
‘ರಂಗೀನ್ ಮಹಲ್’ ಒಳಭಾಗ
–ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ
ಬೀದರ್: ಇದರ ಒಳಹೊಕ್ಕರೆ ಸಾಕು ಕಲಾಕೃತಿಗಳು. ಗೋಡೆಗಳ ಮೇಲೆಲ್ಲಾ ಬಣ್ಣ ಚೆಲ್ಲಿದ ಅನುಭವ. ನೋಡುತ್ತಿದ್ದರೆ ಎರಡು ಕಣ್ಣುಗಳು ಸಾಲದು.
ಬೀದರ್ ನಗರದ ಬಹಮನಿ ಕೋಟೆಯ ಮುಖ್ಯ ಪ್ರವೇಶ ದ್ವಾರದಿಂದ ಒಳ ಪ್ರವೇಶಿಸಿದರೆ ಕಣ್ಣಿಗೆ ಎದುರಾಗುವುದು ‘ಗುಂಬಜ್ ದರ್ವಾಜ್’. ಇದನ್ನು ದಾಟಿ ಎಡಬದಿಯಲ್ಲಿ ಮೆಟ್ಟಿಲುಗಳನ್ನು ಹತ್ತಿಕೊಂಡು ಮೇಲೆ ಹೋದರೆ ಕಣ್ಣಿಗೆ ರಾಚುವುದೇ ‘ರಂಗೀನ್ ಮಹಲ್’.
ಇದರ ಹೆಸರೇ ಹೇಳುವಂತೆ ಇದೊಂದು ಬಣ್ಣದ ಅರಮನೆ. ಇದರ ಹೊರಭಾಗ ಕಟ್ಟಿಗೆಯ ಕೆತ್ತನೆಗಳು, ವಿಶಿಷ್ಟ ವಿನ್ಯಾಸದಿಂದ ಕೂಡಿವೆ. ಕಟ್ಟಿಗೆ ಕೆತ್ತನೆಗಳ ನಡುವೆ ಚಿನ್ನದ ಸ್ಪರ್ಶ ನೀಡಲಾಗಿದ್ದು, ಇವುಗಳ ಸೌಂದರ್ಯ ಹೆಚ್ಚಿಸಿವೆ.
ಬಣ್ಣದ ಟೈಲುಗಳು ಇಲ್ಲಿನ ಗೋಡೆಗಳನ್ನು ಆವರಿಸಿಕೊಂಡಿವೆ. ಹಳದಿ, ನೀಲಿ, ಹಸಿರು ಮತ್ತು ಬಿಳಿ ವರ್ಣದ ತುಣುಕುಗಳು ಗೋಡೆಗಳ ಮೇಲೆ ರಂಗೋಲಿ ಬಿಡಿಸಿದಂತಹ ಅನುಭವ. ಕಣ್ಣು ಹಾಯಿಸಿದೆಲೆಲ್ಲಾ ಬಣ್ಣದ ಚಿತ್ತಾರ. ಕಲಾತ್ಮಕವಾಗಿ ಕಾವ್ಯದ ಸಾಲುಗಳನ್ನು ಕೂಡ ಇದರಲ್ಲಿ ಕೆತ್ತನೆ ಮಾಡಿರುವುದು ವಿಶೇಷ.
ಗೋಡೆಯ ಮೇಲೆ ರಂಗೋಲಿಯಂತಹ ಕಲಾಕೃತಿ
ಹೂದಾನಿಗಳು, ನವಿಲುಗಳು, ವೃತ್ತ, ಆಯತ, ಚೌಕ ಹೀಗೆ ವೈವಿಧ್ಯಮಯ ವಿನ್ಯಾಸಗಳು ಗಮನ ಸೆಳೆಯುತ್ತವೆ. ಬಣ್ಣ ಬಣ್ಣದ ಟೈಲುಗಳನ್ನು ಕೂಡಿಸಿ ವರ್ಣರಂಜಿತ ಸ್ಪರ್ಶ ನೀಡಲಾಗಿದೆ. ಇತಿಹಾಸಕಾರರ ಪ್ರಕಾರ, ಪರ್ಶಿಯನ್ ಮತ್ತು ಭಾರತೀಯ ಕಲಾವಿದರು ಸೇರಿ ಮಾಡಿದ ಕಟ್ಟಿಗೆ ಕೆಲಸ ಅವರ ಕಸುಬುಗಾರಿಕೆಗೆ ಸಾಕ್ಷಿ. ಇನ್ನೊಂದು ಮಾತು ಕೂಡ ಇದೆ. ಪರ್ಶಿಯನ್ ಕಲಾವಿದರ ಕಲ್ಪನೆ–ಯೋಜನೆಗಳನ್ನು ಸಾಕಾರಗೊಳಿಸಿದವರು ಭಾರತದ ಕಲಾವಿದರು. ಇರಾನಿನ ವಿನ್ಯಾಸದೊಂದಿಗೆ ಚಾಲುಕ್ಯ ವಾಸ್ತುಶಿಲ್ಪ ಮತ್ತು ಜಾನಪದೀಯ ಅಂಶಗಳು ಕಟ್ಟಿಗೆ ಕೆತ್ತನೆಯಲ್ಲಿ ಕಾಣಸಿಗುತ್ತವೆ.
