿಗೆ ಎಂಬುದಕ್ಕೆ ‘ರಾಗಿ ಕಣ’ ಸಂಸ್ಥೆಯು ಪ್ರಮಾಣೀಕರಿಸಿತು.
‘ಆರಂಭದಲ್ಲಿ 20 ಮಹಿಳೆಯರು ಸೇರಿ ಪ್ರತಿ ದಿನ 200 ಹೋಳಿಗೆ ತಯಾರಿಸಿದೆವು. ಇಬ್ಬರು ಮಹಿಳೆಯರು ಬಸ್ನಲ್ಲಿ ಬೆಂಗಳೂರಿಗೆ ತೆರಳಿ, ಹೋಳಿಗೆ ಮಾರಿದರು. ಬೆಂಗಳೂರಿನಲ್ಲಿ ದೊಡ್ಡ ಅಂಗಡಿ, ಖಾನಾವಳಿ, ಹೋಟೆಲ್ಗಳಿಗೆ ಭೇಟಿ ನೀಡಿ, ವ್ಯಾಪಾರ ಮಾಡಲು ಅನುಕೂಲವಾಯಿತು’ ಎಂದು ಸಂಘದ ಕಾರ್ಯದರ್ಶಿ ಭುವನೇಶ್ವರಿ ಕಾಂಬಳೆ ತಿಳಿಸಿದರು.
‘ಸದ್ಯ ಸಾವಯವ ಹೋಳಿಗೆಗೆ ಬೆಂಗಳೂರಿನಲ್ಲಿ ಬೇಡಿಕೆ ಹೆಚ್ಚಾಗಿದ್ದು, ಪ್ರತಿ ದಿನ 200 ಬದಲು ಈಗ ಒಂದು ಸಾವಿರ ಹೋಳಿಗೆ ಬೆಂಗಳೂರಿಗೆ ಒಯ್ಯತ್ತೇವೆ. ₹ 20ರ ದರದಲ್ಲಿ ಒಂದು ಹೋಳಿಗೆ ಮಾರುತ್ತೇವೆ. ತಿಂಗಳಿಗೆ ತಲಾ ₹ 20 ಸಾವಿರ ಆದಾಯ ಬರುತ್ತದೆ. ಶೇಂಗಾ, ಬೆಲ್ಲ ಮತ್ತು ಗೋಧಿ ಸ್ಥಳೀಯ ರೈತರಿಂದ ಸಿಗುತ್ತದೆ. ಹೀಗಾಗಿ ಅದರ ಖರ್ಚು ಕಡಿಮೆ. ಬೆಂಗಳೂರಿಗೆ ಹೋಗಿ ಬರಲು ನಾವೇ ಒಂದು ಪಾಳಿ ವ್ಯವಸ್ಥೆ ಮಾಡಿಕೊಂಡಿದ್ದೇವೆ’ ಎಂದರು.
‘ಗ್ರಾಮದಲ್ಲೇ ಇನ್ನೊಂದು ಮಹಿಳಾ ಸಂಘ ಸ್ಥಾಪಿಸಿ, ಅವರಿಗೆ ತರಬೇತಿ ನೀಡಿ ವ್ಯಾಪಾರ ಆರಂಭಿಸುವ ಉದ್ದೇಶವಿದೆ. ಉದ್ಯಮದ ಬಗ್ಗೆ ಜಾಗೃತಿ ಮೂಡಿಸಲು ಬಯಸಿದ್ದೇವೆ’ ಎಂದರು. ಮಾಹಿತಿಗೆ ಸಂಪರ್ಕಿಸಿ: 9901793029.
ಶೇಂಗಾ ಹಿಂಡಿ ಸಜ್ಜೆ ರೊಟ್ಟಿ ಜೋಳದ ಕಡಕ್ ರೊಟ್ಟಿ ಉಪ್ಪಿನಕಾಯಿ ನಿಂಬೆ ಪುಡಿ ಮುಂತಾದವು ಕಳುಹಿಸುತ್ತೇವೆ. ಸಂಘಸಂಸ್ಥೆಗಳಿಗೆ ಭೇಟಿ ನೀಡಿ ವ್ಯಾಪಾರ ಮತ್ತು ಗುಣಮಟ್ಟದ ಮಾಹಿತಿ ಪಡೆಯುತ್ತೇವೆ.ಭುವನೇಶ್ವರಿ ಕಾಂಬಳೆ ಕಾರ್ಯದರ್ಶಿ ‘ಒಡಲ ಧ್ವನಿ’ ಸಂಘ
ಭುವನೇಶ್ವರಿ ಕಾಂಬಳೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.