ನಲ್ಲಿಗುಡ್ಡೆ
ಬೆಟ್ಟಗುಡ್ಡಗಳಿಂದ ಆವೃತ್ತವಾಗಿರುವ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯು ಪ್ರವಾಸಿಗರ ನೆಚ್ಚಿನ ತಾಣವೂ ಹೌದು. ಕೋಟೆ ಕೊತ್ತಲ, ದೇವಸ್ಥಾನ, ವನ್ಯಜೀವಿಗಳ ಆವಾಸ್ಥಾನ ಸೇರಿದಂತೆ ಐತಿಹಾಸಿಕ ಹಾಗೂ ಪೌರಾಣಿಕ ನಂಟು ಇಲ್ಲಿನ ಬೆಟ್ಟಗಳಿಗಿವೆ. ಇವುಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಬರುತ್ತಿದೆ. ಟ್ರೆಕ್ಕಿಂಗ್ ಎಂದಾಕ್ಷಣ ನೆನಪಾಗುವುದು ರಾಮನಗರ ಎಂದರೆ ಅತಿಶಯೋಕಿಯಲ್ಲ. ‘ಶೋಲೆ’ ಸಿನಿಮಾ ಖ್ಯಾತಿಯ ರಾಮದೇವರ ಬೆಟ್ಟ, ಹಂದಿಗುಂದಿ ಬೆಟ್ಟ, ಕೂಟಗಲ್ ತಿಮ್ಮಪ್ಪನ ಬೆಟ್ಟ, ಕಬ್ಬಾಳು ಬೆಟ್ಟ ಸೇರಿದಂತೆ ಹಲವು ಬೆಟ್ಟಗಳು ಪ್ರವಾಸಿಗರ ಕಣ್ಮುಂದೆ ಬರುತ್ತವೆ. ಇವೆಲ್ಲದರ ನಡುವೆ ಇತ್ತೀಚೆಗೆ ಜಿಲ್ಲೆಯು ಜಲಕ್ರೀಡೆಗಳಿಂದಾಗಿ ಪ್ರವಾಸಿಗರ ಗಮನ ಸೆಳೆಯುತ್ತಿವೆ.
ಹೌದು. ಜಿಲ್ಲೆಯು ಜಲಮೂಲಗಳ ಆಗರವೂ ಹೌದು. ಅರ್ಕಾವತಿ, ವೃಷಭಾವತಿ, ಕಾವೇರಿ, ಕಣ್ವ ನದಿಗಳ ಹರಿಯುವ ಜಿಲ್ಲೆಯು ನೂರಾರು ಕೆರೆಗಳು ಹಾಗೂ ಕೆಲವು ಜಲಾಶಯಗಳ ತಾಣವೂ ಹೌದು. ಅಂತಹ ಪ್ರಕೃತಿ ಮಡಿಲಲ್ಲಿರುವ ಚನ್ನಪಟ್ಟಣದ ಕಣ್ವ ಜಲಾಶಯ, ರಾಮನಗರದ ರಂಗರಾಯರದೊಡ್ಡಿ ಕೆರೆ ಹಾಗೂ ಬಿಡದಿಯ ನಲ್ಲಿಗುಡ್ಡೆ ಕೆರೆಯಂಗಳದಲ್ಲಿ ಆರಂಭಿಸಿರುವ ಜಲಕ್ರೀಡೆಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ.
ಜಿಲ್ಲೆಯಷ್ಟೇ ಅಲ್ಲದೆ ರಾಜಧಾನಿ ಬೆಂಗಳೂರು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಜಲಕ್ರೀಡೆಗಳನ್ನು ಆನಂದಿಸುತ್ತಿದ್ದಾರೆ. ರಾಮನಗರವೆಂದರೆ ಈಗ ಟ್ರೆಕ್ಕಿಂಗ್ ಮಾತ್ರವಲ್ಲ ಜಲಕ್ರೀಡೆಗೂ ಜನಪ್ರಿಯ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಾಗಾಗಿ, ಒಂದು ದಿನದ ಟ್ರೆಕ್ಕಿಂಗ್ ಮತ್ತು ಪಿಕ್ನಿಕ್ಗೆ ಬಂದವರು ಇಲ್ಲಿನ ಜಲಕ್ರೀಡೆಗಳನ್ನು ಸವಿಯುತ್ತಿದ್ದಾರೆ.