ಇಲ್ಲಿನ ಪುಟ್ಟ ಕೋಣೆಯೊಂದು ಅಪೂರ್ವ ಕಲಾ ಲೋಕಕ್ಕೆ ಸಾಕ್ಷಿ. ಕಪ್ಪೆ ಚಿಪ್ಪು ಬಳಸಿಕೊಂಡು ಅದಕ್ಕೆ ಕಲಾವಿದರು ಸ್ಪರ್ಶ ನೀಡಿದ್ದಾರೆ. ಅವರ ಕೌಶಲ, ಜಾಣ್ಮೆಗೆ ಇದು ಸಾಕ್ಷಿ. ‘ಪ್ರತಿಯೊಂದು ಬೆಲೆ ಬಾಳುವ ಮುತ್ತು, ಪ್ರೀತಿಯಿಂದ ಕಪ್ಪೆ ಚಿಪ್ಪಿನಲ್ಲಿ ಅಂಟಿಕೊಂಡಿರುವಂತೆ ನಿನ್ನ ಆಸ್ಥಾನದಲ್ಲಿ ದಾನವೆಂಬ ಕೊಡುಗೆ ಅಂಟಿಕೊಂಡಿದೆ. ಯಾರೇ ಆಗಲಿ ನಿನ್ನ ಬಾಗಿಲೊಳಗೆ ಪ್ರವೇಶಿಸಿದಾಗ ಪ್ರೀತಿಯಿಂದ ಪುಳಕಗೊಳ್ಳುತ್ತಾರೆ. ನಿನ್ನ ರಾಜಾಂಗಣ ಮತ್ತು ಮಹಡಿಗಳಿಂದ ಪ್ರೀತಿಯ ಮಳೆ ಸುರಿಯುತ್ತದೆ’ ಎಂಬ ಶಾಸನ ಪದ್ಯ ಕೂಡ ಕಪ್ಪೆ ಚಿಪ್ಪು ಬಳಸಿ ಕೆತ್ತನೆ ಮಾಡಲಾಗಿದೆ.
ರಂಗೀನ್ ಮಹಲ್ ಅರಮನೆ
‘ಸ್ಟಕೋ ಆರ್ಟ್’ ಎಂದು ಕರೆಯಲಾಗುವ ವಿಶಿಷ್ಟ ಮಾದರಿಯ ಉಬ್ಬು ಚಿತ್ರಗಳನ್ನು ಗೋಡೆಯ ಮೇಲೆ ಬಿಡಿಸಲಾಗಿದೆ. ಕೋಣೆಯ ಮೇಲ್ಭಾಗದಲ್ಲಿ ಕಡುನೀಲಿ ಬಣ್ಣದ ಕಲಾಕೃತಿ ಎಂತಹವರನ್ನು ಬೆರಗುಗೊಳಿಸುತ್ತದೆ.
ರಂಗೀನ್ ಮಹಲ್ ಹೊರನೋಟ
ಕೋಟೆಯಲ್ಲಿದ್ದರೂ ಅಪರಿಚಿತ:
‘ರಂಗೀನ್ ಮಹಲ್’ ಅಪರೂಪದ ಸ್ಮಾರಕಗಳಲ್ಲಿ ಒಂದು. ಕೋಟೆಯ ಮಧ್ಯಭಾಗದಲ್ಲಿದ್ದರೂ ಇದು ಅಪರಿಚಿತ ಎಂಬಂತಿದೆ. ಇದನ್ನು ಸಂರಕ್ಷಿತ ಸ್ಮಾರಕವಾಗಿ ಘೋಷಿಸಲಾಗಿದೆ. ಇದು ಬಹಳ ಶಿಥಿಲಗೊಂಡಿರುವುದರಿಂದ ಪ್ರವಾಸಿಗರ ವೀಕ್ಷಣೆಗೆ ಸದ್ಯಕ್ಕೆ ಅವಕಾಶ ಇಲ್ಲ. ಹಂತ ಹಂತವಾಗಿ ಇದನ್ನು ಜೀರ್ಣೊದ್ಧಾರಗೊಳಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ನಿರ್ಧರಿಸಿದೆ. ಹೀಗಾಗಿಯೇ ಇದನ್ನು ಪ್ರವೇಶಿಸುವ ಮುಖ್ಯ ದ್ವಾರಕ್ಕೆ ಬೀಗ ಜಡಿಯಲಾಗಿದೆ.
‘ರಂಗೀನ್ ಮಹಲ್’ ಬೀದರ್ ಕೋಟೆಯ ಪ್ರಮುಖ ಸ್ಮಾರಕ. ಆದಷ್ಟು ಶೀಘ್ರ ಇದರ ಜೀರ್ಣೊದ್ಧಾರ ಕೆಲಸ ಪೂರ್ಣಗೊಳಿಸಬೇಕು. ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಬೇಕು. ಇದರಿಂದ ಪ್ರವಾಸೋದ್ಯಮ ಇನ್ನಷ್ಟು ಬೆಳೆಯಲು ಅನುಕೂಲವಾಗುತ್ತದೆ’ ಎನ್ನುತ್ತಾರೆ ಸ್ಥಳೀಯರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.