
ವಿಜಯಪುರ: ‘ಇಂದಿನ ಒತ್ತಡದ ಜೀವನದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದೇ ಹೆಚ್ಚುವರಿ ಸಂಪತ್ತು ಗಳಿಸಿದಂತೆ’ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.
ನಗರದ ಬಿ.ಎಲ್.ಡಿ.ಇ ಟ್ರಾಮಾ ಸೆಂಟರ್ ಮಿನಿ ಆಡಿಟೋರಿಯಂನಲ್ಲಿ ಬಾಗಲಕೋಟೆ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಬಿ.ಎಲ್.ಡಿ.ಇ ಆರೋಗ್ಯ ಯೋಜನೆಯ ಕುಟುಂಬ ಆರೋಗ್ಯ ಚೀಟಿಗಳನ್ನು ಸೋಮವಾರ ವಿತರಿಸಿ ಮಾತನಾಡಿದರು.
‘ಬದುಕಿರುವವರೆಗೆ ಯಾವುದೇ ಆರೋಗ್ಯ ಸಮಸ್ಯೆಗೆ ಒಳಗಾಗದೆ, ಪರಾವಲಂಬಿಯಾಗಿ ಜೀವನ ಸಾಗಿಸದೇ ಇರುವುದು ಅಗತ್ಯವಾಗಿದೆ. ಬಿ.ಎಲ್.ಡಿ.ಇ ನಗರ ಆರೋಗ್ಯ ಕೇಂದ್ರದ ಒಂದೇ ಸೂರಿನಡಿ ಆಯುರ್ವೇದ ಮತ್ತು ಅಲೋಪಥಿ ಚಿಕಿತ್ಸೆ ಸೌಲಭ್ಯ ಒದಗಿಸಲಾಗಿದೆ. ಮುಂಬರುವ ದಿನಗಳಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಹೊಸ ಆಯುರ್ವೇದ ಕಾಲೇಜು ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ. ಅಲ್ಲಿ ನಗರ ಆರೋಗ್ಯ ಕೇಂದ್ರವನ್ನೂ ಪ್ರಾರಂಭಿಸಲಾಗುವುದು’ ಎಂದು ತಿಳಿಸಿದರು.
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ವೈ.ಎಂ. ಜಯರಾಜ, ಕುಲಪತಿ ಅರುಣ ಚಂ. ಇನಾಮದಾರ, ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯೆ ಡಾ. ತೇಜಶ್ವಿನಿ ವಲ್ಲಭ, ಬಾಗಲಕೋಟೆ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಅಂಗಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.