ಕಣ್ಭ ಜಲಾಶಯ
ಬೊಂಬೆ ನಾಡು ಖ್ಯಾತಿಯ ಚನ್ನಪಟ್ಟಣ ತಾಲ್ಲೂಕಿನ ಕಣ್ವ ಜಲಾಶಯವು ತನ್ನ ಪ್ರಕೃತಿ ಸೌಂದರ್ಯದ ಜೊತೆಗೆ ಜಲಕ್ರೀಡೆಗಳ ಕಾರಣಕ್ಕೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ಟಿಡಿಸಿ) ಹಾಗೂ ಕೋಸ್ಟಲ್ ಸಿ ಅಡ್ವೆಂಚರ್ ಸಂಸ್ಥೆ ಸಹಭಾಗಿತ್ವದಲ್ಲಿ ವಿವಿಧ ಜಲಕ್ರೀಡೆಗಳನ್ನು ಆರಂಭಿಸಲಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸ್ಥಳೀಯ ಶಾಸಕ ಸಿ.ಪಿ. ಯೋಗೇಶ್ವರ್ ಸೇರಿದಂತೆ ಹಲವು ಗಣ್ಯರು ಇಲ್ಲಿನ ಜಲಕ್ರೀಡೆಗಳನ್ನು ಸವಿದಿದ್ದಾರೆ.
ಇಲ್ಲಿರುವ ಕಯಾಕಿಂಗ್, ಬಿಗ್ಬೋಟ್, ವಾಟರ್ ಬೈಕ್, ವಾಟರ್ ಬೋಟ್, ಪೆಡಲ್ ಬೋಟ್, ಸ್ಪೀಡ್ ಬೋಟ್, ಬನಾನಾ ಬೋಟ್, ಪ್ಲೇಯಿಂಗ್ ಬೋಟ್ ಜಲಕ್ರೀಡೆಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. ವಾರಾಂತ್ಯದ ದಿನಗಳಾದ ಶನಿವಾರ ಮತ್ತು ಭಾನುವಾರ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಯುವಜನರ ಜೊತೆಗೆ ಕುಟುಂಬ ಸಮೇತ ಬಂದು ಜಲಕ್ರೀಡೆಗಳನ್ನು ಆನಂದಿಸುವವರ ಸಂಖ್ಯೆ ಹೆಚ್ಚು.
ತಲುಪುವುದು ಹೇಗೆ?: ಕಣ್ವ ಜಲಾಶಯವು ರಾಜಧಾನಿ ಬೆಂಗಳೂರಿನಿಂದ ಸುಮಾರು 56 ಕಿ.ಮೀ. ದೂರದಲ್ಲಿದೆ. ಚನ್ನಪಟ್ಟಣ ತಾಲ್ಲೂಕು ಕೇಂದ್ರದಿಂದ 13 ಕಿ.ಮೀ. ಅಂತರದಲ್ಲಿದೆ. ರಾಜಧಾನಿಯಿಂದ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊರಟು ರಾಮನಗರದ ಸಂಗಬಸವನದೊಡ್ಡಿಯಲ್ಲಿರುವ ನಿರ್ಗಮನ ಸ್ಥಳದಲ್ಲಿ ಸರ್ವೀಸ್ ರಸ್ತೆಗಿಳಿಯಬೇಕು. ಅಲ್ಲಿಂದ ನೇರವಾಗಿ ಬಂದರೆ ಕಣ್ವ ಜಲಾಶಯ ಕ್ರಾಸ್ ಕೆಳ ಸೇತುವೆ ಸಿಗುತ್ತದೆ. ಅಲ್ಲಿಂದ ಸಾಗುವ ದಾರಿ ಜಲಾಶಯಕ್ಕೆ ಕರೆದೊಯ್ಯುತ್ತದೆ. ಜಲಾಶಯದ ಸ್ಥಳದಲ್ಲಿ ಹೊಟ್ಟೆಗೆ ಖುಷಿಪಡಿಸುವಂತಹ ಹೋಟೆಲ್ಗಳು ಹಾಗೂ ಕುರುಕು ತಿಂಡಿಗಳ ಅಂಗಡಿಗಳಿಲ್ಲ. ಹಾಗಾಗಿ, ಅಂತಹದ್ದಕ್ಕೆಲ್ಲಾ ಮುಂಚೆಯೇ ವ್ಯವಸ್ಥೆ ಮಾಡಿಕೊಂಡು ಬರಬೇಕು. ಕಣ್ವ ಜಲಾಶಯಕ್ಕೆ ಹೋಗುವ ಮಾರ್ಗದ ಲಿಂಕ್ಗೆ ಇಲ್ಲಿ ಕ್ಲಿಕ್ಕಿಸಿ
