ADVERTISEMENT

ವಿಜಯಪುರ: ಸೈನಿಕ ಶಾಲೆ ತಲುಪಿದ ಸಿದ್ಧೇಶ್ವರ ಶ್ರೀಗಳ ಪಾರ್ಥೀವ ಶರೀರ

​ಪ್ರಜಾವಾಣಿ ವಾರ್ತೆ
Published 3 ಜನವರಿ 2023, 1:35 IST
Last Updated 3 ಜನವರಿ 2023, 1:35 IST
ಸಿದ್ಧೇಶ್ವರ ಶ್ರೀಗಳ ಪಾರ್ಥೀವ ಶರೀರವನ್ನು ಆಶ್ರಮದಿಂದ ತೆರೆದ ವಾಹನದಲ್ಲಿ ಸೈನಿಕ ಶಾಲೆಗೆ ತರಲಾಯಿತು.
ಸಿದ್ಧೇಶ್ವರ ಶ್ರೀಗಳ ಪಾರ್ಥೀವ ಶರೀರವನ್ನು ಆಶ್ರಮದಿಂದ ತೆರೆದ ವಾಹನದಲ್ಲಿ ಸೈನಿಕ ಶಾಲೆಗೆ ತರಲಾಯಿತು.   

ವಿಜಯಪುರ: ಸೋಮವಾರ ಸಂಜೆ ಅಸ್ತಂಗತರಾದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳ ಪಾರ್ಥೀವ ಶರೀರವನ್ನು ಆಶ್ರಮದಿಂದ ತೆರೆದ ವಾಹನದಲ್ಲಿ ಸೈನಿಕ ಶಾಲೆಗೆ ತರಲಾಯಿತು.

ಆಶ್ರಮದಿಂದ ಶ್ರೀಗಳ ಪಾರ್ಥೀವ ಶರೀರವನ್ನು ತೆರೆದ ವಾಹನದಲ್ಲಿ ನಗರದ ಬಿಎಲ್‌ಡಿಇ ಆಸ್ಪತ್ರೆ, ಸಿದ್ಧೇಶ್ವರ ದೇವಾಲಯ, ಗಾಂಧಿ ಚೌಕ, ಶಿವಾಜಿ ವೃತ್ತದ ಮಾರ್ಗವಾಗಿ ಸೈನಿಕ ಶಾಲೆಗೆ ತರಲಾಯಿತು. ಈ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಸಹಸ್ರಾರು ಭಕ್ತರು ಶ್ರೀಗಳ ಪಾರ್ಥೀವ ಶರೀರವನ್ನು ದರ್ಶನ ಮಾಡಿ, ಕೈಮುಗಿದು ಕಂಬನಿ ಮಿಡಿದರು.

ಭಕ್ತರಿಂದ ಶಿವಸ್ತೋತ್ರ, ವಚನಗಳ ಗಾಯನ ಸೈನಿಕ ಶಾಲೆಯ ಆವರಣದಲ್ಲಿ ಅನುರಣಿಸುತ್ತಿದೆ.

ADVERTISEMENT

ಸೈನಿಕ ಶಾಲೆಯ ಆವರಣದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನ 3ರ ವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸಹಸ್ರಾರು ಭಕ್ತರು ಸೈನಿಕ ಶಾಲೆಯತ್ತ ಧಾವಿಸತೊಡಗಿದ್ದಾರೆ.

ಸಂಜೆ 4ರ ಬಳಿಕ ಶ್ರೀಗಳ ಪಾರ್ಥೀವ ಶರೀರವನ್ನು ತೆರೆದ ವಾಹನದಲ್ಲಿ ಸೈನಿಕ ಶಾಲೆಯಿಂದ ಮರಳಿ ಆಶ್ರಮಕ್ಕೆ ತಂದು, ಸಂಜೆ 6ಕ್ಕೆ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು. ಅವರ ಆಶಯದಂತೆ ಪಾರ್ಥೀವ ಶರೀರವನ್ನು ಅಗ್ನಿಗೆ ಅರ್ಪಿಸಲು ಸಿದ್ಧತೆ ನಡೆದಿದೆ.

ಭಕ್ತ ಸಾಗರ ವಿಜಯಪುರದತ್ತ ಬರುತ್ತಿರುವುದರಿಂದ ಯಾವುದೇ ಅವ್ಯವಸ್ಥೆ ಆಗದಂತೆ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಅಗತ್ಯ ಕ್ರಮಕೈಗೊಂಡಿದೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ, ನಾಡಿನ ಗಣ್ಯರು, ಸಚಿವರು, ಶಾಸಕರು, ಮಠಾಧೀಶರು ಶ್ರೀಗಳ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ವಿಜಯಪುರಕ್ಕೆ ಬರುತ್ತಿದ್ದಾರೆ.

ಕನ್ಹೇರಿಮಠದ ಅದೃಶ್ಯನಂದ ಕಾಡಸಿದ್ದೇಶ್ವರ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜ್ಞಾನಯೋಗಾಶ್ರಮದ ಬಸವಾನಂದ ಸ್ವಾಮೀಜಿ ಹಾಗೂ ಶಾಸಕರಾದ ಎಂ.ಬಿ.ಪಾಟೀಲ, ಬಸನಗೌಡ ಪಾಟೀಲ ನೇತೃತ್ವದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.