ಬೆಂಗಳೂರು: ಕೊರೊನಾ ಕಾರಣಕ್ಕೆ ಶಾಲೆಗಳನ್ನು ಮುಚ್ಚಿದ್ದರಿಂದ ’ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್‘ ಸರ್ಕಾರಿ ಶಾಲಾ ಮಕ್ಕಳಿಗೆ ಆಯ್ದ ಸ್ಥಳಗಳಲ್ಲಿ ಪಠ್ಯೇತರ ಕಲಿಕಾ ಚಟುವಟಿಕೆಗಳನ್ನು ನಡೆಸಿದೆ.
'ಕೊರೊನಾಗೂ ಮುನ್ನ ಸಂಸ್ಥೆಯು 'ಶಾಲಾ ಶಿಕ್ಷಣ ಅಭಿಯಾನ'ದಡಿ ಸರ್ಕಾರಿ ಶಾಲೆಗಳಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿತ್ತು. ಕೊರೊನಾದಿಂದ ಮಕ್ಕಳ ಕಲಿಕಾ ಗುಣಮಟ್ಟಕ್ಕೆ ಅಡ್ಡಿಯಾಗದಿರಲಿ ಎಂದು 'ಸಮುದಾಯ ಕಲಿಕಾ ಕ್ಲಬ್'ಗಳನ್ನು ಸ್ಥಾಪಿಸಿ, ಪಠ್ಯೇತರ ಚಟುವಟಿಕೆಗಳನ್ನು ಆರಂಭಿಸಿದೆವು' ಎಂದು ಮೂವ್ಮೆಂಟ್ನ ಶಿಕ್ಷಣ ಕಾರ್ಯಕ್ರಮ ವ್ಯವಸ್ಥಾಪಕ ಸುನೀಲ್ ತಿಳಿಸಿದರು.
'ನಗರದ 72 ಸರ್ಕಾರಿ ಶಾಲೆಗಳೊಂದಿಗೆ ಸಂಸ್ಥೆ ಕೈಜೋಡಿಸಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಗಸ್ಟ್ ನಿಂದ ತರಗತಿಗಳನ್ನು ಆರಂಭಿಸಿದ್ದು, ಬೆಳಿಗ್ಗೆ 10ರಿಂದ 5ರವರೆಗೆ ಮಕ್ಕಳಿಗೆ ಪಠ್ಯೇತರ ಚಟುವಟಿಕೆ ನಡೆಸಲಾಗುತ್ತಿದೆ. ಇದಕ್ಕಾಗಿ ಸ್ಥಳೀಯರ ನೆರವಿನಲ್ಲಿ ಸಮುದಾಯ ಭವನಗಳು ಹಾಗೂ ಬೇರೆ ಸ್ಥಳಗಳನ್ನು ಬಳಸಿಕೊಂಡೆವು' ಎಂದು ವಿವರಿಸಿದರು.
'ಚಿತ್ರಕಲೆ, ಯೋಗ, ನೈತಿಕ ಕಥೆಗಳು, ಕೊಲಾಜ್, ನೃತ್ಯ, ಹಾಡು ಹಾಗೂ ಹಲವು ಆಟಗಳನ್ನು ಆಡಿಸುತ್ತಿದ್ದೆವು. ತರಗತಿಗಳಿಗೆ ಬರುವ ವಿದ್ಯಾರ್ಥಿಗಳಿಗೆ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಸ್ವಯಂ ಸ್ವಚ್ಛತೆ, ಸ್ವಚ್ಛ ಭಾರತ್ ಅಭಿಯಾನ ಹಾಗೂ ನೈತಿಕ ಮೌಲ್ಯಗಳನ್ನು ಕುರಿತು ಹೇಳಿಕೊಡುತ್ತಿದ್ದೇವೆ' ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.