ರಂಗರಾಯರದೊಡ್ಡಿ ಕೆರೆ
ರಾಮನಗರದ ಹೊರವಲಯದಲ್ಲಿರುವ ರಂಗರಾಯರದೊಡ್ಡಿ ಕೆರೆಯು ಜಲಕ್ರೀಡೆಗಳ ಮೋಜು ಮಸ್ತಿ ತಾಣವಾಗಿಯೂ ಗಮನ ಸೆಳೆಯುತ್ತಿದೆ. ವಾಯುವಿಹಾರ ತಾಣವಾಗಷ್ಟೇ ಉಳಿದಿದ್ದ ಬೆಟ್ಟದ ತಪ್ಪಲಿನಲ್ಲಿರುವ ಕೆರೆಯಂಗಳದಲ್ಲಿ ಜಲಕ್ರೀಡೆಗಳನ್ನು ಆರಂಭಿಸಲಾಗಿದೆ. ನಗರದ ಆಕರ್ಷಕ ಸ್ಥಳಗಳಲ್ಲಿ ಒಂದಾಗಿರುವ ಕೆರೆಯು ರಾಮನಗರಕ್ಕೆ ಭೇಟಿ ನೀಡುವ ಪ್ರವಾಸಿಗರ ನೆಚ್ಚಿನ ತಾಣವೂ ಹೌದು.
ಕೆರೆಯಲ್ಲಿ ಜಲಕ್ರೀಡೆಗಳನ್ನು ಆರಂಭಿಸುವ ಮೂಲಕ ಪ್ರವಾಸೋದ್ಯಮ ಚಟುವಟಿಕೆಗೆ ಉತ್ತೇಜನ ನೀಡಬೇಕು ಎಂಬ ಕೂಗು ಹಿಂದಿನಿಂದಲೂ ಇತ್ತು. ಇದೀಗ, ಅದು ನನಸಾಗಿದೆ. ಕೆರೆಯಲ್ಲಿ ಸದ್ಯ ಕಯಾಕಿಂಗ್, ಪೆಡಲ್ ಬೋಟಿಂಗ್, ವಾಟರ್ ಬೈಕ್, ಬನಾನ ಬೋಟ್ ಕ್ರೀಡೆಗಳನ್ನು ಆರಂಭಿಸಲಾಗಿದೆ. ಮುಂದೆ ಫ್ಲೋಟಿಂಗ್ ರೆಸ್ಟೊರೆಂಟ್ ಆರಂಭಿಸುವ ಆಲೋಚನೆಯನ್ನು ಪ್ರವಾಸೋದ್ಯಮ ಇಲಾಖೆ ಹೊಂದಿದೆ.
ತಲುಪುವುದು ಹೇಗೆ?: ರಾಜಧಾನಿ ಬೆಂಗಳೂರಿನಿಂದ ರಂಗರಾಯರದೊಡ್ಡಿ ಕೆರೆಯು 48 ಕಿ.ಮೀ. ದೂರದಲ್ಲಿದೆ. ರಾಜಧಾನಿಯಿಂದ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊರಟರೆ ಸಂಗಬಸವನದೊಡ್ಡಿಯಲ್ಲಿ ಸರ್ವೀಸ್ ರಸ್ತೆಯ ನಿರ್ಗಮನದ ಹಾದಿ ಹಿಡಿಯಬೇಕು. ಅಲ್ಲಿಂದ ಸರ್ವೀಸ್ ರಸ್ತೆಯಲ್ಲಿ 3 ಕಿ.ಮೀ. ಬಂದರೆ ಜಿಲ್ಲಾ ಕೇಂದ್ರವಾದ ರಾಮನಗರ ಸಿಗುತ್ತದೆ. ಹಳೆ ಬಿ.ಎಂ. ರಸ್ತೆಯಲ್ಲಿ ಬಂದು ಎಪಿಎಂಸಿ ಪಕ್ಕದ ರಸ್ತೆಯಲ್ಲಿ 1 ಕಿ.ಮೀ. ಮುಂದಕ್ಕೆ ಸಾಗಿದರೆ ರಂಗರಾಯರದೊಡ್ಡಿ ಕೆರೆ ಸಿಗುತ್ತದೆ.
