ADVERTISEMENT

ಹದಗೆಟ್ಟ ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿ: ಪ್ರಯಾಣಿಕರ ನಿತ್ಯ ಪರದಾಟ

ದೂಳು, ರಸ್ತೆ ತುಂಬಾ ಗುಂಡಿ

ಶಾಂತೂ ಹಿರೇಮಠ
Published 3 ಜನವರಿ 2026, 5:52 IST
Last Updated 3 ಜನವರಿ 2026, 5:52 IST
ಸಿಂದಗಿ-ಗೋಲಗೇರಿ ಮಾರ್ಗವಾಗಿ ಕೊಡಂಗಲ್ ರಾಜ್ಯ ಹೆದ್ದಾರಿ ದು:ಸ್ಥಿತಿ.
ಸಿಂದಗಿ-ಗೋಲಗೇರಿ ಮಾರ್ಗವಾಗಿ ಕೊಡಂಗಲ್ ರಾಜ್ಯ ಹೆದ್ದಾರಿ ದು:ಸ್ಥಿತಿ.   

ಸಿಂದಗಿ: ಹಲವಾರು ವರ್ಷಗಳಿಂದ ಸಿಂದಗಿ-ಗೋಲಗೇರಿ ಮಾರ್ಗವಾಗಿ ಕೊಡಂಗಲ್ ರಾಜ್ಯ ಹೆದ್ದಾರಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ರಸ್ತೆಯ ಬದಲಿಗೆ ಗುಂಡಿಗಳೇ ಕಾಣುತ್ತವೆ. ಹೀಗಾಗಿ ಈ ರಸ್ತೆಯಲ್ಲಿ ಪದೇ, ಪದೇ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಅದರಲ್ಲೂ ಸಾರಿಗೆ ಬಸ್ ಗಳು ಪಲ್ಟಿಯಾಗುವುದು, ತಗ್ಗಿಗೆ ಉರುಳುವುದು ಸಾಮಾನ್ಯವಾಗಿದೆ. ಹೀಗಾಗಿ ಪ್ರಯಾಣಿಕರು, ವಿದ್ಯಾರ್ಥಿಗಳು ಆತಂಕದಲ್ಲಿಯೇ ಬಸ್ ಏರುತ್ತಾರೆ.

ಸಾರಿಗೆ ಬಸ್ ಗಳು ಪದೇ, ಪದೇ ಅಪಘಾತಕ್ಕೊಳಗಾಗುವ ಕುರಿತಾಗಿ ಸಾರಿಗೆ ಘಟಕ ವ್ಯವಸ್ಥಾಪಕರು ಹದಗೆಟ್ಟ ರಸ್ತೆಯೇ ಪ್ರಮುಖ ಕಾರಣ ಎಂದು ಅಭಿಪ್ರಾಯಪಡುತ್ತಾರೆ.
2025, ಸೆಪ್ಟಂಬರ್ 24 ರಂದು ಬಿಜೆಪಿ ಕಾರ್ಯಕರ್ತರು ಡಂಬಳ ಕ್ರಾಸ್ ಬಳಿ ಹೆದ್ದಾರಿ ತಡೆ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಅವರು ಬೇಗನೇ ಈ ರಸ್ತೆ ಕಾಮಗಾರಿಗೆ ಮಂಜೂರಾತಿಯೊಂದಿಗೆ ಅನುದಾನ ಬಿಡುಗಡೆಗೊಳಿಸಿ ಭೂಮಿಪೂಜೆ ನೆರವೇರಿಸಿದರೆ ಮತಕ್ಷೇತ್ರದ ಶಾಸಕರಿಗೆ ಮೈಸೂರು ಪೇಟಾ ತೊಡಿಸಿ ಗೌರವಿಸುತ್ತೇನೆ ಎಂದು ಆಹ್ವಾನ ನೀಡಿದ್ದರು.

ಇದೇ ದಿನ ಕಾಂಗ್ರೆಸ್ ಕಾರ್ಯಕರ್ತರು ಗೋಲಗೇರಿಯಲ್ಲಿ ಶಾಸಕರು ಈ ರಸ್ತೆ ಕಾಮಗಾರಿಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ ಪತ್ರದೊಂದಿಗೆ ವಿಜಯೋತ್ಸವ ಆಚರಿಸಿರುವುದು ವಿಶೇಷವಾಗಿತ್ತು.

