ADVERTISEMENT

‘ರೈತರ ಪ್ರಗತಿಗೆ ಪಣ ತೊಡಿ’

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 11:59 IST
Last Updated 10 ಅಕ್ಟೋಬರ್ 2020, 11:59 IST
ಇಂಡಿ ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ  ವಿಜ್ಞಾನಿಗಳು ಮತ್ತು ರೈತರ ಸಮನ್ವಯ ಸಭೆ ನಡೆಯಿತು. ಮಹಾಂತ ಸ್ವಾಮೀಜಿ ಇದ್ದಾರೆ
ಇಂಡಿ ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ  ವಿಜ್ಞಾನಿಗಳು ಮತ್ತು ರೈತರ ಸಮನ್ವಯ ಸಭೆ ನಡೆಯಿತು. ಮಹಾಂತ ಸ್ವಾಮೀಜಿ ಇದ್ದಾರೆ   

ಇಂಡಿ: ‘ಧಾರವಾಡದ ಕೃಷಿ ವಿಶ್ವವಿದ್ಯಾಲಯದ ನಿಯಮಗಳನ್ನು ಪಾಲಿಸಿ, ಸಹಬಾಳ್ವೆ ಹಾಗೂ ಸಹಕಾರದೊಂದಿಗೆ ಕೆಲಸ ನಿರ್ವಹಿಸುವ ಮೂಲಕ ರೈತರ ಅಭಿವೃದ್ಧಿಗೆ ಪಣ ತೊಡೋಣ’ ಎಂದು ತದ್ದೇವಾಡಿ ಗ್ರಾಮದ ಮಹಾಂತ ಸ್ವಾಮೀಜಿ ಹೇಳಿದರು.

ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದ ಸಭಾ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ರೈತರು ಮತ್ತು ಕೃಷಿ ವಿಜ್ಞಾನಿಗಳ ಸಮನ್ವಯ ಸಭೆಯಲ್ಲಿ ಮಾತನಾಡಿದರು.

ರೈತ ಸಂಜೀವ ಭೈರಶೆಟ್ಟಿ ಮಾತನಾಡಿ, ‘ಇಂಡಿ ಕೃಷಿ ವಿಜ್ಞಾನ ಕೇಂದ್ರ, ವಿಜಯಪುರ ಸಹ ವಿಸ್ತರಣಾ ನಿರ್ದೇಶಕರ ಕಚೇರಿ ಹಾಗೂ ಕೃಷಿ ಇಲಾಖೆಯ ಸಿಬ್ಬಂದಿ ಒಗ್ಗಟ್ಟಾಗಿ ರೈತರ ಏಳ್ಗೆಗೆ ಶ್ರಮಿಸುತ್ತಿದ್ದಾರೆ’ ಎಂದರು.

ADVERTISEMENT

‘ಕೃಷಿ ವಿಜ್ಞಾನ ಕೇಂದ್ರದಲ್ಲಿ ಆತ್ಮ ಯೋಜನೆಯಡಿ ತರಬೇತಿ ಹಮ್ಮಿಕೊಳ್ಳಲು ಅವಕಾಶ ನೀಡುತ್ತಿಲ್ಲ ಎಂಬ ದೂರು ಸರಿಯಲ್ಲ. ಸಂವಹನ ಕೊರತೆಯಿಂದ ಹೀಗಾಗಿದೆ’ ಎಂದು ಸ್ಪಷ್ಟಪಡಿಸಿದರು.

ಮುಂದಿನ ಕೃಷಿ ಸಂಬಂಧಿತ ಯಾವುದೇ ತರಬೇತಿಯನ್ನು ಇಂಡಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಸುವಾಗ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂಬ ನಿರ್ಣಯವನ್ನು ಸಭೆಯಲ್ಲಿ ನಿರ್ಣಯಿಸಲಾಯಿತು.

ಸಹ ವಿಸ್ತರಣಾ ನಿರ್ದೇಶಕ ಡಾ. ಆರ್.ಬಿ.ನೆಗಳೂರ, ಆತ್ಮ ಯೋಜನೆಯ ಉಪನಿರ್ದೇಶಕ ಡಾ. ಎಂ.ಬಿ.ಪಟ್ಟಣಶೆಟ್ಟಿ, ಇಂಡಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ರೈತರಾದ ಎಸ್.ಟಿ.ಪಾಟೀಲ, ಮುದ್ದುಗೌಡ ಪಾಟೀಲ, ರಾಜಶೇಖರ ನಿಂಬರಗಿ, ಮಲ್ಲಿಕಾರ್ಜುನ ಕುಂಬಳ, ದಾದು ಮುಲ್ಲಾ, ಚಿದಂಬರ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.