ರಂಗರಾಯರದೊಡ್ಡಿ ಕೆರೆಗೆ ಹೋಗುವ ಮಾರ್ಗಕ್ಕೆ ಇಲ್ಲಿ ಕ್ಲಿಕ್ಕಿಸಿ
ರಾಮನಗರ ತಾಲ್ಲೂಕಿನ ಕೈಗಾರಿಕಾ ಪ್ರದೇಶವಾದ ಬಿಡದಿ ಪಟ್ಟಣದ ಹೊರವಲಯದ ರಮ್ಯ ಮನೋಹರ ತಾಣವಾದ ನಲ್ಲಿಗುಡ್ಡೆ ಕೆರೆಯಲ್ಲಿ ವಾರದ ಹಿಂದೆಯಷ್ಟೇ ಜಲಕ್ರೀಡೆಗಳಿಗೆ ಚಾಲನೆ ಸಿಕ್ಕಿದೆ.ರಾಜಧಾನಿ ಸಮೀಪವೇ ಇರುವ ಕೆರೆಗೆ ಬೆಂಗಳೂರಿನಿಂದಲೂ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಮೀನುಗಾರಿಕೆ ಜೊತೆಗೆ ವಾಯುವಿಹಾರಕ್ಕೆ ಮಾತ್ರ ಸೀಮಿತವಾಗಿದ್ದ ಸುಮಾರು 380 ಹೆಕ್ಟೇರ್ ಪ್ರದೇಶದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ನಲ್ಲಿಗುಡ್ಡೆ ಕೆರೆಯಲ್ಲಿ ಕಯಾಕಿಂಗ್, ಸ್ಪೀಡ್ ಬೋಟ್, ಜೇಟ್ ಸ್ಕೀ(ವಾಟರ್ ಬೈಕ್), ಪೆಡಲ್ ಬೋಟ್, ಬನಾನಾ ಬೋಟ್ನಂತಹ ಕ್ರೀಡೆಗಳನ್ನು ಆರಂಭಿಸಲಾಗಿದೆ.
ಕೆರೆ ಸುತ್ತಲಿನ ಪ್ರದೇಶದ ಮಳೆ ನೀರು ಸ್ವಾಭಾವಿಕವಾಗಿ ಹಳ್ಳ-ಕೊಳ್ಳಗಳ ಮೂಲಕ ನಲ್ಲಿಗುಡ್ಡ ಕೆರೆಗೆ ಹರಿದು ಬರುತ್ತದೆ. ಕೆರೆಗೆ 25 ಅಡಿ ಎತ್ತರದ ಏರಿ ನಿರ್ಮಿಸಲಾಗಿದೆ. ವಿಶಾಲವಾಗಿರುವ ಕೆರೆಯ ನೋಟ ವಿಹಂಗಮವಾಗಿದೆ. ಕೆರೆ ಏರಿ ಮೇಲೆ ಬೆಳಿಗ್ಗೆ ಸೂರ್ಯೋದಯ ಮತ್ತು ಸಂಜೆ ಸೂರ್ಯಾಸ್ತದ ಸಂದರ್ಭದಲ್ಲಿ ಕೆರೆಯನ್ನು ಕಣ್ತುಂಬಿಕೊಳ್ಳುವುದು ಕಣ್ಣಿಗೆ ಹಬ್ಬವೆನಿಸುತ್ತದೆ. ಏರಿಕ ಕೆಳಗಿರುವ ಸಾಲುಮರಗಳ ಹಾದಿಯು ಫೋಟೊಶೂಟ್ಗೆ ಹೇಳಿ ಮಾಡಿಸಿದಂತಿದೆ.