ADVERTISEMENT

ಹದಗೆಟ್ಟ ಈ ಹೆದ್ದಾರಿ ಕಾಮಗಾರಿ ಪ್ರಾರಂಭದ ಮುಹೂರ್ತ ಯಾವಾಗ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಹತ್ತಾರು ಹಳ್ಳಿಗಳ ಗ್ರಾಮಸ್ಥರು ಕಾಯುತ್ತಿದ್ದಾರೆ.

ಸಿಂದಗಿ-ಬ್ಯಾಕೋಡ ರಸ್ತೆಯ ತಿರುವಿನಲ್ಲಿ ತಡೆಗೋಡೆಯಿಲ್ಲದ ಅಪಾಯಕಾರಿ ತೆರೆದಬಾವಿ.

ಫಲಿಸದ ಮಾಜಿ ಶಾಸಕ ಭೂಸನೂರ ಸವಾಲು...!

ಸೆಪ್ಟಂಬರ್ ತಿಂಗಳಲ್ಲಿ ಗೋಲಗೇರಿ ಬಳಿ ಡಂಬಳ ಕ್ರಾಸ್ ನಲ್ಲಿ ಮಾಜಿ ಶಾಸಕ ರಮೇಶ ಭೂಸನೂರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಕೊಡಂಗಲ್ ರಾಜ್ಯ ಹೆದ್ದಾರಿ ನಿರ್ಮಾಣಕ್ಕಾಗಿ ಆಗ್ರಹಿಸಿ ಹೆದ್ದಾರಿಯಲ್ಲಿನ ಗುಂಡಿಗಳಲ್ಲಿ ಗಿಡ ನೆಟ್ಟು ಪ್ರತಿಭಟನೆ ನಡೆಸಿದ್ದರು.ಈ ಸಂದರ್ಭದಲ್ಲಿ ಮತಕ್ಷೇತ್ರದ ನಿಕಟಪೂರ್ವ ಶಾಸಕ ರಮೇಶ ಭೂಸನೂರ ಮೂರು ತಿಂಗಳ ಕಾಲಾವಕಾಶ ಕೊಡುತ್ತೇನೆ ಈ ರಸ್ತೆ ಕಾಮಗಾರಿ ಭೂಮಿಪೂಜೆ ಮಾಡಿ ತೋರಿಸಿ ಎಂದು ಹಾಲಿ ಶಾಸಕರಾದ ಅಶೋಕ ಮನಗೂಳಿಯವರಿಗೆ ಸವಾಲು ಹಾಕಿದ್ದರು.

ಸರ್ಕಾರಕ್ಕೆ ಪ್ರಸ್ತಾವ

‘₹ 30 ಕೋಟಿ ವೆಚ್ಚದ ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿ ಕಾಮಗಾರಿ ಪ್ರಸ್ತಾವ ಸರ್ಕಾರದ ಹಂತದಲ್ಲಿದೆ. ಒಂದು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ. ಆದರೆ ಬ್ಯಾಕೋಡ ರಸ್ತೆಗೆ ಅಪೆಂಡಿಕ್ಸ್-ಸಿ ಯೋಜನೆ ಅಡಿ ಅನುದಾನ ದೊರಕುವ ಭರವಸೆ ಇದೆ.ಈ ಸಂದರ್ಭದಲ್ಲಿ ರಸ್ತೆಯ ತಿರುವಿನಲ್ಲಿರುವ ತೆರೆದ ಬಾವಿಗೆ ತಡೆಗೋಡೆ ನಿರ್ಮಿಸಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ತಿಳಿಸಿದ್ದಾರೆ. ‘ಬ್ಯಾಕೋಡ ರಸ್ತೆಯ ತಿರುವಿನಲ್ಲಿರುವ ತೆರೆದ ಬಾವಿ ತಡೆಗೋಡೆಗಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಪ್ರವಾಹ ಅನುದಾನದಡಿ ₹ 10 ಲಕ್ಷ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ. ಕೊಡಂಗಲ್ ಹೆದ್ದಾರಿ ಮತ್ತು ಬ್ಯಾಕೋಡ ರಸ್ತೆಗಳ ತಾತ್ಪೂರ್ತಿಕ ಸುಧಾರಣಾ ಕೆಲಸ ಒಂದು ವಾರದಲ್ಲಿ ಪ್ರಾರಂಭಗೊಳ್ಳಲಿದೆ’ ಎಂದು ಎಇಇ ಲೋಕೋಪಯೋಗಿ ಇಲಾಖೆ ಅರುಣಕುಮಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.