ತಲುಪುವುದು ಹೇಗೆ?: ಬೆಂಗಳೂರಿನಿಂದ ನಲ್ಲಿಗುಡ್ಡೆ ಕೆರೆಯು 30 ಕಿ.ಮೀ. ದೂರದಲ್ಲಿದೆ. ರಾಜಧಾನಿಯಿಂದ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊರಟರೆ ಬಿಡದಿ ಹೊರವಲಯದ ಲಕ್ಷ್ಮಿಸಾಗರ ಗೇಟ್ ಬಳಿ ಸರ್ವೀಸ್ ರಸ್ತೆಗೆ ತಿರುವು ತೆಗೆದುಕೊಳ್ಳಬೇಕು. ಅಲ್ಲಿಂದ ಬಿಡದಿ ಪಟ್ಟಣಕ್ಕೆ ಬಂದು ನಲ್ಲಿಗುಡ್ಡೆ ರಸ್ತೆ ಮೂಲಕ 2 ಕಿ.ಮೀ ಸಾಗಿದರೆ ಕೆರೆ ಸಿಗುತ್ತದೆ. ನಲ್ಲಿಗುಡ್ಡೆ ಕೆರೆಗೆ ಹೋಗುವ ಮಾರ್ಗ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಪ್ರವಾಸೋದ್ಯಮ ಇಲಾಖೆ ವತಿಯಿಂದ ಜಿಲ್ಲೆಯ ಮೂರು ಕಡೆ ಆರಂಭಿಸಿರುವ ಜಲಕ್ರೀಡೆಗಳ ಟೆಂಡರ್ ಅನ್ನು ಖಾಸಗಿಯವರಿಗೆ ನೀಡಲಾಗಿದೆ. ಇಲಾಖೆಗೆ ನಿಗದಿತ ಮೊತ್ತ ಪಾವತಿಸಿರುವ ಟೆಂಡರ್ದಾರರು ಪ್ರತಿ ಕ್ರೀಡೆಗೆ ಶುಲ್ಕ ನಿಗದಿಪಡಿಸಿದ್ದಾರೆ. ವಿವಿಧ ಕ್ರೀಡೆಗಳಿಗೆ ಕನಿಷ್ಠ ₹100ರಿಂದ ಗರಿಷ್ಠ ₹500ರವರೆಗೆ ನಿಗದಿಪಡಿಸಿರುವ ಶುಲ್ಕ ಪ್ರವಾಸಿಗರ ಕೈಗೆಟುಕುವಂತಿದೆ. ಅದೇ ಸಮುದ್ರ ತೀರಗಳಲ್ಲಿ ಸೇರಿದಂತೆ ಕೆಲ ನದಿಗಳಲ್ಲಿ ನಡೆಸುವ ಜಲಕ್ರೀಡೆಗಳಿಗೆ ಸಾವಿರ ದಾಟುವ ಶುಲ್ಕಕ್ಕೆ ಹೋಲಿಸಿದರೆ, ಜಿಲ್ಲೆಯಲ್ಲಿ ಅತಿ ಕಡಿಮೆ ಶುಲ್ಕ ಇದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಡಿ. ರವಿಕುಮಾರ್ ತಿಳಿಸಿದರು.
ಮೂರು ಸ್ಥಳಗಳಲ್ಲಿ ಜಲಕ್ರೀಡೆಗಳಲ್ಲಿ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ಬರುತ್ತದೆ. ಅದರ ಬೆನ್ನಲ್ಲೇ ಹಾರೋಹಳ್ಳಿ ತಾಲ್ಲೂಕಿನ ರಾವುತ್ತನಹಳ್ಳಿ ಕೆರೆ, ಮಾಗಡಿ ತಾಲ್ಲೂಕಿನ ಮಂಚನಬೆಲೆ ಜಲಾಶಯ ಹಾಗೂ ವೈ.ಜಿ. ಗುಡ್ಡ ಕೆರೆಯಲ್ಲಿ ಸಹ ಜಲಕ್ರೀಡೆ ಆರಂಭಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.